Pakistan blast: ಪಾಕಿಸ್ತಾನ ರಾಜಧಾನಿಯ ಹೃದಯಭಾಗದಲ್ಲಿ ಸಂಭವಿಸಿದ ಸ್ಫೋಟಕ್ಕೆ ಇಸ್ಲಾಮಾಬಾದ್ ನ್ಯಾಯಾಲಯ ಸಂಕೀರ್ಣದಲ್ಲಿ ನಿಲ್ಲಿಸಿದ್ದ ವಾಹನದೊಳಗೆ ಅಳವಡಿಸಲಾದ ಗ್ಯಾಸ್ ಸಿಲಿಂಡರ್ ಕಾರಣ ಎಂದು ಶಂಕಿಸಲಾಗಿದೆ.
ನವದೆಹಲಿ (ನ.11): ಭಾರತದ ರಾಜಧಾನಿ ನವದೆಹಲಿಯ ಹೃದಯಭಾಗದಲ್ಲಿ ಸ್ಫೋಟ ನಡೆದು 9 ಮಂದು ಸಾವು ಕಂಡ ಒಂದು ದಿನದ ಬಳಿಕ ಮಂಗಳವಾರ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕಾರೊಂದು ಜಖಂಗೊಂಡಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ವಕೀಲರು ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ತಿಳಿಸಿವೆ. ನಿಲ್ಲಿಸಿದ್ದ ವಾಹನದೊಳಗೆ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.
ಇಸ್ಲಾಮಾಬಾದ್ ಜಿಲ್ಲಾ ನ್ಯಾಯಾಲಯದ ಪ್ರವೇಶದ್ವಾರದ ಬಳಿ ಕೆಲಸದ ವೇಳೆಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ಸಂಭವಿಸಿದ ಸ್ಫೋಟವು ನ್ಯಾಯಾಲಯದ ಆವರಣದಲ್ಲಿದ್ದ ವಕೀಲರಲ್ಲಿ ಭೀತಿಯನ್ನುಂಟುಮಾಡಿತು. ಸ್ಫೋಟದ ಶಬ್ದ ಎಷ್ಟು ತೀವ್ರವಾಗಿತ್ತು ಎಂದರೆ ಆರು ಕಿಲೋಮೀಟರ್ ದೂರಕ್ಕೂ ಕೇಳಿಸುತ್ತಿತ್ತು.
ಸ್ಫೋಟದಲ್ಲಿ ಹತ್ತಿರದಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳು ಹಾನಿಗೊಳಗಾದವು. ಗಾಯಗೊಂಡವರಲ್ಲಿ ಹೆಚ್ಚಿನವರು ವಕೀಲರು ಮತ್ತು ನ್ಯಾಯಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿ. ಪೊಲೀಸರು ಇದು ಆತ್ಮಹತ್ಯಾ ದಾಳಿ ಎಂದು ಶಂಕಿಸಿದ್ದಾರೆ.
ಪಾಕಿಸ್ತಾನಕ್ಕೆ ಮುಳ್ಳಾಗಿರುವ ಟಿಟಿಪಿ
ದಕ್ಷಿಣ ವಜಿರಿಸ್ತಾನದ ಕೆಡೆಟ್ ಕಾಲೇಜು ವಾನಾದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದ ದಾಳಿಯನ್ನು ಪಾಕಿಸ್ತಾನಿ ಭದ್ರತಾ ಪಡೆಗಳು ವಿಫಲಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಟಿಟಿಪಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಹಲವಾರು ವರ್ಷಗಳಿಂದ, ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಒಡ್ಡಿರುವ ಬೆದರಿಕೆಯನ್ನು ಪಾಕಿಸ್ತಾನ ಎದುರಿಸುತ್ತಿದೆ. ತಾಲಿಬಾನ್ ಕಾಬೂಲ್ಗೆ ಮರಳಿದಾಗಿನಿಂದ ಪಾಕಿಸ್ತಾನದಲ್ಲಿ ಟಿಟಿಪಿಯ ಚಟುವಟಿಕೆಗಳು ಹೆಚ್ಚಿವೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧಗಳು ಹದಗೆಡುತ್ತಿರುವುದಕ್ಕೆ ಇದು ಪ್ರಮುಖ ಕಾರಣವಾಗಿದೆ, ಅಫ್ಗಾನಿಸ್ತಾನ ಟಿಟಿಪಿ ನಾಯಕರಿಗೆ ಆಶ್ರಯ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ.
ಭಾರತದಲ್ಲಿ ಬಾಂಬ್ ಸ್ಫೋಟ ನಡೆದ ಒಂದು ದಿನದ ಬಳಿಕ ಪಾಕ್ನಲ್ಲಿ ಘಟನೆ
ದೆಹಲಿಯ ಕೆಂಪು ಕೋಟೆ ಬಳಿ ಹುಂಡೈ ಐ20 ಕಾರು ಸ್ಫೋಟಗೊಂಡು 9 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಇಸ್ಲಾಮಾಬಾದ್ನಲ್ಲಿ ಈ ಸ್ಫೋಟ ಸಂಭವಿಸಿದೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಒಳಗೊಂಡ ಭಯೋತ್ಪಾದಕ ಸಂಘಟನೆಯನ್ನು ಭೇದಿಸಿ, ಪೊಲೀಸರು 2,900 ಕಿಲೋಗ್ರಾಂಗಳಷ್ಟು ಐಇಡಿ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡ ದಿನದಂದೇ ಈ ಸ್ಫೋಟ ಸಂಭವಿಸಿದೆ.
