ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ಚಂದ್ರಯಾನ 3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಇದೀಗ ಇಸ್ರೋ ನಿಯಂತ್ರಣದಲ್ಲಿ ಸಾಗುತ್ತಿದೆ. ಆದರೆ ಇದು ಪಾಕಿಸ್ತಾನಕ್ಕೆ ಹಿಡಿಸಿಲ್ಲ. ಪಾಕಿಸ್ತಾನದ ಮಾಜಿ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ, ಭಾರತದ ಚಂದ್ರಯಾನವನ್ನೇ ಕುಹಕವಾಡಿದ್ದಾರೆ.
ಇಸ್ಲಾಮಾಬಾದ್(ಜು.18) ಭಾರತದ ಚಂದ್ರಯಾನ 3 ನೌಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಜುಲೈ 14 ರಂದು ಇಸ್ರೋ ಶ್ರೀಹರಿಕೋಟಾದಿಂದ ಚಂದ್ರಯಾನ 3 ವ್ಯೋಮನೌಕೆಯನ್ನು ಉಡಾವಣೆ ಮಾಡಿದೆ. ಪ್ರತಿ ಹಂತದಲ್ಲೂ ಭಾರತ ಯಶಸ್ಸು ಸಾಧಿಸಿದೆ. ಭಾರತ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಂದ್ರಯಾನ 3 ನೌಕೆಯನ್ನು ಉಡಾವಣೆ ಮಾಡಿದೆ. ಭಾರತದ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ಇತ್ತ ಸಹಜವಾಗಿ ಪಾಕಿಸ್ತಾನ ಕಣ್ಣು ಕಂಪಾಗಿದೆ. ಚಂದ್ರಯಾನ 3 ನೌಕೆ ಉಡಾವಣೆ ಏನು ಸಾಧನೆಯಲ್ಲ ಎಂದಿದೆ. ಇಷ್ಟೇ ಅಲ್ಲ ಚಂದ್ರಯಾನಕ್ಕೆ ಇಷ್ಟು ಸುದೀರ್ಘ ದಿನಗಳ ಅವಶ್ಯಕತೆ ಇಲ್ಲ. ಚಂದ್ರ ಎಲ್ಲಿದ್ದಾನೆ ಅನ್ನೋ ಲೋಕೇಶನ್ ಗೊತ್ತಿದೆ. ಮತ್ಯಾಕೆ ಸುದೀರ್ಘ ಪ್ರಯಾಣ ಎಂದು ಪಾಕಿಸ್ತಾನ ಮಾಜಿ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫಾವದ್ ಚೌಧರಿ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಫಾವದ್ ಚೌಧರಿ ಚಂದ್ರಯಾನ 3 ಉಡಾವಣೆ ಕುರಿತು ಮಾತನಾಡಿದ್ದಾರೆ. ಚಂದ್ರನತ್ತ ಪ್ರಯಾಣಿಸಲು ಇಷ್ಟು ಸುದೀರ್ಘ ದಿನಗಳ ಅವಶ್ಯಕತೆ ಇಲ್ಲ. ಚಂದ್ರನ ಲೋಕೇಶನ್ ಗೊತ್ತಿದೆ. ಚಂದ್ರನಿರುವ ದೂರ ಗೊತ್ತಿದೆ. ಹೀಗಿರುವಾಗ ಸುದೀರ್ಘ ಪ್ರಯಾಣದ ಮೂಲಕ ಚಂದ್ರನ ತಲುಪುವ ಚಂದ್ರಯಾನ 3 ನೌಕೆ ಯೋಜನೆ ಸರಿ ಇಲ್ಲ ಎಂದಿದ್ದಾರೆ.
ಚಂದ್ರಯಾನ-3 ಮೊದಲ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ: ಉತ್ತಮ ಸ್ಥಿತಿಯಲ್ಲಿ ವ್ಯೋಮನೌಕೆ
ಫಾವದ್ ಚೌಧರಿ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಚಂದ್ರಯಾನ, ವಿಜ್ಞಾನ, ಬಾಹ್ಯಕಾಶದ ಎಬಿಸಿಡಿ ಗೊತ್ತಿಲ್ಲದವರು ಮಾತನಾಡಿದರೇ ಹೀಗೆ ಆಗಲಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ಚಂದ್ರಯಾನ ಕನಸು ಕಾಣುವ ಮೊದಲು ತಮ್ಮ ದೇಶವನ್ನು ಉಳಿಸುವ ಪ್ರಯತ್ನ ಮಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಫಾವದ್ ಚೌಧರಿ ಪದೇ ಪದೇ ಭಾರತದ ವಿರುದ್ಧ ಹಲವು ವಿವಾದಾತ್ಮಕ ಮಾತುಗಳನ್ನಾಡಿ ಸುದ್ದಿಯಾಗಿದ್ದಾರೆ. ಭಾರತವನ್ನು ಕೆಣಕುವ ಪ್ರಯತ್ನ ಮಾಡಿ ಮುಖಭಂಗ ಅನುಭವಿಸಿದ್ದಾರೆ. ಇದೀಗ ಚಂದ್ರಯಾನ3 ವಿರುದ್ಧವೂ ಮಾತನಾಡಿ ನಗೆಪಾಟಲೀಗೀಡಾಗಿದ್ದಾರೆ. 2019ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿತ್ತು. ಇಷ್ಟೇ ಅಲ್ಲ ಭದ್ರತೆ ಕಾರಣದಿಂದ ಪ್ರವಾಸ ಸಾಧ್ಯವಿಲ್ಲ ಎಂದಿತ್ತು. ಇದರ ಬೆನ್ನಲ್ಲೇ ಫಾವದ್ ಚೌದರಿ ಲಂಕಾದ 10 ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸಕ್ಕೆ ಬಹಿಷ್ಕಾರ ಹಾಕಲು ಭಾರತ ಕಾರಣ ಎಂದಿದ್ದರು. ಶ್ರೀಲಂಕಾ ಆಟಗಾರರಿಗೆ ಭಾರತ ಹೆದರಿಸಿದೆ. ಪಾಕಿಸ್ತಾನ ಪ್ರವಾಸ ಕೈಗೊಂಡರೆ ಐಪಿಎಲ್ನಿಂದ ಹೊರಹಾಕುವುದಾಗಿ ಎಚ್ಚರಿಕೆ ನೀಡಿದೆ. ಆದರಿಂದಲೇ 10 ಆಟಗಾರರು ಪಾಕಿಸ್ತಾನಕ್ಕೆ ಬರಲು ನಿರಾಕರಿಸಿದ್ದಾರೆ. ಭಾರತೀಯ ಕ್ರೀಡಾ ಸಂಸ್ಥೆಗಳು ಇಂಥ ಕೀಳು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿವೆ. ಇದನ್ನು ನಾವು ಖಂಡಿಸಬೇಕು’ ಎಂದು ಫಾವರ್ ಟ್ವೀಟ್ ಮಾಡಿದ್ದರು.
ಚಂದ್ರನ ಮೇಲೆ ಮೂಡಲಿದೆ ಭಾರತದ ಮುದ್ರೆ : ರೋವರ್ ಹೆಜ್ಜೆ ಇಟ್ಟಲೆಲ್ಲಾ ಅಶೋಕ ಚಕ್ರ ಸಿಂಹದ ಮುಖ, ಇಸ್ರೋ ಗುರುತು
ಚಂದ್ರಯಾನ 3 ಯಶಸ್ವಿ ಉಡಾವಣೆಗೆ ಹಲವು ದೇಶಗಳು ಭಾರತವನ್ನು ಅಭಿನಂದಿಸಿದೆ. ಯಶಸ್ವಿ ಉಡಾವಣೆ ಬೆನ್ನಲ್ಲೇ ಪ್ರಧಾನಿ ಮೋದಿ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಚಂದ್ರಯಾನ-3 ಭಾರತದ ಬಾಹ್ಯಾಕಾಶ ರಂಗದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಇದು ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಎತ್ತರಕ್ಕೆ ಏರಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ನಾನು ಅವರ ಚೈತನ್ಯ ಮತ್ತು ಜಾಣ್ಮೆಯನ್ನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದ್ದರು.
