ಭೂಪಟದ ಆಚೆಗೂ ಕನ್ನಡ ವಿಸ್ತರಣೆ ನಮ್ಮ ಗುರಿ: ರವಿ ಹೆಗಡೆ

Synopsis
ಕನ್ನಡ ಮತ್ತು ಕರ್ನಾಟಕ ಭೂಪಟಕ್ಕಷ್ಟೇ ಸೀಮಿತ ಆಗಬಾರದು. ಕರ್ನಾಟಕದ ಗಡಿಯಾಚೆಗೂ ಕನ್ನಡ ವಿಸ್ತರಿಸಬೇಕು, ಬೆಳೆಯಬೇಕು ಎಂಬುದು ನಮ್ಮ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಉದ್ದೇಶ ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
ದುಬೈ (ಏ.14): ಕನ್ನಡ ಮತ್ತು ಕರ್ನಾಟಕ ಭೂಪಟಕ್ಕಷ್ಟೇ ಸೀಮಿತ ಆಗಬಾರದು. ಕರ್ನಾಟಕದ ಗಡಿಯಾಚೆಗೂ ಕನ್ನಡ ವಿಸ್ತರಿಸಬೇಕು, ಬೆಳೆಯಬೇಕು ಎಂಬುದು ನಮ್ಮ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಉದ್ದೇಶ ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು. ದುಬೈನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಆಯೋಜಿಸಿದ್ದ ದುಬೈ ಇಂಡಿಯಾ ಐಕಾನಿಕ್ ಅವಾರ್ಡ್ಸ್ ಎರಡನೇ ಆವೃತ್ತಿಯ ಆಶಯ ನುಡಿಗಳನ್ನಾಡುತ್ತಾ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಮಹತ್ವ ಹಾಗೂ ಉದ್ದೇಶಗಳನ್ನು ವಿವರಿಸಿದರು.
ನಮ್ಮ ಸಂಸ್ಥೆಯು ಆಯೋಜಿಸುತ್ತಿರುವ 6ನೇ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದು. ದುಬೈನಲ್ಲಿ ನಡೆಯುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದೆ. ಕಳೆದೊಂದು ವರ್ಷದಿಂದ ಅಂತಾರಾಷ್ಟ್ರೀಯ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಇದು ಅನೇಕರಿಗೆ ಹೊಸ ಹೊಸ ಅವಕಾಶಗಳನ್ನು ನೀಡಿದೆ ಎನ್ನುವುದನ್ನು ಕೇಳಲು ಖುಷಿಯಾಗುತ್ತಿದೆ ಎಂದರು. ವಿವಿಧ ಕ್ಷೇತ್ರದ ಸಾಧಕರನ್ನು, ಅವರ ಕತೆಗಳನ್ನು ನಮ್ಮ ತಂಡವು ಕರ್ನಾಟಕದ ಮೂಲೆ ಮೂಲೆಯಿಂದ ಹೆಕ್ಕಿ ತಂದಿದೆ. ಅವರನ್ನು ಜಗತ್ತಿಗೆ ಪರಿಚಿಯಸುತ್ತಿದ್ದೇವೆ. ಇಲ್ಲಿರುವ ಸಾಧಕರು ಯಾರಿಂದಲೋ ಸ್ಪೂರ್ತಿ ಪಡೆದಿರುತ್ತೀರಿ.
ಇಂದಿನಿಂದ ನೀವು ನೂರು - ಸಾವಿರ ಜನರಿಗೆ ನಮ್ಮ ವೇದಿಕೆ ಮೂಲಕ ಸ್ಪೂರ್ತಿಯ ಚಿಲುಮೆಯಾಗಲಿದ್ದೀರಿ. ನೀವು ಇನ್ನಷ್ಟು ಉತ್ಸಾಹದಿಂದ ಹೆಜ್ಜೆ ಇಡಲು ಈ ಪ್ರಶಸ್ತಿಯು ಶಕ್ತಿ ನೀಡಲಿ ಎಂದು ಆಶಿಸಿದರು. ನಮ್ಮ ಏಷ್ಯಾನೆಟ್ ನೆಟ್ವರ್ಕ್ ಸಮೂಹವು ಭಾರತದ ನಂತರ ಅತಿ ಹೆಚ್ಚು ಸುದ್ದಿ ಜಾಲವನ್ನು ಅರಬ್ ರಾಷ್ಟ್ರಗಳಲ್ಲಿ ಹೊಂದಿದೆ. ದುಬೈನ ಅತ್ಯಂತ ವಿಶೇಷವಾದದು. ದುಬೈ ಎನ್ನುವುದು ಭವಿಷ್ಯದ ನಗರ. ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಸುರಕ್ಷತೆಗೆ ಆದ್ಯತೆ ನೀಡಿ ತಂತ್ರಜ್ಞಾನ, ವಾಣಿಜ್ಯೋದ್ಯಮದಲ್ಲಿ ನಾವೀನ್ಯತೆಗೆ ತೆರೆದುಕೊಳ್ಳುವುದರಲ್ಲಿ ದುಬೈ ಸದಾ ಮುಂದಿದೆ ಎಂದು ರವಿ ಹೆಗಡೆ ಬಣ್ಣಿಸಿದರು.
ಕನ್ನಡಿಗರಿಗೆ ದುಬೈನಲ್ಲಿ ಬೇಕಾದ ನೆರವು ನೀಡಲು ಸಿದ್ಧ: ಶಶಿಧರ ನಾಗರಾಜಪ್ಪ
ಹಲವು ಹೊಸತನ, ಮೊದಲುಗಳಿಗೆ ಹೆಸರಾಗಿರುವ ನಮ್ಮ ಮಾಧ್ಯಮ ಸಂಸ್ಥೆ ಹೊಸತನದ ಹರಿಕಾರ ಎನಿಸಿದೆ. ಮಾಧ್ಯಮ ಸಂಸ್ಥೆಯಾಗಿ ಸುದ್ದಿ ನೀಡುವುದು ಮೊದಲ ಕರ್ತವ್ಯ. ಕರ್ತವ್ಯದಾಚೆಗೂ ನಾವು ಜನರ ಜೊತೆಗಿರಬೇಕು ಎನ್ನುವ ಉದ್ದೇಶದೊಂದಿಗೆ ರೈತ ರತ್ನ, ಅಸಾಮಾನ್ಯ ಕನ್ನಡಿಗ, ವನ್ಯಜೀವಿ ಸಂರಕ್ಷಣಾ ಅಭಿಯಾನದಂತಹ ಸಾಮಾಜಿಕ ಜವಾಬ್ದಾರಿ ಯೋಜನೆ ನಡೆಸುತ್ತಿದ್ದೇವೆ. ಎಲೆಮರೆಕಾಯಿಯಂತೆ ಇರುವವರನ್ನು ಗುರುತಿಸಿ ಪ್ರಚಾರ ನೀಡಲು ಹಲವು ಪ್ರಶಸ್ತಿ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.