Asianet Suvarna News Asianet Suvarna News

ಹಬ್ಬಕ್ಕೆ ದೇಶಿ ನಿರ್ಮಿತ ವಸ್ತುಗಳ ಖರೀದಿಗೆ ಜನರ ಒಲವು: ಚೀನಾಗೆ ಭಾರಿ ಹೊಡೆತ

ಪ್ರಧಾನಿ ನರೇಂದ್ರ ಮೋದಿ ಅವರ ವೋಕಲ್‌ ಫಾರ್‌ಲೋಕಲ್ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನಗಳು ಫಲ ನೀಡಿದ್ದು, ದೇಶದ ಜನರು ಹಬ್ಬದ ಸಂದರ್ಭದಲ್ಲಿ ಸ್ಥಳೀಯ ವಸ್ತುಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡತೊಡಗಿದ್ದಾರೆ.

People interested to by domestically made goods on Deepavali its a Big blow to China Market akb
Author
First Published Nov 10, 2023, 10:59 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೋಕಲ್‌ ಫಾರ್‌ಲೋಕಲ್ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನಗಳು ಫಲ ನೀಡಿದ್ದು, ದೇಶದ ಜನರು ಹಬ್ಬದ ಸಂದರ್ಭದಲ್ಲಿ ಸ್ಥಳೀಯ ವಸ್ತುಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡತೊಡಗಿದ್ದಾರೆ. ಪರಿಣಾಮ ಧನ್ ತೆರಾಸ್‌ ಮತ್ತು ದೀಪಾವಳಿ ವೇಳೆ ಚೀನಾದ ವಸ್ತುಗಳ ಖರೀದಿಗೆ ಭಾರೀ ಪೆಟ್ಟು ಬಿದ್ದಿದೆ. ಜನರಲ್ಲಿನ ಈ ಬದಲಾವಣೆಯಿಂದಾಗಿ ಈ ಹಬ್ಬದ ಸಮಯವೊಂದರಲ್ಲೇ ಚೀನಾಕ್ಕೆ ಕನಿಷ್ಠ 1 ಲಕ್ಷ ಕೋಟಿ ರೂ.ನಷ್ಟು ವಹಿವಾಟು ನಷ್ಟವಾಗುತ್ತಿದೆ ಎಂದು ಅಖಿಲ ಭಾರತ ಮಾರಾಟಗಾರರ ಸಂಘದ ಅಧ್ಯಕ್ಷ ಪ್ರವೀಣ್ ಖಾಂಡೇಲ್‌ವಾಲ್ ಹೇಳಿದ್ದಾರೆ.

ಹಬ್ಬದ ಸಮಯದಲ್ಲಿ ಭಾರತೀಯರು ಚಿನ್ನ(Gold), ಬೆಳ್ಳಿಯ (Silver) ಆಭರಣ, ಅಡುಗೆ ಮನೆ ಸಾಮಾಗ್ರಿಗಳು, ವಾಹನಗಳು, ಗೃಹೋಪಕರಣ ವಸ್ತುಗಳು, ಪಿಂಗಾಣಿ ಪಾತ್ರೆಗಳು ಮತ್ತು ಇತರ ವಸ್ತುಗಳನ್ನು ಖರೀದಿಸುತ್ತಾರೆ. ಪ್ರತಿ ಬಾರಿಯೂ ಚೀನಾದ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು. ಆದರೆ ಈ ಬಾರಿ ಜನ ಭಾರತದ ವಸ್ತುಗಳನ್ನು ಕೇಳಿ ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

'ಸುರಕ್ಷಿತವಾದ ದೇಶ' ಪಟ್ಟಿಗೆ ಭಾರತ: ಬ್ರಿಟನ್ ನಿರ್ಧಾರ

ಲಂಡನ್: ಅಕ್ರಮ ವಲಸಿಗರು ಭಾರತದಿಂದ ಬ್ರಿಟನ್ನಿಗೆ ಪ್ರವೇಶಿಸಿ ಸರ್ಕಾರದ ಆಶ್ರಯ ಕೇಳುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತವನ್ನು 'ಸುರಕ್ಷಿತ ದೇಶ' ಪಟ್ಟಿಗೆ ಸೇರಿಸಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ. ಭಾರತದ ಜೊತೆ ಜಾರ್ಜಿಯಾ ದೇಶವನ್ನು ಕೂಡ ಈ ಪಟ್ಟಿಗೆ ಸೇರಿಸಲಿದೆ.

ಸಾಕಷ್ಟು ಸುರಕ್ಷತೆಯಿರುವ ದೇಶದವರು ಕೂಡ ತಮ್ಮ ದೇಶದಲ್ಲಿ ಸುರಕ್ಷತೆಯಿಲ್ಲ ಎಂಬ ನೆಪ ಹೇಳಿ ಬ್ರಿಟನ್ನಿಗೆ ಅಕ್ರಮವಾಗಿ ಪ್ರವೇಶಿಸಿ ಸರ್ಕಾರದ ಬಳಿ ಆಶ್ರಯ ಕೇಳುತ್ತಾರೆ. ಅಂತಹವರಿಗೆ ಇನ್ನು ಬ್ರಿಟನ್ನಿನ ಬಾಗಿಲನ್ನು ಮುಚ್ಚಲಿದೆ. ಜೊತೆಗೆ, ಭಾರತದಿಂದ ಹೀಗೆ ಅಕ್ರಮವಾಗಿ ಬಂದವರನ್ನು ಮರಳಿ ಕಳುಹಿಸುವುದಕ್ಕೂ ಇದು ಬ್ರಿಟನ್ನಿಗೆ ನೆರವಾಗಲಿದೆ. ಹೌಸ್‌ ಆಫ್ ಕಾಮನ್ಸ್‌ನಲ್ಲಿ ಬುಧವಾರ ಈ ಕುರಿತ ಮಸೂದೆಯನ್ನು ಮಂಡಿಸಲಾಯಿತು. 'ನೀವು ಅಕ್ರಮವಾಗಿ ಬಂದರೆ ಬ್ರಿಟನ್ನಿನಲ್ಲಿ ನೆಲೆಸಲು ಹಕ್ಕು ಮತ್ತು ಜಾಗ ಇಲ್ಲ' ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ 'ಸುರಕ್ಷಿತ ದೇಶ'ಗಳ ಪಟ್ಟಿಯನ್ನು ವಿಸ್ತರಿಸುತ್ತಿದ್ದೇವೆ. ಎಂದು ಬ್ರಿಟನ್ ಗೃಹ ಸಚಿವೆ ಸೂಯೆಲ್ಲಾ ಬ್ರೇವರ್‌ಮನ್‌ ಹೇಳಿದರು.

4 ಕೋಟಿ ಜನರಿಗೆ ಮನೆ ಕಟ್ಟಿ ಕೊಟ್ಟೆ, ನನಗಾಗಿ ನಾ ಏನೂ ಮಾಡಿಲ್ಲ
ಸಾತ್ನಾ: ಸರ್ಕಾರದ ವತಿಯಿಂದ ಬಡವರಿಗಾಗಿ 4 ಕೋಟಿ ಕಾಂಕ್ರೀಟ್ ಮನೆ ನಿರ್ಮಿಸಿ ಕೊಡಲಾಗಿದೆ. ಆದರೂ ನನಗಾಗಿ ನಾನು ಮನೆಯನ್ನು ನಿರ್ಮಾಣ ಮಾಡಿಕೊಂಡಿಲ್ಲ. ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. 

ಮಧ್ಯ ಪ್ರದೇಶದಲ್ಲಿ (Madhya Pradesh) ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರು, 'ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾತ್ನಾದಲ್ಲಿ 1.32 ಲಕ್ಷ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಅಲ್ಲದೆ ಹೊಸ ಸಂಸತ್ ಭವನ ನಿರ್ಮಿಸುವುದರ ಜೊತೆಗೆ 30 ಸಾವಿರ ಪಂಚಾಯಿತಿ ಕಟ್ಟಡಗಳನ್ನು ನಿರ್ಮಿಸಿದ್ದೇವೆ. ಇಷ್ಟೆಲ್ಲಾ ಆದರೂ ಸ್ವಂತಕ್ಕಾಗಿ ಏನೂ ಮಾಡಿಕೊಂಡಿಲ್ಲ ಎಂದು ಹೇಳಿದರು. 

ಇದೇ ವೇಳೆ ಮಧ್ಯಪ್ರದೇಶದಲ್ಲಿ ಒಂದು ಮತ ನೀಡಿದರೆ ಅದು 'ತ್ರಿಶಕ್ತಿ'ಯಾಗಿ ಬದಲಾಗಲಿದೆ, ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕೇಂದ್ರದಲ್ಲಿ ಮೋದಿ ಕೈ ಬಲಗೊಳ್ಳಲಿದೆ ಮತ್ತು ಭ್ರಷ್ಟಾಚಾರ ನಡೆಸುತ್ತಿರುವ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರ ಇಡಬಹುದಾಗಿದೆ ಎಂದು ಅವರು ಹೇಳಿದರು

Follow Us:
Download App:
  • android
  • ios