ಲಷ್ಕರ್‌-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನ ಆಪ್ತ ಶೇಖ್‌ ಯೂಸುಫ್‌ ಅಫ್ರಿದಿಯನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. 2023ರಿಂದ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಉಗ್ರರ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ನಿಗೂಢ ಹತ್ಯ ಸರಣಿ ಮುಂದುವರೆದಿದೆ.

ಪಾಕಲ್ಲಿ ಭಾರತ ವಿರೋಧಿಗಳ ನಿಗೂಢ ಹತ್ಯೆ

Add Asianetnews Kannada as a Preferred SourcegooglePreferred

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಅಪರಿಚಿತ ಬಂಧೂಕುಧಾರಿಗಳು ಮತ್ತೆ ತಮ್ಮ ಕೈಚಳಕ ತೋರಿದ್ದು, ಲಷ್ಕರ್‌-ಎ-ತೊಯ್ಬಾ ಉಗ್ರಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ನ ಮತ್ತೊಬ್ಬ ಆಪ್ತ ಶೇಖ್‌ ಯೂಸುಫ್‌ ಅಫ್ರಿದಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಬಲಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಈ ಸಂಘಟನೆಯ ಸ್ಥಾಪಕರಲ್ಲಿ ಒಬ್ಬನಾದ ಅಮಿರ್‌ ಹಮ್ಜಾನ ಮೇಲೆ ಲಾಹೋರ್‌ನಲ್ಲಿ ಇದೇ ರೀತಿ ದಾಳಿಯಾಗಿತ್ತು. ಆಗ ಆತ ಗಾಯಗೊಂಡಿದ್ದ.

ಎಲ್‌ಇಟಿಯ ಕಮಾಂಡರ್‌ ಆಗಿದ್ದ ಅಫ್ರಿದಿ ಮೇಲೆ ಅಪರಿಚಿತರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಆತನಿಗೆ ತಪ್ಪಿಸಿಕೊಳ್ಳಲು ಅವಕಾಶ ಸಿಗಲಿಲ್ಲ. ಅತ್ತ ಗುಂಡಿನ ಸದ್ದು ಕೇಳುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಬಂದೂಕುಧಾರಿ ತಪ್ಪಿಸಿಕೊಂಡಿದ್ದಾನೆ ಹಾಗೂ ಅಫ್ರಿದಿ ಪ್ರಾಣ ಕಳೆದುಕೊಂಡಿದ್ದಾನೆ.

2023ರಿಂದಲೂ ಪಾಕಿಸ್ತಾನದಲ್ಲಿ ಉಗ್ರರನ್ನು ಅನಾಮಿಕರು ಈ ರೀತಿ ಗುಂಡಿಕ್ಕಿ ಹತ್ಯೆಗೈಯುತ್ತಿದ್ದಾರೆ. ಈ ವರ್ಷವೊಂದರಲ್ಲೇ ಲಷ್ಕರ್‌, ಮುಜಾಹಿದೀನ್, ಹಿಜ್ಬುಲ್ಲಾದಂತಹ ಸಂಘಟನೆಗಳಿಗೆ ಸೇರಿದ ಸುಮಾರು 30 ಭಯೋತ್ಪಾದಕರ ಹತ್ಯೆ ಮಾಡಲಾಗಿದೆ. ಆದರೆ ಇದರ ಹಿಂದಿರುವವರು ಯಾರು ಎಂಬುದು ಇಂದಿಗೂ ನಿಗೂಢ. ಪಾಕ್‌ನಲ್ಲಿ ಭಾರತಕ್ಕೆ ಬೇಕಾದ ಉಗ್ರರನ್ನು ಹತ್ಯೆಗೈಯುವ ಕಥೆ ಒಳಗೊಂಡಿರುವ ದುರಂಧರ್‌ ಚಿತ್ರ ಇತ್ತೀಚೆಗೆ ಬಿಡುಗಡೆ ಮಾಡಿ ದಾಖಲೆ ಕಲೆಕ್ಷನ್‌ ಮಾಡಿತ್ತು.