ಅಮೆರಿಕದ ಮಿತ್ರತ್ವ ಹಾಗೂ ಸೇನಾ ನೆಲೆ ಹೊಂದಿರುವ ಕಾರಣಕ್ಕೆ ಇರಾನ್‌ನಿಂದ ಯುಎಇ ಭೀಕರ ಕ್ಷಿಪಣಿದಾಳಿ ಎದುರಿಸುತ್ತಿದೆ. ಹೀಗಾಗಿ ಇಲ್ಲಿನ ವಲಸಿಗರು ಜೀವ ಉಳಿಸಿಕೊಳ್ಳಲು ಸ್ವದೇಶಕ್ಕೆ ಪಲಾಯನಗೈಯ್ಯುತ್ತಿದ್ದಾರೆ. ಆದರೆ ತಾವು ಸಾಕಿದ ಪ್ರಾಣಿಗಳನ್ನು ಅನಿವಾರ್ಯವಾಗಿ ಬೀದಿಪಾಲು ಮಾಡಿ ಓಡಿ ಹೋಗುತ್ತಿದ್ದಾರೆ.

ದುಬೈ: ಅಮೆರಿಕದ ಮಿತ್ರತ್ವ ಹಾಗೂ ಸೇನಾ ನೆಲೆ ಹೊಂದಿರುವ ಕಾರಣಕ್ಕೆ ಇರಾನ್‌ನಿಂದ ಯುಎಇ ಭೀಕರ ಕ್ಷಿಪಣಿದಾಳಿ ಎದುರಿಸುತ್ತಿದೆ. ಹೀಗಾಗಿ ಇಲ್ಲಿನ ವಲಸಿಗರು ಜೀವ ಉಳಿಸಿಕೊಳ್ಳಲು ಸ್ವದೇಶಕ್ಕೆ ಪಲಾಯನಗೈಯ್ಯುತ್ತಿದ್ದಾರೆ. ಆದರೆ ತಾವು ಸಾಕಿದ ಪ್ರಾಣಿಗಳನ್ನು ಅನಿವಾರ್ಯವಾಗಿ ಬೀದಿಪಾಲು ಮಾಡಿ ಓಡಿ ಹೋಗುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಿಸೈಲ್‌ಗಳ ಮಳೆಯಿಂದ ಪಾರಾಗಲು ನಗರ ಅಥವಾ ದೇಶವನ್ನೇ ತೊರೆಯಲು ಮುಂದಾಗಿರುವ ಜನ, ಪ್ರಾಣಿದಯಾ ಸಂಘಗಳು ಮತ್ತು ಅವುಗಳಿಗೆ ಆಶ್ರಯ ಒದಗಿಸುವ ಸಂಸ್ಥೆಗಳಿಗೆ ಕರೆ ಮಾಡಿ, ತಾವು ಸಾಕಿದ್ದ ಅಥವಾ ದತ್ತು ಪಡೆದಿದ್ದ ಬೆಕ್ಕು, ನಾಯಿಯಂತಹ ಪ್ರಾಣಿಗಳನ್ನು ನೋಡಿಕೊಳ್ಳುವಂತೆ ಗೋಗರೆಯುತ್ತಿದ್ದಾರೆ. ಅದು ಸಾಧ್ಯವಾಗದಾಗ ಅವುಗಳನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಎನ್ನಲಾಗಿದೆ. ವಿಮಾನಗಳಲ್ಲಿ ಪ್ರಾಣಿಗಳನ್ನು ಕರೆದೊಯ್ಯಲು ಸದ್ಯ ಅನುಮತಿಯಿಲ್ಲದ ಕಾರಣ ಇದು ಅನಿವಾರ್ಯವಾಗಿದೆ.

ದಯಾಮರಣ?:

ದಯನೀಯ ಸ್ಥಿತಿಯಲ್ಲಿರುವ ಪ್ರಾಣಿಗಳಿಗೆ ದಯಾಮರಣವನ್ನು ನೀಡುವ ಬಗ್ಗೆ ಪಶುವೈದ್ಯರು ಚಿಂತನೆ ನಡೆಸುತ್ತಿದ್ದು, ಈಗಾಗಲೆ ಕೆಲವು ನಾಯಿಗಳನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಕಾರಣ, ಆಶ್ರಯ ಕಳೆದುಕೊಂಡಿರುವ ಪ್ರಾಣಿಗಳು ಅಪಾರ ಸಂಖ್ಯೆಯಲ್ಲಿದ್ದು, ಅವೆಲ್ಲವನ್ನು ನೋಡಿಕೊಳ್ಳುವ ಸೌಲಭ್ಯ ಸಂಘಗಳ ಬಳಿ ಲಭ್ಯವಿಲ್ಲ. ಜತೆಗೆ ಅದಕ್ಕಾಗಿ ಆರ್ಥಿಕ ನೆರವೂ ಸಿಗುತ್ತಿಲ್ಲ.

ಮಾತುಕತೆ ಮೂಲಕ ಯುದ್ಧ ನಿಲ್ಲಿಸಿ: ಭಾರತ ಕರೆ

ನವದೆಹಲಿ: ‘ಭಾರತ ಶಾಂತಿಯನ್ನು ಬೆಂಬಲಿಸುತ್ತದೆ. ಯುದ್ಧಗ್ರಸ್ತವಾಗಿರುವ ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ದೇಶಗಳಿಗೆ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳುವಂತೆ ಒತ್ತಾಯಿಸುತ್ತದೆ. ಉದ್ವಿಗ್ನತೆಯನ್ನು ಕಡಿಮೆ ಮಾಡುವುದು, ಸಂಯಮ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದನ್ನು ನಾವು ಪ್ರತಿಪಾದಿಸುತ್ತೇವೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಸೋಮವಾರ ತಿಳಿಸಿದ್ದಾರೆ.

ಸಂಸತ್‌ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಾತನಾಡಿದ ಅವರು, ‘ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸಬೇಕು ಎಂದು ನಾವು ನಂಬಿದ್ದೇವೆ. ಮುಂದೆಯೂ ನಂಬುತ್ತೇವೆ. ಭಾರತ ಶಾಂತಿಯನ್ನು ಬೆಂಬಲಿಸುತ್ತದೆ. ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳುವಂತೆ ಒತ್ತಾಯಿಸುತ್ತದೆ. ಉದ್ವಿಗ್ನತೆ ಕಡಿಮೆ ಮಾಡುವುದು ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದನ್ನು ನಾವು ಪ್ರತಿಪಾದಿಸುತ್ತೇವೆ’ ಎಂದರು.

ಯುದ್ಧಗ್ರಸ್ತ ದೇಶಗಳೊಂದಿಗೆ ಸಂಪರ್ಕ:‘ ಯುದ್ಧಪೀಡಿತ ದೇಶಗಳಲ್ಲಿ ಭಾರತೀಯರ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ನಾನು ಈ ದೇಶಗಳಲ್ಲಿನ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇನೆ. ಅಮೆರಿಕದ ಜೊತೆ ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಯಮಿತ ಸಂಪರ್ಕ ಕಾಯ್ದುಕೊಂಡಿದ್ದೇವೆ. ಆದರೆ ಇರಾನ್‌ನೊಂದಿಗೆ ನಾಯಕತ್ವ ಮಟ್ಟದಲ್ಲಿ ಸಂಪರ್ಕ ಸಾಧಿಸುವುದು ಈ ಸಮಯದಲ್ಲಿ ಕಷ್ಟಕರ. ಆದರೂ ಫೆ.28 ಮತ್ತು ಮಾ.5ರಂದು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ಮಾತನಾಡಿದ್ದೇನೆ. ಮುಂದೆಯೂ ಮಾತುಕತೆಯನ್ನು ಮುಂದುವರಿಸುತ್ತೇನೆ’ ಎಂದು ತಿಳಿಸಿದರು.

ಭಾರತೀಯರಿಗೆ ನಿಯಮಿತ ಮಾಹಿತಿ:‘ವಿದೇಶಾಂಗ ಸಚಿವಾಲಯ ಮತ್ತು ಪಶ್ಚಿಮ ಏಷ್ಯಾ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿನ ಭಾರತೀಯ ನಾಗರಿಕರಿಗೆ ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿವೆ. ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಮತ್ತು ಈಗಾಗಲೇ ಅಲ್ಲಿರುವವರು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸಲಹೆ ನೀಡುತ್ತಿವೆ. ಯುದ್ಧಪೀಡಿತ ಪ್ರದೇಶಗಳಿಂದ ಈಗಾಗಲೇ 67,000 ಭಾರತೀಯರನ್ನು ಕರೆತಂದಿದ್ದೇವೆ’ ಎಂದರು.