ಡ್ರೋನ್ ದಾಳಿಗೆ ದುಬೈ ವಿಮಾನ ನಿಲ್ದಾಣ ಭಾಗಶಃ ಬಂದ್, ಯುಎಇನಲ್ಲಿ ಮತ್ತೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಧ್ಯಾಹ್ನದ ವೇಳೆ ಡ್ರೋನ್ ದಾಳಿಯಾಗಿದೆ. ಇದೇ ವೇಳೆ ನಾಗರೀಕರು ಮುನ್ನಚ್ಚೆರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಅಬುಧಾಬಿ (ಮಾ.07): ಯುಎಇಯಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ. ದೇಶದ ವಾಯು ರಕ್ಷಣಾ ವ್ಯವಸ್ಥೆಯು ಕ್ಷಿಪಣಿ ದಾಳಿಯ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಯುಎಇಯ ಆಂತರಿಕ ಸಚಿವಾಲಯ ಜನರಿಗೆ ಎಚ್ಚರಿಕೆ ನೀಡಿದೆ. ಜನರು ಸುರಕ್ಷಿತ ಸ್ಥಳಗಳಲ್ಲಿ ಇರಬೇಕು ಮತ್ತು ಅಧಿಕೃತ ಮೂಲಗಳಿಂದ ಬರುವ ಎಚ್ಚರಿಕೆ ಹಾಗೂ ಅಪ್ಡೇಟ್ಗಳನ್ನು ಮಾತ್ರ ಪಾಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇಂದು ಇರಾನ್ ನಡಸಿದ ಡ್ರೋನ್ ದಾಳಿ ವಿಮಾನ ನಿಲ್ದಾಣದಲ್ಲಿ ಸ್ಫೋಟಗೊಂಡಿತ್ತು. ಇದರ ಬೆನ್ನಲ್ಲೇ ಅಲರ್ಟ್ ನೀಡಲಾಗಿತ್ತು.
ದುಬೈ ವಿಮಾನ ನಿಲ್ದಾಣದ ಕಾರ್ಯಾಚರಣೆ ಭಾಗಶಃ ಬಂದ್
ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದುಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ರಾತ್ರಿ ವೇಳೆಗೆ ಕೆಲ ವಿಮಾನ ಸೇವೆಗಳು ಪುನರ್ ಆರಂಭಗೊಂಡಿದೆ. ಆದರೆ ಸಂಪೂರ್ಣ ಸೇವೆ ಇನ್ನು ಆರಂಭಗೊಂಡಿಲ್ಲ.
ಭಾರತೀಯ ರಾಯಭಾರ ಕಚೇರಿಯಿಂದ ಜಾಗೃತಿ ನಿರ್ದೇಶನ
ಯುಎಇಯಲ್ಲಿರುವ ಭಾರತೀಯರಿಗಾಗಿ ಭಾರತೀಯ ರಾಯಭಾರ ಕಚೇರಿ ಕಳೆದ ದಿನ ಜಾಗೃತಿ ನಿರ್ದೇಶನವನ್ನು ಹೊರಡಿಸಿತ್ತು. ಯುಎಇಯಲ್ಲಿನ ವಿಶೇಷ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಅನಿವಾಸಿ ಭಾರತೀಯರು ಮತ್ತು ಪ್ರವಾಸಿಗರು ಹೆಚ್ಚು ಜಾಗರೂಕರಾಗಿರಬೇಕು, ಆದರೆ ಆತಂಕಪಡುವ ಅಗತ್ಯವಿಲ್ಲ ಎಂದು ರಾಯಭಾರ ಕಚೇರಿ ತಿಳಿಸಿದೆ. ಶಾಂತಿ ಕಾಪಾಡಬೇಕು ಮತ್ತು ಯುಎಇ ಅಧಿಕಾರಿಗಳ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಯಭಾರ ಕಚೇರಿ ಎಚ್ಚರಿಸಿದೆ.
ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಯುಎಇಯಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅಧಿಕೃತ ಪ್ರಕಟಣೆಗಳನ್ನು ಗಮನವಿಟ್ಟು ಕೇಳಬೇಕು. ಸಾಮಾನ್ಯ ವಿಮಾನ ಸೇವೆಗಳನ್ನು ಇನ್ನೂ ಸ್ಥಗಿತಗೊಳಿಸಲಾಗಿದೆ. ಆದರೆ, ಯುಎಇ ಅಧಿಕಾರಿಗಳ ಅನುಮತಿಯೊಂದಿಗೆ ಭಾರತೀಯ ಮತ್ತು ಯುಎಇ ವಿಮಾನಯಾನ ಸಂಸ್ಥೆಗಳು ಭಾರತದ ವಿವಿಧ ನಗರಗಳಿಗೆ ಸೀಮಿತ ಸಂಖ್ಯೆಯಲ್ಲಿ ವಿಶೇಷ ವಿಮಾನಗಳನ್ನು ಆರಂಭಿಸಿವೆ. ಸಂಕಷ್ಟದಲ್ಲಿ ಸಿಲುಕಿರುವ ಪ್ರಯಾಣಿಕರು ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಈ ಸೇವೆಯ ಪ್ರಯೋಜನ ಪಡೆಯಬಹುದು. ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈನಲ್ಲಿರುವ ಕಾನ್ಸುಲೇಟ್ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಪಾಸ್ಪೋರ್ಟ್, ವೀಸಾ ಮತ್ತು ಇತರ ಕಾನ್ಸುಲರ್ ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಲಭ್ಯವಿವೆ. ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.

