ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಹಾರಿದ ಲಂಕಾ ನಾಯಕ!
ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಗೊಟಬಯ ಆಗಮನ. ಇದು ಖಾಸಗಿ ಭೇಟಿ, ರಾಜಾಶ್ರಯ ಕೇಳಿಲ್ಲ ಎಂದ ಸಿಂಗಾಪುರ ಸರ್ಕಾರ
ಮಾಲೆ/ಸಿಂಗಾಪುರ (ಜು.15): ತೀವ್ರ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ನಡುವೆ ಶ್ರೀಲಂಕಾ ಬಿಟ್ಟು ಮಾಲ್ಡೀವ್ಸ್ ಗೆ ಪರಾರಿಯಾಗಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಗುರುವಾರ ಅಲ್ಲಿಂದ ಸಿಂಗಾಪುರಕ್ಕೆ ಆಗಮಿಸಿದ್ದಾರೆ. ಮುಂದೆ ಅವರು ಸೌದಿ ಅರೇಬಿಯಾಗೆ ಹೋಗಲಿದ್ದಾರೆ ಎನ್ನಲಾಗಿದ್ದರೂ ಅದು ದೃಢಪಟ್ಟಿಲ್ಲ. ಗುರುವಾರ ಸಂಜೆ 7 ಗಂಟೆಗೆ ಅವರು ಸೌದಿ ಏರ್ಲೈನ್ಸ್ ವಿಮಾನದಲ್ಲಿ ಸಿಂಗಾಪುರಕ್ಕೆ ಬಂದು ಇಳಿದರು. ಈ ಬಗ್ಗೆ ಮಾತನಾಡಿರುವ ಸಿಂಗಾಪುರ ಸರ್ಕಾರದ ವಕ್ತಾರರು, ‘ರಾಜಪಕ್ಸೆ ಖಾಸಗಿ ಭೇಟಿಗೆ ಎಂದು ಸಿಂಗಾಪುರಕ್ಕೆ ಬಂದಿದ್ದಾರೆ. ಅವರದ್ದು ಸರ್ಕಾರಿ ಭೇಟಿ ಅಲ್ಲ. ಅವರು ರಾಜಕೀಯ ಆಶ್ರಯವನ್ನೂ ಇಲ್ಲಿ ಕೇಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಗೊಟಬಯ, ಪತ್ನಿ ಲೋಮಾ ಹಾಗೂ ತಮ್ಮ ಇಬ್ಬರು ಭದ್ರತಾ ಸಿಬ್ಬಂದಿಗಳ ಜೊತೆಯಲ್ಲಿ ಬುಧವಾರ ರಾತ್ರಿಯೇ ಮಾಲೆಯಿಂದ ಸಿಂಗಾಪುರಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ ಭದ್ರತಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಅವರಿಗೆ ರಾತ್ರಿಯ ವಿಮಾನದಲ್ಲಿ ತೆರಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ತೆರಳಿದರು’ ಎಂದು ಮೂಲಗಳು ಹೇಳಿವೆ.
ದೇಶದಲ್ಲಿ ಭಾರೀ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ರಾಜಪಕ್ಸೆ 3 ದಿನದ ಹಿಂದೆಯೇ ದೇಶ ಬಿಟ್ಟು ಪರಾರಿ ಆಗಿದ್ದರು. ಮಾಲ್ಡೀವ್ಸ್ಗೆ ರಾಜಪಕ್ಸೆ ಪಲಾಯನ ಮಾಡುವ ಕುರಿತು ಮಾಲ್ಡೀವ್ಸ್ ಮಜ್ಲಿಸ್ (ಪಾರ್ಲಿಮೆಂಟ್) ಸ್ಪೀಕರ್ ಮತ್ತು ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಮಾತುಕತೆ ನಡೆಸಿದ್ದರು ಎಂದು ಮಾಲ್ಡೀವ್ಸ್ ರಾಜಧಾನಿ ಮಾಲೆ ಮೂಲಗಳು ತಿಳಿಸಿವೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ
ಗೊಟಬಯ ಖಣ ತೀರಿಸಿದ ಮಾಲ್ಡೀವ್ಸ್ ಮಾಜಿ ಅಧ್ಯ !: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಲಂಕಾದಿಂದ ಮಾಲ್ಡೀವ್ಸ್ ಗೆ ಹಾರಲು ಮಾಲ್ಡೀವ್ಸ್ ಮಾಜಿ ಅಧ್ಯಕ್ಷರೂ ಆದ ಸ್ಪೀಕರ್ ನಶೀದ್ ಸಹಾಯ ಮಾಡಿದ್ದರು. ಅವರ ಮಧ್ಯಸ್ಥಿಕೆಯಿಂದಲೇ ರಾಜಪಕ್ಸೆ ಅವರು ಮಾಲ್ಡೀವ್ಸ್ ಗೆ ಬಂದಿಳಿದರು. ಈ ಮೂಲಕ ಹಿಂದೆ ನಶೀದ್ ದೇಶ ಬಿಡುವ ಪರಿಸ್ಥಿತಿ ಬಂದಾಗ ಆಶ್ರಯ ನೀಡಿದ್ದ ಗೊಟಬಯ ಋುಣ ತೀರಿಸಿದರು ಎಂದು ಸುದ್ದಿಯಾಗಿದೆ.
ಯುಎಇಗೆ ಮೂಲಕ ಅಮೆರಿಕಕ್ಕೆ ಪರಾರಿ ಆಗಲು ಜು.12ರಂದು ವಿಫಲ ಯತ್ನ ನಡೆಸಿದ್ದ ಗೊಟಬಯ ರಾಜಪಕ್ಸೆ, ಬುಧವಾರ 2ನೇ ಪ್ರಯತ್ನದಲ್ಲಿ ಯಶ ಕಂಡರು. ಸೇನಾಪಡೆಗಳ ಮಹಾದಂಡನಾಯಕ ಕೂಡ ಆಗಿರುವ ರಾಜಪಕ್ಸೆ, ತಮ್ಮ ಅಧಿಕಾರ ಬಳಸಿಕೊಂಡು ಸೇನಾ ವಿಮಾನಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಬುಧವಾರ ನಸುಕಿನ ಜಾವವೇ ಅವರು ರಹಸ್ಯವಾಗಿ ಕೊಲಂಬೋದ ಕಟುನಾಯಕೆ ವಿಮಾನ ನಿಲ್ದಾಣದ ಮೂಲಕ ಮಿಲಿಟರಿ ವಿಮಾನ ಏರಿ ಮಾಲ್ಡೀವ್ಸ್ ಗೆ ಪರಾರಿಯಾಗಿದ್ದರು. ‘ಗೊಟಬಯ ರಾಜಪಕ್ಸೆ, ಅವರ ಪತ್ನಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ಜು.13ರ ನಸುಕಿನ ಜಾವ ಮಾಲ್ಡೀವ್ಸ್ ಗೆ ತೆರಳಿದ್ದರು’ ಎಂದು ಖುದ್ದು ಲಂಕಾ ವಾಯುಪಡೆಯೇ ಅಧಿಕೃತ ಪ್ರಕಟಣೆ ಮೂಲಕ ಮಾಹಿತಿ ನೀಡಿತ್ತು.
Sri Lanka Crisis ಪರಾರಿಯಾಗಲ್ಲ ಎಂದಿದ್ರು ಗೊಟಬಯ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜಯಸೂರ್ಯ!
ಇನ್ನು ಬುಧವಾರ ನಸುಕಿನ ಜಾವ 3 ಗಂಟೆಗೆ ರಾಜಪಕ್ಸೆ ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ತಲುಪಿದ್ದರು. ಅಲ್ಲಿ ಮಾಲ್ಡೀವ್ಸ್ ಸರ್ಕಾರದ ಪ್ರತಿನಿಧಿಗಳು ರಾಜಪಕ್ಸೆ ಅವರನ್ನು ಸ್ವಾಗತಿಸಿದರು. ಜೊತೆಗೆ ತಕ್ಷಣವೇ ಅವರನ್ನು ಪೊಲೀಸ್ ಭದ್ರತೆಯಲ್ಲಿ ಅಘೋಷಿತ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಲಾಯ್ತು ಎಂದು ಮಾಲ್ಡೀವ್ಸ್ ನ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಿದ್ದರು. ಸದ್ಯ ಸಿಂಗಾಪುರಕ್ಕೆ ತೆರಳಿರುವ ರಾಜಪಕ್ಸೆ ಅವರು ಅಲ್ಲಿ ‘ರಾಜಾಶ್ರಯ’ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.