ಸಿಖ್‌ ಧರ್ಮಗುರು ಗುರುನಾನಕ್‌ರ ಜಯಂತಿ ಪ್ರಯುಕ್ತ ಪಾಕಿಸ್ತಾನದಲ್ಲಿರುವ ಅವರ ಜನ್ಮಸ್ಥಳ ನನಕಾನಾ ಸಾಹಿಬ್‌ಗೆ ತೆರಳಿದ್ದ ಹಿಂದೂಗಳಿಗೆ ಪ್ರವೇಶ ನಿರಾಕರಿಸಿ, ಕೇವಲ ಸಿಖ್ಖರನ್ನು ಒಳಗೆ ಕರೆದುಕೊಂಡು ಪಾಕಿಸ್ತಾನಿ ಅಧಿಕಾರಿಗಳು ಉದ್ಧಟತನ ತೋರಿದ ಘಟನೆ ನಡೆದಿದೆ. ಪಾಕ್‌ನ ಈ ನಡೆ ವಿರುದ್ಧ ವ್ಯಾಪಕ ಆಕ್ರೋಶ

ಲಾಹೋರ್‌: ಸಿಖ್‌ ಧರ್ಮಗುರು ಗುರುನಾನಕ್‌ರ ಜಯಂತಿ ಪ್ರಯುಕ್ತ ಪಾಕಿಸ್ತಾನದಲ್ಲಿರುವ ಅವರ ಜನ್ಮಸ್ಥಳ ನನಕಾನಾ ಸಾಹಿಬ್‌ಗೆ ತೆರಳಿದ್ದ ಹಿಂದೂಗಳಿಗೆ ಪ್ರವೇಶ ನಿರಾಕರಿಸಿ, ಕೇವಲ ಸಿಖ್ಖರನ್ನು ಒಳಗೆ ಕರೆದುಕೊಂಡು ಪಾಕಿಸ್ತಾನಿ ಅಧಿಕಾರಿಗಳು ಉದ್ಧಟತನ ತೋರಿದ ಘಟನೆ ಮಂಗಳವಾರ ನಡೆದಿದೆ. ಪಾಕ್‌ನ ಈ ನಡೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಪರೇಷನ್‌ ಸಿಂದೂರದ ಬಳಿಕ ಇದೇ ಮೊದಲ ಬಾರಿಗೆ ಗುರುನಾನಕರ 556ನೇ ಜಯಂತಿ

ಆಪರೇಷನ್‌ ಸಿಂದೂರದ ಬಳಿಕ ಇದೇ ಮೊದಲ ಬಾರಿಗೆ ಗುರುನಾನಕರ 556ನೇ ಜಯಂತಿ ಪ್ರಯುಕ್ತ ಭಾರತೀಯ ಭಕ್ತರು ಪಾಕ್‌ನಲ್ಲಿರುವ ಅವರ ಜನ್ಮಸ್ಥಳಕ್ಕೆ ಯಾತ್ರೆ ಹೋಗಿದ್ದರು. ಪಾಕಿಸ್ತಾನದ ಹೈಕಮಿಶನ್‌ 10 ದಿನದ ಈ ಯಾತ್ರೆಗಾಗಿ 2,100 ಯಾತ್ರಿಕರಿಗೆ ವೀಸಾ ನೀಡಿತ್ತು. ಮಂಗಳವಾರ ಭಕ್ತರು ವಾಘಾ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದಾರೆ. ಈ ವೇಳೆ 1,796 ಮಂದಿ ಸಿಖ್ಖರಿಗೆ ಮಾತ್ರ ಪ್ರವೇಶ ನೀಡಿ, ಉಳಿದ ಹಿಂದೂಗಳನ್ನು ಭಾರತಕ್ಕೆ ವಾಪಸ್‌ ಕಳಿಸಿದ್ದಾರೆ.

ಕಟು ಅನುಭವ

ಹೀಗೆ ತಿರಸ್ಕೃತರಾದವರನ್ನು ಪಂಜಾಬ್‌ ಅಲ್ಪಸಂಖ್ಯಾತ ಸಚಿವ ಸರ್ದಾರ್‌ ರಮೇಶ್‌ ಸಿಂಗ್‌ ಅರೋರಾ ಮೊದಲಾದ ಪ್ರಮುಖರು ಬರಮಾಡಿಕೊಂಡಿದ್ದಾರೆ. ದೆಹಲಿಯಿಂದ 7 ಮಂದಿ ಕುಟುಂಬಸ್ಥರ ಸಮೇತ ಯಾತ್ರೆಗೆ ತೆರಳಿದ್ದ ಅಮರ್‌ ಚಂದ್‌ ಈ ಕಟು ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾವು ಅಟ್ಟಾರಿ ಅಂತಾರಾಷ್ಟ್ರೀಯ ಗಡಿ ದಾಟಿ, ಪಾಕ್‌ ಬದಿಯ ವಾಘಾವನ್ನು ತಲುಪಿದೆವು. ಎಲ್ಲಾ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ್ದೆವು. ವಿಶೇಷ ಬಸ್‌ಗೆ ಟಿಕೆಟನ್ನೂ ಖರೀದಿಸಿದ್ದೆವು. ಇನ್ನೇನು ಒಳಗೆ ಪ್ರವೇಶಿಸಬೇಕು ಎನ್ನುವಾಗ ಪಾಕ್ ಅಧಿಕಾರಿಗಳು, ನೀವು ಹಿಂದೂಗಳು ಸಿಖ್ ಜಾಥಾ ಜೊತೆಯಲ್ಲಿ ಹೋಗುವಂತಿಲ್ಲ ಎಂದು ನಮ್ಮನ್ನು ವಾಪಸ್‌ ಕಳಿಸಿದರು’ ಎಂದು ತಿಳಿಸಿದ್ದಾರೆ.