ಬುಧವಾರ ಪಾಕಿಸ್ತಾನದ ಖೈಬರ್‌ ಪಖ್ತುಂಕ್ವಾದ ಲಕ್ಕಿ ಮರ್ವಾತ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಆರು ಮಂದಿ ಪೊಲೀಸರು ಸಾವು ಕಂಡಿದ್ದರು. ಪಾಕಿಸ್ತಾನದ ತಹ್ರೀಕ್‌-ಇ-ತಾಲಿಬಾನ್ ಸಂಘಟನೆ ಈ ದಾಳಿಯ ಹೊಣೆ ಹೊತ್ತಿಕೊಂಡಿತ್ತು. 

ಕರಾಚಿ (ನ.17): ಭಯೋತ್ಪಾದನೆ ಪಾಕಿಸ್ತಾನದ ಅತೀದೊಡ್ಡ ಸಮಸ್ಯೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಬುಧವಾರ ಒಪ್ಪಿಕೊಂಡಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಲಕ್ಕಿ ಮಾರ್ವಾಟ್‌ನಲ್ಲಿ ಪೊಲೀಸ್ ವ್ಯಾನ್ ಮೇಲೆ ನಡೆದ ದಾಳಿಯನ್ನು ಪಾಕ್‌ ಪ್ರಧಾನಿ ಖಂಡನೆ ಮಾಡಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್‌ ಜೊತೆ ಸಾಮಾನ್ಯ ಹೋಲಿಕೆ ಹೊಂದಿರುವ ಪಾಕಿಸ್ತಾನದ ತೆಹ್ರಿಕ್‌-ಇ-ತಾಲಿಬಾನ್‌ ಭಯೋತ್ಪಾದಕ ಸಂಘಟನೆ ಇದರ ಹೊಣೆಯನ್ನು ಹೊತ್ತುಕೊಂಡಿದೆ. ಗಸ್ತು ಕಾರ್ಯದಲ್ಲಿದ್ದ ಪೊಲೀಸ್‌ ವ್ಯಾನ್‌ನ ಮೇಲೆ ದಾಳಿ ನಡೆಸಿದ್ದ ತೆಹ್ರಿಕ್‌ ತಾಲಿಬಾನ್‌, ಎಲ್ಲಾ ಆರು ಜನರ ಪೊಲೀಸರ ಸಾವಿಗೆ ಕಾರಣವಾಗಿತ್ತು. ಉದ್ದೇಶಿತ ಸ್ಥಳದಲ್ಲಿ ನಾವು ರೇಡ್‌ ಮಾಡಲು ಹೋಗಿದ್ದಾಗ ಪೊಲೀಸರು ನಮ್ಮನ್ನು ತಡೆದಿದ್ದಲ್ಲದೆ, ನಮ್ಮ ಮೇಲೆ ದಾಳಿ ಕೂಡ ಮಾಡಿದ್ದರು ಎಂದು ತೆಹ್ರಿಕ್‌ ಇ ತಾಲಿಬಾನ್‌ (ಟಿಟಿಪಿ) ಪಾಕಿಸ್ತಾನದ ವಕ್ತಾರ ತಿಳಿಸಿದ್ದಾರೆ. ಸಾವು ಕಂಡ ಪೊಲೀಸರಿಗೆ ಸಂತಾಪ ಸೂಚಿಸಿದ ಪ್ರಧಾನಿ ಶೆಹಬಾಜ್‌ ಷರೀಪ್‌, ಟ್ವಿಟರ್‌ನಲ್ಲಿ ಈ ಕುರಿತಾಗಿ ಬರೆದುಕೊಂಡಿದ್ದಾರೆ. ಭಯೋತ್ಪಾದನೆ ಎನ್ನುವುದು ಪಾಕಿಸ್ತಾನದ ಅತಿದೊಡ್ಡ ಸಮಸ್ಯೆಯಾಗು ಮುಂದುವರಿದಿದೆ ಎಂದು ಅವರು ತಮ್ಮ ಟ್ವಿಟರ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ನಾವುಗಳು ಕನಿಷ್ಠ ಒಂದು ತಪ್ಪನ್ನು ಮಾಡದೇ ಇರೋಣ. ಭಯೋತ್ಪಾದನೆ ಎನ್ನುವುದು ಪಾಕಿಸ್ತಾನದ ಈವರೆಗಿನ ಅತಿದೊಡ್ಡ ಸಮಸ್ಯೆಯಾಗಿ ಕಂಡಿದೆ. ನಮ್ಮ ಸಶಸ್ತ್ರ ಪಡೆಗಳು ಮತ್ತು ಪೊಲೀಸರು ಈ ಪಿಡುಗಿನ ವಿರುದ್ಧ ವೀರಾವೇಶದಿಂದ ಹೋರಾಡಿದ್ದಾರೆ. ಲಕ್ಕಿ ಮಾರ್ವತ್ ನಲ್ಲಿ ಪೊಲೀಸ್ ವ್ಯಾನ್ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಲು ಪದಗಳೇ ಸಾಲದು. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖತಪ್ತ ಕುಟುಂಬಗಳೊಂದಿಗೆ ಇರುತ್ತವೆ ಎಂದು ಷರೀಫ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ಲಕ್ಕಿ ಮಾರ್ವತ್‌ನಲ್ಲಿ ಪೊಲೀಸ್ ಸಿಬ್ಬಂದಿಯ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಘಟನೆಯ ಕುರಿತಾಗಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯ ಕಾರ್ಯದರ್ಶಿ ಮತ್ತು ಐಜಿ ಅವರಿಂದ ವರದಿ ಕೇಳಿದ್ದಾರೆ. "ಫೆಡರಲ್ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ಲಕ್ಕಿ ಮಾರ್ವತ್‌ನಲ್ಲಿ ಪೊಲೀಸ್ ವ್ಯಾನ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮತ್ತು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆಯ ವರದಿಯನ್ನು ಮುಖ್ಯ ಕಾರ್ಯದರ್ಶಿ ಮತ್ತು ಐಜಿ ಖೈಬರ್ ಪಖ್ತುಂಖ್ವಾ ಅವರಿಂದ ಕೇಳಲಾಗಿದೆ. ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿರುವುದಕ್ಕೆ ತೀವ್ರ ದುಃಖ ಮತ್ತು ವಿಷಾದವನ್ನು ವ್ಯಕ್ತಪಡಿಸುತ್ತದೆ ಎಂದು ಅವರ ಕಚೇರಿ ಟ್ವೀಟ್ ಮಾಡಿದೆ.

ಅಫಘಾನ್-ಪಾಕಿಸ್ತಾನ ಗಡಿಯ ಎರಡೂ ಬದಿಗಳಿಂದ ಭಯೋತ್ಪಾದಕರಿಗೆ ಒಮ್ಮೆ ಆಶ್ರಯ ತಾಣವಾಗಿದ್ದ ವಾಯುವ್ಯ ಪಾಕಿಸ್ತಾನದಲ್ಲಿ TTP ವರ್ಷಗಳ ಕಾಲದಿಂದಲೂ ಕಾರ್ಯನಿರ್ವಹಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಪಶ್ಚಿಮ-ಬೆಂಬಲಿತ ಸರ್ಕಾರವನ್ನು ತಾಲಿಬಾನ್‌ನಿಂದ ಹೊರಹಾಕಿದ ಬಳಿಕ ಇಸ್ಲಾಮಾಬಾದ್ ಮತ್ತು ಟಿಟಿಪಿಯನ್ನು ಮಾತುಕತೆಯ ಮೂಲಕ ಶಾಂತಿ ಒಪ್ಪಂದವನ್ನು ತಲುಪಲು ಪ್ರೋತ್ಸಾಹಿಸಿದೆ ಆದರೆ ಮಾತುಕತೆಗಳು ಇಲ್ಲಿಯವರೆಗೆ ಯಾವುದೇ ಫಲಿತಾಂಶವನ್ನು ನೀಡಿಲ್ಲ. ಹಾಗಿದ್ದರೂ ಟಿಟಿಪಿ ಜೊತೆಗಿನ ಕದನ ವಿರಾಮ ಮೇ ತಿಂಗಳಿನಿಂದ ಜಾರಿಯಲ್ಲಿದೆ.