ಯುದ್ಧದ ಧಮಕಿ ಹಾಕಿದ್ದ ಪಾಕಿಸ್ತಾನ ಈಗ ಸಿಂಧು ನದಿ ಒಪ್ಪಂದ ಮರುಸ್ಥಾಪನೆಗೆ ಭಾರತಕ್ಕೆ ಮನವಿ ಮಾಡಿದೆ. ಪಾಕಿಸ್ತಾನದ ನೀರಿನ ಬಳಕೆಗೆ ಭಾರತ ಅವಕಾಶ ನೀಡಬೇಕೆಂದು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಒತ್ತಾಯಿಸಿದೆ.
ಇಸ್ಲಾಮಾಬಾದ್ (ಆ.13): 'ಭಾರತ ಹಾಗೂ ವಿಶ್ವದ ಅರ್ಧಭಾಗದ ಮೇಲೆ ಅಣ್ವಸ್ತ್ರ ದಾಳಿ ಮಾಡ್ತವೆ. ಕ್ಷಿಪಣಿ ಹಾರಿಸಿ ಉಡೀಸ್ ಮಾಡ್ತವೆ...' ಹೀಗೆ ಸಾಲು ಸಾಲು ಯುದ್ಧದ ಧಮಕಿಗಳೆಲ್ಲ ಆಯ್ತು. ಇದೀಗ ಸಿಂಧು ನದಿ ಒಪಂದ ಮರುಸ್ಥಾಪನೆಗೆ ಉಗ್ರ ಪೋಷಕ ಪಾಕಿಸ್ತಾನವು ಭಾರತದ ಮುಂದೆ ಭಿಕ್ಷೆಗೆ ನಿಂತಿದೆ ಹಾಗೂ 'ಪಾಕ್ಗೆ ನೀರು ಬಿಡಿ' ಎಂದು ಭಾರತಕ್ಕೆ ಕೋರಿದೆ.
ಬುಧವಾರ ಟ್ವಿಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, 'ಸಿಂಧು ನದಿ ಒಪ್ಪಂದವನ್ನು ನಿಷ್ಠೆಯಿಂದ ಮರುಸ್ಥಾಪಿಸುವಂತೆ ನಾವು ಭಾರತವನ್ನು ಆಗ್ರಹಿಸುತ್ತೇವೆ' ಎಂದು ಕೋರಿದೆ.
ಅಲ್ಲದೆ, 'ಪಾಕಿಸ್ತಾನದ ಅನಿಯಂತ್ರಿತ ಬಳಕೆ ಗಾಗಿ ಭಾರತವು ಪಶ್ಚಿಮಾಭಿಮುಖವಾಗಿರುವ ನದಿಗಳ ನೀರನ್ನು ಹರಿಯಲು ಬಿಡಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಮೂಲ ಜಲ ಒಪ್ಪಂದದಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಭಾರತ ಬದ್ಧವಾಗಿರಬೇಕು ಎಂದು ಕೂಡ ಕೋರ್ಟು ಹೇಳಿದೆ' ಎಂದು ಜಲ ಹಂಚಿಕೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪಾಕ್ ಉಲ್ಲೇಖಿಸಿದೆ.
ಭಾರತ ವಿರುದ್ದ ಯುದ್ಧ: ಬಿಲಾವಲ್ ಬೆದರಿಕೆ
ಇಸ್ಲಾಮಾಬಾದ್: ಪಾಕ್ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅಣುದಾಳಿ ಬೆದರಿಕೆ ಹಾಕಿದ ನಂತರ ಪಾಕ್ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡ ಅದೇ ಮಾತು ಆಡಿದ್ದಾರೆ. 'ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ ಮುಂದುವರಿಸಿದರೆ, ಪಾಕಿಸ್ತಾನಕ್ಕೆ ಯುದ್ಧವನ್ನು ಪರಿಗಣಿಸದೆ ಬೇರೆ ದಾರಿಯಿಲ್ಲ' ಎಂದು ಅವರು ಎಚ್ಚರಿಸಿದ್ದಾರೆ.
ಸಿಂದ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 'ಸಿಂಧು ಒಪ್ಪಂದ ಸ್ಥಗಿತಗೊಳಿಸಿ ಭಾರತವು ಪಾಕಿಸ್ತಾನಕ್ಕೆ ದೊಡ್ಡ ಹಾನಿ ಉಂಟುಮಾಡಿದೆ, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲಾ ಪಾಕಿಸ್ತಾನಿಗಳು ಒಗ್ಗಟ್ಟಾಗಬೇಕು ಎಂದು ಒತ್ತಾಯಿಸಿದರು.'ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ ಮುಂದುವರಿಸಿದರೆ, ಪಾಕಿಸ್ತಾನಕ್ಕೆ ಯುದ್ಧವನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಎನಿಸುತ್ತಿದೆ. ನೀವು (ಪಾಕಿಸ್ತಾನಿಗಳು) 6 ನದಿಗಳನ್ನು ಮರಳಿ ಪಡೆಯುವಷ್ಟು ಯುದ್ಧಕ್ಕೆ ಬಲಿಷ್ಠರಾಗಿದ್ದೀರಿ. ಯುದ್ಧ ನಡೆದರೆ ಭಾರತ ಸೋಲಲಿದೆ' ಎಂದರು.
