ಹಿಂಸಾರೂಪಕ್ಕೆ ತಿರುಗಿದ ಇಮ್ರಾನ್ ಖಾನ್ ಆಜಾದಿ ಮಾರ್ಚ್, ಯುದ್ಧಭೂಮಿಯಾದ ಪಾಕಿಸ್ತಾನ ರಾಜಧಾನಿ!
ಹಾಲಿ ಪಾಕಿಸ್ತಾನ ಸರ್ಕಾರ ಹಾಗೂ ಅವರ ದುರಾಡಳಿತದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಜಾದಿ ಮಾರ್ಚ್ ಅಥವಾ ಸ್ವಾತಂತ್ರ್ಯ ಮೆರವಣಿಗೆ ನಡೆಸುತ್ತಿದ್ದಾರೆ. ಅವರೊಂದಿಗೆ ಸಾವಿರಾರು ಬೆಂಬಲಿಗರು ಕೂಡ ಇಸ್ಲಾಮಾಬಾದ್ ತಲುಪಿದ್ದಾರೆ.ಹೊಸ ಸರ್ಕಾರವು ಆದಷ್ಟು ಬೇಗ ಚುನಾವಣಾ ದಿನಾಂಕಗಳನ್ನು ಘೋಷಿಸಬೇಕು ಎಂದು ಇಮ್ರಾನ್ ಆಗ್ರಹಿಸಿದ್ದಾರೆ.
ಇಸ್ಲಾಮಾಬಾದ್ (ಮೇ.26): ಪಾಕಿಸ್ತಾನದ (Pakistan) ಅಧಿಕಾರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆದ ನಂತರ, ದೇಶದ ಪರಿಸ್ಥಿತಿ ಬದಲಾಗುವುದರ ಬದಲಿಗೆ ಇನ್ನಷ್ಟು ಪಾತಾಳಕ್ಕೆ ಇಳಿಯುವ ಸೂಚನೆ ಕಂಡಿದೆ. ಪಾಕಿಸ್ತಾನ ಸಂಸತ್ತಿಗೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಇಮ್ರಾನ್ ಖಾನ್ (Imran Khan) ನಡೆಸುತ್ತಿರುವ ಆಜಾದಿ ಮಾರ್ಚ್ (Azadi March), ಇಸ್ಲಾಮಾಬಾದ್ (islamabad) ತಲುಪಿದ ಬೆನ್ನಲ್ಲಿಯೇ ಹಿಂಸಾರೂಪಕ್ಕೆ ತೆರಳಿದೆ.
ಇಮ್ರಾನ್ ಖಾನ್ ಬೆಂಬಲಿಗರು ಮೆಟ್ರೋ ಸ್ಟೇಷನ್ ಗೆ (Metro Station) ಬೆಂಕಿ ಹಚ್ಚಿದ್ದಲ್ಲದೆ, ರಸ್ತೆಯ ಅಕ್ಕಪಕ್ಕದಲ್ಲಿರುವ ಗಿಡ ಮರಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿಯ ಸೂಕ್ಮತೆ ಅರಿತ ಪಾಕಿಸ್ತಾನ ಸರ್ಕಾರ, ರೆಡ್ ಜೋನ್ ನಲ್ಲಿ ಸೇನೆಯನ್ನು(Pakistan Army) ಜಮಾವಣೆ ಮಾಡಿದೆ. ಇಮ್ರಾನ್ ಖಾನ್ ಬೆಂಬಲಿಗರು ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚುವ ವೇಳೆ, ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಅಗಿರುವ ಬಗ್ಗೆ ವರದಿಗಳೂ ಇವೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಬೆಂಬಲಿಗರೊಂದಿಗೆ ಡಿ-ಚೌಕ್ (D Chowk) ಕಡೆಗೆ ತೆರಳುತ್ತಿದ್ದಾರೆ. ಸದ್ಯ ಸರಕಾರ ಹೊರಡಿಸಿರುವ ಆದೇಶದಲ್ಲಿ ಸರಕಾರಿ ಕಟ್ಟಡಗಳ ರಕ್ಷಣೆಯೇ ತಮ್ಮ ಆದ್ಯತೆ ಎಂದು ಹೇಳಲಾಗಿದೆ. ಸುಪ್ರೀಂ ಕೋರ್ಟ್, ಸಂಸತ್ ಭವನ, ಪ್ರಧಾನಿ ಭವನ, ಪ್ರೆಸಿಡೆನ್ಸಿ, ಪಾಕಿಸ್ತಾನ ಸಚಿವಾಲಯ ಮತ್ತು ರಾಜತಾಂತ್ರಿಕ ಎನ್ಕ್ಲೇವ್ಗಳಂತಹ ಪ್ರಮುಖ ಕಟ್ಟಡಗಳ ರಕ್ಷಣೆಗೆ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಎಲ್ಲೆಡೆ ರಸ್ತೆ ತಡೆ: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರನ್ನು ತಡೆಯುವ ಪ್ರಯತ್ನಗಳೂ ನಡೆಯುತ್ತಿವೆ. ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಕಾರ್ಯಕರ್ತರು ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಹಲವು ರಸ್ತೆಗಳನ್ನು ಬಂದ್ ಮಾಡುವ ಮೂಲಕ ಪಿಟಿಐ ಬೆಂಬಲಿಗರನ್ನು ರಾಜಧಾನಿ ತಲುಪುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಪಾಕಿಸ್ತಾನದ ಜಿಯೋ ನ್ಯೂಸ್ ತನ್ನ ಕಚೇರಿಯ ಮೇಲೆ ಪಿಟಿಐ ಕಾರ್ಯಕರ್ತರ ದಾಳಿಗೆ ಒಳಗಾಗಿದೆ ಎಂದು ವರದಿ ಮಾಡಿದೆ, ಕೆಲವು ಮಾಧ್ಯಮ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅದರ ಭದ್ರತೆಗಾಗಿ ಕಟ್ಟಡದ ಹೊರಗೆ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ ಎಂದು ವರದಿ ಮಾಡಿದೆ.
ಪೊಲೀಸರ ಭಾರೀ ಶೆಲ್ ದಾಳಿ ಮತ್ತು ಪಿಟಿಐ ಕಾರ್ಯಕರ್ತರ ವಿಧ್ವಂಸಕ ಕೃತ್ಯಗಳಿಂದ ಇಸ್ಲಾಮಾಬಾದ್ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಇಮ್ರಾನ್ ಖಾನ್ ಗುರುವಾರ ಬೆಳಗ್ಗೆ ಇಸ್ಲಾಮಾಬಾದ್ನ ಡಿ ಚೌಕ್ ತಲುಪಿದ್ದಾರೆ ಎಂದು ಕೆಲವೆಡೆ ವರದಿಯಾಗಿದೆ. ಇಮ್ರಾನ್ ಖಾನ್ ಇಸ್ಲಾಮಾಬಾದ್ ಪ್ರವೇಶಿಸುವ ಮೊದಲು, ಬ್ಲೂ ಏರಿಯಾದಲ್ಲಿ ನಿರಂತರ ಅಶ್ರುವಾಯು ಶೆಲ್ ದಾಳಿಯ ವರದಿಗಳು ಬಂದಿವೆ.
ಇಸ್ಲಾಮಾಬಾದ್ನ H-9 ಮತ್ತು G-9 ಪ್ರದೇಶದ ನಡುವೆ ಪೇಶಾವರ್ ಮೋರ್ ಬಳಿ ಆಜಾದಿ ಮೆರವಣಿಗೆ ನಡೆಸಲು ಇಮ್ರಾನ್ ಖಾನ್ ಅವರ ಪಕ್ಷಕ್ಕೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿತ್ತು ಮತ್ತು ಪಿಟಿಐ ಕಾರ್ಯಕರ್ತರನ್ನು ಬಂಧಿಸದಂತೆ ಸರ್ಕಾರವನ್ನು ನಿರ್ಬಂಧಿಸಿದೆ.
ಹಾಗಿದ್ದರೂ ಪಂಜಾಬ್, ಲಾಹೋರ್ ಮತ್ತು ಕರಾಚಿಯಲ್ಲಿ ಮೆರವಣಿಗೆಯು ಇಸ್ಲಾಮಬಾದ್ ಅನ್ನು ಪ್ರವೇಶಿಸುವ ಮೊದಲು ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದವು. ಇಮ್ರಾನ್ ಖಾನ್ ಅವರ ಮೆರವಣಿಗೆಯನ್ನು ಬೆಂಬಲಿಸಿ ಲಾಹೋರ್ನ ಲಿಬರ್ಟಿ ಚೌಕ್ ಪ್ರದೇಶದಲ್ಲಿ ಜಮಾಯಿಸಿದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಪಿಟಿಐ ಆರೋಪಿಸಿದೆ.
ಪೆಟ್ರೋಲ್, ಡೀಸೆಲ್ ಸುಂಕ ಇಳಿಸಿದ ಮೋದಿ ಸರ್ಕಾರವನ್ನು ಶ್ಲಾಘಿಸಿದ ಇಮ್ರಾನ್ ಖಾನ್!
ಪಂಜಾಬ್ನ ಅಟಾಕ್ನಲ್ಲಿ, ಪ್ರತಿಭಟನಾಕಾರರು ಮೆರವಣಿಗೆಯನ್ನು ತಡೆಯಲು ದಾರಿಯಲ್ಲಿ ಇರಿಸಲಾಗಿದ್ದ ಕಂಟೈನರ್ಗಳನ್ನು ತೆಗೆದುಹಾಕಲು ಕ್ರೇನ್ ರಸ್ತೆಗೆ ಇಳಿಸಿದ್ದ ದೃಶ್ಯಗಳೂ ವೈರಲ್ ಆಗಿವೆ. ಪಿಟಿಐ ನಾಯಕಿ ಯಾಸ್ಮಿನ್ ರಶೋದ್ ಅವರು ಇಸ್ಲಾಮಾಬಾದ್ಗೆ ತೆರಳುತ್ತಿದ್ದಾಗ ಪೊಲೀಸರು ಆಕೆಯ ವಾಹನದ ಗಾಜನ್ನು ಒಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇಸ್ಲಾಮಾಬಾದ್ನ ಬ್ಲೂ ಪ್ರದೇಶದಲ್ಲಿ ಪಿಟಿಐ ಕಾರ್ಯಕರ್ತರು ಮರಗಳಿಗೆ ಬೆಂಕಿ ಹಚ್ಚಿದ್ದಾರೆ.
ಮರಿಯಮ್ ನವಾಜ್ರನ್ನು 'ಸೆಕ್ಸಿ' ಎಂದ ಇಮ್ರಾನ್ ಖಾನ್: ಹೀಗೆ ಮಾಡಿದ್ರೆ ನಿನ್ನ ಗಂಡನಿಗೆ ಕೋಪ ಬರಬಹುದು!
ಹೊಸ ದಿನಾಂಕ ಘೋಷಣೆ ಆಗುವವರೆಗೂ ಮೆರವಣಿಗೆ ನಿಲ್ಲೋದಿಲ್ಲ: ಶೆಹಬಾಜ್ ಷರೀಫ್ ಸರ್ಕಾರವು ಹೊಸ ಚುನಾವಣೆಯ ದಿನಾಂಕವನ್ನು ಘೋಷಿಸುವವರೆಗೆ ಡಿ-ಚೌಕ್ ಅನ್ನು ಖಾಲಿ ಮಾಡುವುದಿಲ್ಲ ಎಂದು ಇಮ್ರಾನ್ ಖಾನ್ ಬುಧವಾರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದ್ದಾರೆ. ಸರ್ಕಾರದೊಂದಿಗಿನ ಯಾವುದೇ ಒಪ್ಪಂದದ ವದಂತಿಗಳನ್ನು ಇಮ್ರಾನ್ ಖಾನ್ ಬುಧವಾರ ತಳ್ಳಿಹಾಕಿದ್ದಾರೆ. "ಖಂಡಿತ ಇಲ್ಲ! ನಾವು ಇಸ್ಲಾಮಾಬಾದ್ ಕಡೆಗೆ ಸಾಗುತ್ತಿದ್ದೇವೆ ಮತ್ತು ಯಾವುದೇ ಒಪ್ಪಂದದ ಪ್ರಶ್ನೆಯಿಲ್ಲ. ಅಸೆಂಬ್ಲಿಗಳ ವಿಸರ್ಜನೆ ಮತ್ತು ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವವರೆಗೆ ನಾವು ಇಸ್ಲಾಮಾಬಾದ್ನಲ್ಲಿಯೇ ಇರುತ್ತೇವೆ. ಇಸ್ಲಾಮಾಬಾದ್ ಮತ್ತು ಪಿಂಡಿಯ ಎಲ್ಲಾ ಜನರು ಪ್ರತಿಭಟನೆಗೆ ಸೇರಲು ಕರೆ ಮಾಡುತ್ತಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.