ಕನ್ನಡಿಗರಿಗೆ ದುಬೈನಲ್ಲಿ ಬೇಕಾದ ನೆರವು ನೀಡಲು ಸಿದ್ಧ: ಶಶಿಧರ ನಾಗರಾಜಪ್ಪ

Synopsis
ದುಬೈನಲ್ಲಿ ವ್ಯವಹಾರ ನಡೆಸಲು ಮುಂದಾಗುವ ಸಾಧಕ ಕನ್ನಡಿಗರಿಗೆ ಎಲ್ಲ ರೀತಿಯ ನೆರವು ಸಹಕಾರ ನೀಡಲು ಸಿದ್ಧ ಇದ್ದೇನೆ ಎಂದು ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಹೇಳಿದರು.
ದುಬೈ (ಏ.14): ದುಬೈನಲ್ಲಿ ವ್ಯವಹಾರ ನಡೆಸಲು ಮುಂದಾಗುವ ಸಾಧಕ ಕನ್ನಡಿಗರಿಗೆ ಎಲ್ಲ ರೀತಿಯ ನೆರವು ಸಹಕಾರ ನೀಡಲು ಸಿದ್ಧ ಇದ್ದೇನೆ ಎಂದು ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಹೇಳಿದರು. ದುಬೈನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭವು ಆಯೋಜಿಸಿದ್ದ ದುಬೈ ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ಸ್ ಎರಡನೇ ಅವತರಣಿಕೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕನ್ನಡ ನೆಲ, ಜಲ - ಭಾಷೆ ಕುರಿತು ಅಭಿಮಾನ ಮಾತ್ರವಲ್ಲದೆ ಸಕ್ರಿಯ ಸಹಕಾರ ನೀಡುವ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಸ್ವೀಕರಿಸುತ್ತಿರುವ ಒಬ್ಬೊಬ್ಬರೂ ಒಂದೊಂದು ಮಾಣಿಕ್ಯ ಇದ್ದಂತೆ. ನೀವುಗಳು ದುಬೈ ಪ್ರಶಸ್ತಿ ಹಾಗೂ ಪ್ರವಾಸ ಸದುಪಯೋಗಪಡಿಸಿಕೊಳ್ಳಿ ಎಂದೂ ಸಲಹೆ ನೀಡಿದರು. 11 ವರ್ಷಗಳ ಹಿಂದೆ ಇಲ್ಲಿ 40 ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ಕನ್ನಡ ಶಾಲೆ ಆರಂಭಿಸಲಾಯ್ತು. ಕಳೆದ ವರ್ಷ ಇದರ ದಶಮಾನೋತ್ಸವ ಆಚರಿಸಿದೆವು.
ದುಬೈನಲ್ಲಿ 2ನೇ ಆವೃತ್ತಿಯ ದುಬೈ ಐಕಾನಿಕ್ ಅವಾರ್ಡ್ ಪ್ರದಾನ
11ನೇ ವರ್ಷವಾದ ಈ ವರ್ಷ ನಮ್ಮ ಕನ್ನಡ ಶಾಲೆಯಲ್ಲೀಗ 1250 ಮಕ್ಕಳಿಗೆ ಕನ್ನಡ ಕಲಿಸಲಾಗುತ್ತಿದೆ ಎಂದು ಸಂತಸ ಹಂಚಿಕೊಂಡರು. ಇಲ್ಲಿನ ನಮ್ಮ ಕನ್ನಡ ಕಾರ್ಯವನ್ನು ಇಡೀ ಕರ್ನಾಟಕಕ್ಕೆ ಮೊದಲು ಸಾರಿ ಹೇಳಿದ್ದು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ. ಇಂತಹ ಹಲವು ಕನ್ನಡ ಕಾರಣಗಳಿಗಾಗಿ ದುಬೈ ಜನ ರವಿ ಹೆಗಡೆ ಹಾಗೂ ಅಜಿತ್ ಹನಮಕ್ಕನವರ್ ಬಗ್ಗೆ ಅಭಿಮಾನ ಇರಿಸಿಕೊಂಡಿದೆ ಎಂದು ಶಶಿಧರ್ ನಾಗರಾಜಪ್ಪ ವಿವರಿಸಿದರು.