ಲಾಡೆನ್ ಸ್ತುತಿಸುವ ಪಾಕ್ನಿಂದ ಶಾಂತಿ ಮಾತು: ಭಾರತ ಕಿಡಿ!
* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ಏಟು
* ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಶಾಂತಿ ಮತ್ತು ಭದ್ರತೆಯ ಕುರಿತು ಮಾತು
* ಲಾಡೆನ್ ಸ್ತುತಿಸುವ ಪಾಕ್ನಿಂದ ಶಾಂತಿ ಮಾತು
ನ್ಯೂಯಾರ್ಕ್(ಅ.06): ವಿಶ್ವಸಂಸ್ಥೆಯಲ್ಲಿ(United Nations) ಪಾಕಿಸ್ತಾನದ(Pakistan) ಪ್ರತಿನಿಧಿ ಶಾಂತಿ ಮತ್ತು ಭದ್ರತೆಯ ಕುರಿತು ಮಾತನಾಡುತ್ತಾರೆ ಆದರೆ ಪಾಕಿಸ್ತಾನದ ಪ್ರಧಾನಿ ಒಸಾಮನಂತಹ(Osama Bin Laden) ಉಗ್ರಗಾಮಿಗಳನ್ನು ಹುತಾತ್ಮರು ಎಂದು ಸ್ತುತಿಸುತ್ತಾರೆ ಎಂದು ಭಾರತ(India) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯ ವೇಳೆ ಹೇಳಿದೆ.
ಸಾಮಾನ್ಯ ಸಭೆಯ 76ನೇ ಅಧಿವೇಶನದಲ್ಲಿ(76th UN General Assembly session) ಪಾಕಿಸ್ತಾನ ಕಾಶ್ಮೀರ ಕುರಿತು ಮಾಡಿದ ಆರೋಪಕ್ಕೆ ತಮ್ಮ ಉತ್ತರಿಸುವ ಹಕ್ಕಿನಡಿ ವಿಶ್ವಸಂಸ್ಥೆಯ ಭಾರತದ ಕಾಯಂ ನಿಯೋಗದ ಕೌನ್ಸೆಲರ್ ಎ. ಅಮರನಾಥ್ ದಿಟ್ಟಎದಿರೇಟು ನೀಡಿದರು.
‘ಜಾಗತಿಕ ಭಯೋತ್ಪಾದನೆಯ ಕೇಂದ್ರವಾದ, ಹಾಗೂ ತನ್ನ ನೆರೆಯ ರಾಷ್ಟ್ರಗಳಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಕುಮ್ಮಕ್ಕು ನೀಡುವ ಪಾಕಿಸ್ತಾನ, ವಿಶ್ವಸಂಸ್ಥೆಯ ನಿಯಮಗಳನ್ನು ಪಾಲಿಸುತ್ತಿಲ್ಲ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಶಾಂತಿ ಭದ್ರತೆ ಕುರಿತು ಭಾಷಣ ಮಾಡುತ್ತಾರೆ ಆದರೆ ಜಗತ್ತಿನ ಶಾಂತಿ ಕದಡಿದ ಒಸಾಮ ಬಿನ್ ಲಾಡೆನ್ ತರಹದ ಉಗ್ರರನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹುತಾತ್ಮರು ಎಂದು ಶ್ಲಾಘಿಸುತ್ತಾರೆ’ ಎಂದು ಕಿಡಿಕಾರಿದರು.
‘ಕಾಶ್ಮೀರ ಹಾಗೂ ಲಡಾಕ್ನಲ್ಲಿ ಹಲವು ಉಗ್ರಗಾಮಿ ಚಟುವಟಿಕೆಗಳನ್ನು ಪಾಕಿಸ್ತಾನ ನಡೆಸಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭೂಭಾಗ ಒಳಗೊಂಡಂತೆ ಕಾಶ್ಮೀರ ಸಂಪೂರ್ಣವಾಗಿ ಭಾರತಕ್ಕೆ ಸೇರಿದ್ದು. ಈ ಕೂಡಲೇ ಪಾಕಿಸ್ತಾನ ಈ ಭೂಭಾಗದಿಂದ ಹೊರ ಹೋಗಬೇಕು ಎಂದು ಭಾರತ ಆಗ್ರಹಿಸುತ್ತದೆ.