*ಟೀವಿ ಡಿಬೇಟ್‌ಗೆ ಬನ್ನಿ: ಮೋದಿಗೆ ಇಮ್ರಾನ್‌ ಖಾನ್‌ ಆಹ್ವಾನ!*ಭಾರತ-ಪಾಕ್‌ ನಡುವಿನ ಭಿನ್ನಮತ ಬಗೆಹರಿಸಲು ಟೀವಿ ಡಿಬೇಟ್‌*ರಷ್ಯಾದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಆಹ್ವಾನ

ಇಸ್ಲಾಮಾಬಾದ್‌ (ಫೆ. 23) :ಭಾರತ-ಪಾಕಿಸ್ತಾನದ (India-Pakistan) ನಡುವಿನ ಭಿನ್ನಮತಗಳನ್ನು ಬಗೆಹರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ವಿಚಿತ್ರ ಉಪಾಯವೊಂದನ್ನು ಮುಂದಿಟ್ಟಿದ್ದಾರೆ. ಅದೇನೆಂದರೆ- ಪ್ರಧಾನಿ ನರೇಂದ್ರ ಮೋದಿ (PM Narendra Modi) ಜೊತೆ ಟೀವಿ ಡಿಬೇಟ್‌! ಹೌದು, ಭಾರತದ ಪ್ರಧಾನಿ ನರೇಂದ್ರ ಮೋದಿ ಉಭಯ ದೇಶಗಳ ನಡುವಿನ ಭಿನ್ನಮತ ಬಗೆಹರಿಸಿಕೊಳ್ಳಲು ತಮ್ಮ ಜೊತೆಗೆ ಟೀವಿ ಡಿಬೇಟ್‌ಗೆ ಬರಬೇಕು ಎಂದು ಇಮ್ರಾನ್‌ ಖಾನ್‌ ಆಹ್ವಾನಿಸಿದ್ದಾರೆ. 

ಎರಡು ದಿನಗಳ ಭೇಟಿಯಾಗಿ ರಷ್ಯಾಕ್ಕೆ ತೆರಳಿರುವ ಅವರು ಅಲ್ಲಿನ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ‘ಸಂವಾದದ ಮೂಲಕ ಭಿನ್ನಮತ ಬಗೆಹರಿದರೆ ಭಾರತದ 100ಕ್ಕೂ ಹೆಚ್ಚು ಕೋಟಿ ಜನರಿಗೆ ಅನುಕೂಲವಾಗಲಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಮೇಲೆ ಅಘೋಷಿತ ಯುದ್ಧ ನಡೆಸುವ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸುವವರೆಗೂ ಆ ದೇಶದ ಜೊತೆಗೆ ದ್ವಿಪಕ್ಷೀಯ ಮಾತುಕತೆಯಾಗಲೀ ವ್ಯವಹಾರವಾಗಲೀ ಇಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟನಿಲುವು ತಾಳಿದೆ. 

ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪುತ್ರ ಮದ್ಯದ ಕೇಸ್ ನಲ್ಲಿ ಅರೆಸ್ಟ್

ಆದರೆ, ಭಾರತ ಮಾತುಕತೆಗೆ ಬರಬೇಕು ಎಂದು ಪಾಕಿಸ್ತಾನ ಬೇರೆ ಬೇರೆ ರೀತಿಯಲ್ಲಿ ಆಹ್ವಾನಿಸುತ್ತಲೇ ಇದೆ. ಈಗ ಇಮ್ರಾನ್‌ ಖಾನ್‌ ನೇರವಾಗಿ ಪ್ರಧಾನಿಯನ್ನೇ ಟೀವಿ ಡಿಬೇಟ್‌ಗೆ ಆಹ್ವಾನಿಸಿರುವುದು ಕುತೂಹಲ ಮೂಡಿಸಿದೆ.

ಪಾಕಿಸ್ತಾನದ ಈ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಇನ್ನು, ‘ಭಾರತ ಹೇಳುವುದೊಂದು ಮಾಡುವುದೊಂದು ಎಂಬಂತಹ ದೇಶವಾಗಿ ಬದಲಾಗಿದೆ. ಹೀಗಾಗಿ ಆ ದೇಶದ ಜೊತೆಗೆ ನಮ್ಮ ವ್ಯಾಪಾರ ವ್ಯವಹಾರಗಳು ಕನಿಷ್ಠ ಪ್ರಮಾಣಕ್ಕಿಳಿದಿವೆ. ಎಲ್ಲಾ ದೇಶಗಳ ಜೊತೆಗೆ ವಾಣಿಜ್ಯ ವ್ಯವಹಾರ ನಡೆಸಬೇಕು ಎಂಬುದು ನನ್ನ ಸರ್ಕಾರದ ನೀತಿ’ ಎಂದೂ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಭಾರತದೆದುರು ತಲೆಬಾಗಲು ಸಿದ್ಧ: ಪಾಕಿಸ್ತಾನದ ಗಗನಕ್ಕೇರುತ್ತಿರುವ ಹಣದುಬ್ಬರವು ಭಾರತದಿಂದ ಆಮದು ನಿರ್ಬಂಧಗಳ ಬಗ್ಗೆ ಮರುಚಿಂತನೆಯನ್ನು ಮಾಡುವಂತೆ ಮಾಡಿದೆ. ವಾಣಿಜ್ಯ ಮತ್ತು ಹೂಡಿಕೆ ಕುರಿತು ಪ್ರಧಾನಿ ಇಮ್ರಾನ್ ಖಾನ್ ಅವರ ಸಲಹೆಗಾರ ಅಬ್ದುಲ್ ರಜಾಕ್ ದಾವೂದ್ ಅವರು ಭಾರತದೊಂದಿಗಿನ ವ್ಯಾಪಾರವು ಇಂದಿನ ಅಗತ್ಯವಾಗಿದೆ ಮತ್ತು ಇದು ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ಲಾಭದಾಯಕವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hilal-e-Pakistan: ಪೋಲಿಯೊ ನಿರ್ಮೂಲನೆಗೆ ಶ್ರಮಿಸಿದ ಬಿಲ್ ಗೇಟ್ಸ್‌ಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ!

ಪಾಕಿಸ್ತಾನದ ಡಾನ್ ಪತ್ರಿಕೆಯ ವರದಿಯ ಪ್ರಕಾರ, ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಅಬ್ದುಲ್ ರಜಾಕ್ ದಾವೂದ್, 'ವಾಣಿಜ್ಯ ಸಚಿವಾಲಯದ ಮಟ್ಟಿಗೆ, ಭಾರತದೊಂದಿಗೆ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಇದೆ. ಮತ್ತು ನಾವು ಭಾರತದೊಂದಿಗೆ ವ್ಯಾಪಾರ ಮಾಡಬೇಕು ಎಂಬುದು ನನ್ನ ನಿಲುವು. ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಪುನರಾರಂಭಿಸಬೇಕು ಎಂದಿದ್ದಾರೆ.

ಅಬ್ದುಲ್ ರಜಾಕ್ ದಾವೂದ್ ಅವರು ಭಾರತದೊಂದಿಗೆ ವ್ಯಾಪಾರವನ್ನು ಬೆಂಬಲಿಸುತ್ತಾರೆ ಏಕೆಂದರೆ ಅದು ಪಾಕಿಸ್ತಾನಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅವರು, 'ಭಾರತದೊಂದಿಗಿನ ವ್ಯಾಪಾರವು ಎಲ್ಲರಿಗೂ, ವಿಶೇಷವಾಗಿ ಪಾಕಿಸ್ತಾನಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಮತ್ತು ನಾನು ಅದನ್ನು ಬೆಂಬಲಿಸುತ್ತೇನೆ' ಎಂದಿದ್ದಾರೆ. 

ಪಾಕಿಸ್ತಾನದಲ್ಲಿ ಗಗನಕ್ಕೇರುತ್ತಿರುವ ಹಣದುಬ್ಬರ ಮತ್ತು ಜನರ ಮೇಲೆ ವ್ಯತಿರಿಕ್ತ ಪರಿಣಾಮದ ಬಗ್ಗೆ ಮಾತನಾಡಿದ ಅವರು, 'ಈ ವಿಷಯದಲ್ಲಿ ನಾನು ನಿಮ್ಮ ನಿಲುವು ಒಪ್ಪುತ್ತೇನೆ. ಆದರೆ ತೈಲ, ಕಚ್ಚಾ ವಸ್ತು, ಯಂತ್ರೋಪಕರಣಗಳು ಮತ್ತು ಇತರ ಸರಕುಗಳ ಆಮದುಗಳಿಂದಾಗಿ ಈ ಸಮಸ್ಯೆ ಮುಂದುವರಿಯುತ್ತದೆ ಎಂದಿದ್ದಾರೆ. ಇದಕ್ಕೂ ಮೊದಲು, ಪಾಕಿಸ್ತಾನವು ಭಾರತದೊಂದಿಗೆ ವ್ಯಾಪಾರವನ್ನು ಪುನರಾರಂಭಿಸುವ ಬಗ್ಗೆ ಮಾತನಾಡಿತ್ತು ಆದರೆ ಪ್ರತಿಪಕ್ಷಗಳ ವಿರೋಧದಿಂದಾಗಿ, ಇಮ್ರಾನ್ ಸರ್ಕಾರವು ಹಿಂದೆ ಸರಿಯಬೇಕಾಯಿತು.