Russia Ukraine War: ಸೆರೆಸಿಕ್ಕ ರಷ್ಯಾ ಯೋಧನಿಗೆ ಉಕ್ರೇನಿಗಳಿಂದ ಟೀ, ಬನ್!
*ಸೆರೆಸಿಕ್ಕ ರಷ್ಯಾ ಯೋಧನಿಗೆ ಉಕ್ರೇನಿಗಳಿಂದ ಟೀ, ಬನ್
*ಉಕ್ರೇನ್ ರಷ್ಯಾ ದಾಳಿ ನಡುವೆ ಬಾಂಬ್ ಶೆಲ್ಟರ್ನಲ್ಲೇ ವಿವಾಹ!
*ಉಕ್ರೇನಿನಿಂದ ರಕ್ಷಿಸುವಂತೆ ವಿಡಿಯೋ ಮಾಡಿದ ಗ್ರಾಪಂ ಮುಖ್ಯಸ್ಥೆಗೆ ಸಂಕಷ್ಟ!
ಸೆರೆಸಿಕ್ಕ ರಷ್ಯಾ ಯೋಧನಿಗೆ ಉಕ್ರೇನಿಗಳಿಂದ ಟೀ, ಬನ್: ಸೆರೆಸಿಕ್ಕ ರಷ್ಯಾ ಯೋಧನಿಗೆ ಉಕ್ರೇನಿನ ಜನ ಕುಡಿಯಲು ಟೀ ಮತ್ತು ತಿನ್ನಲು ಬನ್ ನೀಡಿದ್ದಾರೆ. ಅಲ್ಲದೇ ಆತನ ತಾಯಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟಿನ್ನ ಕೌರ್ಯವನ್ನು ನೋಡಿದ್ದೀರಿ. ಉಕ್ರೇನ್ ಜನರ ಸ್ನೇಹಪರತೆಯನ್ನೂ ನೋಡಿ ಎಂದು ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಉಕ್ರೇನ್ ರಷ್ಯಾ ದಾಳಿ ನಡುವೆ ಬಾಂಬ್ ಶೆಲ್ಟರ್ನಲ್ಲೇ ವಿವಾಹ!: ಉಕ್ರೇನಿನ ಮೇಲೆ ರಷ್ಯಾ ಬಾಂಬ್, ಶೆಲ್ಗಳಿಂದ ನಿರಂತರವಾಗಿ ದಾಳಿ ನಡೆಸುತ್ತಿರುವಾಗಲೇ ಒಡೆಸಾದಲ್ಲಿರುವ ಬಾಂಬ್ ಶೆಲ್ಟರ್ನಲ್ಲಿಯೇ ಇಬ್ಬರು ವಿವಾಹವಾಗಿದ್ದಾರೆ.
ಬೆಲಾರಸ್ ಮಾಧ್ಯಮ ಸಂಸ್ಥೆ ವಿವಾಹದ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ವಧುವು ಕೈಯಲ್ಲಿ ಹೂಗುಚ್ಛವನ್ನು ಹಿಡಿದು ನಗುತ್ತ ನಿಂತಿದ್ದಾಳೆ. ಅದೇ ವರನು ಸರಳ ವಿವಾಹ ಸಮಾರಂಭದಲ್ಲಿ ಭಾಗಿಯಾದ ಎಲ್ಲರಿಗೂ ಕೇಕ್ ಬದಲಾಗಿ ಬ್ರೆಡ್ ನೀಡಿ ಅಭಿನಂದನೆ ಸ್ವೀಕರಿಸುತ್ತಿರುವುದನ್ನು ಕಾಣಬಹುದಾಗಿದೆ.
ಉಕ್ರೇನಿನಿಂದ ರಕ್ಷಿಸುವಂತೆ ವಿಡಿಯೋ ಮಾಡಿದ ಗ್ರಾಪಂ ಮುಖ್ಯಸ್ಥೆಗೆ ಸಂಕಷ್ಟ!: ಉತ್ತರ ಪ್ರದೇಶದ ಗ್ರಾಮ ಪಂಚಾಯ್ತಿ ಮುಖ್ಯಸ್ಥೆಯಾಗಿರುವ ವೈಶಾಲಿ ಯಾದವ್ ತಾನು ಉಕ್ರೇನಿನಲ್ಲಿ ಸಿಲುಕಿರುವ ಬಗ್ಗೆ ವಿಡಿಯೋ ಮಾಡಿ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: Russia Ukraine War: ರಷ್ಯಾನೋ? ಉಕ್ರೇನೋ? ನಿಲುವು ಸ್ಪಷ್ಟಪಡಿಸಿ: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಅಮೆರಿಕ ಆಕ್ರೋಶ
ತೇರಾ ಪುರ್ಸಾಯಿಲಿ ಗ್ರಾಮ ಸಭಾ ಮುಖ್ಯಸ್ಥೆಯಾಗಿರುವ ವೈಶಾಲಿ, ‘ನಾನು ಉಕ್ರೇನಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಉಕ್ರೇನಿನಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ನನ್ನನ್ನು ರಕ್ಷಿಸಿ’ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದರು.
ಗ್ರಾಪಂ ಮುಖ್ಯಸ್ಥೆಯಾಗಿರುವ ವೈಶಾಲಿ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವಾಗ ಯಾವುದೇ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಆಕೆಯ ಅನುಪಸ್ಥಿತಿಯಲ್ಲಿ ಗ್ರಾಮಸಭೆಯ ಖಾತೆಯನ್ನು ನಿರ್ವಹಣೆ ನಡೆಸುವ ಬಗ್ಗೆ ಹಾಗೂ ಖಾತೆಯಲ್ಲಿ ಯಾವುದೇ ಹಣಕಾಸಿನ ಅಕ್ರಮ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಸಲು ಹರ್ದೋಯಿ ಮುಖ್ಯ ಅಭಿವೃದ್ಧಿ ಅಧಿಕಾರಿ ಆದೇಶಿಸಿದ್ದಾರೆ.
ಪ್ರಸ್ತುತ ವೈಶಾಲಿ ರೋಮಾನಿಯಾದಲ್ಲಿದ್ದು ಆಕೆಯನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗುವುದು. ನಂತರ ಈ ಕುರಿತು ತನಿಖೆ ಮುಂದುವರೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Russia Ukraine War: ಉಕ್ರೇನ್ ಮೇಲಿನ ದಾಳಿಯ ಗುರಿ ಈಡೇರಿಸದೆ ಬಿಡಲ್ಲ: ಪುಟಿನ್ ಶಪಥ
ಅಂತಾರಾಷ್ಟ್ರೀಯ ಸ್ಪರ್ಧೆಗಳಿಂದ ರಷ್ಯಾದ ಬೆಕ್ಕುಗಳಿಗೆ ಕೊಕ್: ಉಕ್ರೇನಿನ ಮೇಲೆ ದಾಳಿ ನಡೆಸಿದ ರಷ್ಯಾದ ವಿರುದ್ಧ ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳು ಹಲವಾರು ನಿರ್ಬಂಧಗಳನ್ನು ಹೇರುತ್ತಿವೆ. ಇದೇ ವೇಳೆ ಕೆಲವು ನಿರ್ಬಂಧವನ್ನು ರಷ್ಯಾದ ಬೆಕ್ಕುಗಳ ಮೇಲೂ ಹೇರಲಾಗಿದೆ.
ಅಂತಾರಾಷ್ಟ್ರೀಯ ಬೆಕ್ಕುಗಳ ಫೆಡರೇಶನ್ ಆಯೋಜಿಸಿದ ಸ್ಪರ್ಧೆ ಹಾಗೂ ಕಾರ್ಯಕ್ರಮಗಳಲ್ಲಿ ರಷ್ಯಾದ ಬೆಕ್ಕುಗಳು ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಬೆಕ್ಕುಗಳ ಫೆಡೆರೇಶನ್ ನಿರ್ವಹಿಸುವ ಪೆಡಿಗ್ರೀ ಪುಸ್ತಕದಲ್ಲಿ ನೋಂದಾಯಿಸಲಾದ ರಷ್ಯನ್ ತಳಿಯ ಯಾವುದೇ ಬೆಕ್ಕುಗಳನ್ನು ಇತರೆ ರಾಷ್ಟ್ರಗಳು ಆಮದು ಮಾಡಿಕೊಳ್ಳುವಂತಿಲ್ಲ ಎಂದು ಫೆಡೆರೇಶನ್ ಆದೇಶ ಹೊರಡಿಸಿದೆ.
ಉಕ್ರೇನ್ ಸುದ್ದಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ರೇಡಿಯೋ ಕೇಂದ್ರ ಬಂದ್: ಉಕ್ರೇನಿನ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ವಿಮರ್ಶಾತ್ಮಕವಾಗಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ಪÜ್ರಗತಿಪರ ರೇಡಿಯೊ ಕೇಂದ್ರ ಎಖೋ ಮೊಸ್ಕವಿಯನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ರೇಡಿಯೋ ಕೇಂದ್ರದ ಮುಖ್ಯಸ್ಥ ಗುರುವಾರ ಆರೋಪಿಸಿದ್ದಾರೆ.
ರಷ್ಯಾ ಸರ್ಕಾರ ಉಕ್ರೇನಿನ ಮೇಲಿನ ದಾಳಿಯನ್ನು ‘ಕೇವಲ ಸೇನಾ ಕಾರ್ಯಾಚರಣೆ’ ಎಂದು ಕರೆದಿದ್ದು, ರಷ್ಯಾದ ಭದ್ರತೆಗೆ ಅಪಾಯಕಾರಿಯೆನಿಸುವ ಉಕ್ರೇನಿನ ಸೇನಾನೆಲೆಗಳನ್ನು ಮಾತ್ರ ನಾಶಪಡಿಸುವ ಉದ್ದೇಶದಿಂದ ಇದನ್ನು ನಡೆಸಲಾಗಿದೆ ಎಂದು ಹೇಳಿಕೆ ನೀಡಿತ್ತು. ಮಾಧ್ಯಮಗಳು ಇದೇ ನಿಲುವಿನೊಂದಿಗೆ ಸುದ್ದಿಯನ್ನು ಪ್ರಸಾರ ಮಾಡಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿತ್ತು.
ಇದನ್ನು ಉಲ್ಲಂಘಿಸಿ ವಿಮರ್ಶಾತ್ಮಕವಾಗಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಆದೇಶದಂತೆ ಎಖೋ ಮಾಸ್ಕ್ವಿ ರೇಡಿಯೋ ಕೇಂದ್ರ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದ ಮೇಲೆ ಮಾಚ್ರ್ 3 ರಿಂದ ನಿರ್ಬಂಧ ಹೇರಲಾಗಿದೆ.
ರಷ್ಯಾದ ಸೇನಾ ಕಾರ್ಯಾಚರಣೆ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮಾಧ್ಯಮ ಸಂಪಾದಕರಿಗೆ 15 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವ ಕಾನೂನನ್ನು ರಷ್ಯಾ ಶೀಘ್ರವೇ ಹೊರಡಿಸಲಿದೆ ಎನ್ನಲಾಗಿದೆ.