ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನವು ಭಾರತದ ಮೇಲೆ ನಡೆಸಲೆತ್ನಿಸಿದ ಪ್ರತೀಕಾರದ ದಾಳಿ ಇದೀಗ ಅದಕ್ಕೇ ತಿರುಗುಬಾಣವಾಗಿದೆ. 

ಲಾಹೋರ್‌ (ಮೇ.09): ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನವು ಭಾರತದ ಮೇಲೆ ನಡೆಸಲೆತ್ನಿಸಿದ ಪ್ರತೀಕಾರದ ದಾಳಿ ಇದೀಗ ಅದಕ್ಕೇ ತಿರುಗುಬಾಣವಾಗಿದೆ. ಇದಕ್ಕೆ ಪ್ರತಿಯಾಗಿ ಭಾರತವು ನಡೆಸಿದ ಡ್ರೋನ್‌ ದಾಳಿಗೆ ಪಾಕಿಸ್ತಾನದ ಲಾಹೋರ್‌, ಕರಾಚಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ಗುರುವಾರ ಬೆಳಗ್ಗೆ ಭಾರೀ ಸ್ಫೋಟದ ಸದ್ದು ಕೇಳಿಸಿದ್ದು, ನಾಗರಿಕರು ಭಯಭೀತರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕ್‌ ಆಕ್ರಮಿತ ಕಾಶ್ಮೀರಕ್ಕಷ್ಟೇ ಸೀಮಿತವಾಗಿದ್ದ ಯುದ್ಧದ ಕಾರ್ಮೋಡ ಸ್ಥಿತಿ ಇದೀಗ ಇಡೀ ಪಾಕಿಸ್ತಾನವನ್ನು ಆವರಿಸಿದೆ. ಪಾಕಿಸ್ತಾನದ ದುಸ್ಸಾಹಸಕ್ಕೆ ಭಾರತ ಇಷ್ಟು ತೀವ್ರವಾಗಿ ಪ್ರತಿ ದಾಳಿ ನಡೆಸುತ್ತದೆ, ಪಾಕ್‌ ಕಾಶ್ಮೀರದಾಚೆಗಿನ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತದೆ ಎಂದು ಸಣ್ಣ ಕಲ್ಪನೆಯೂ ಮಾಡದ ಪಾಕಿಸ್ತಾನ ಇದೀಗ ತೀವ್ರ ಹತಾಶೆಗೊಳಗಾಗಿದೆ.

ಪಾಕಿಸ್ತಾನದ ಅತಿದೊಡ್ಡ ನಗರವಾದ ಲಾಹೋರ್‌ ವಾಲ್ಟನ್‌ ರಸ್ತೆಯಲ್ಲಿ ಮೂರು ಸ್ಫೋಟದ ಸದ್ದುಗಳು ಬೆಳಗ್ಗೆ ಕೇಳಿಬಂದಿವೆ. ಇದರಿಂದ ಆತಂಕಕ್ಕೊಳಗಾದ ನಿವಾಸಿಗಳು ರಕ್ಷಣೆಗಾಗಿ ಮನೆಯೊಳಗೆ ದೌಡಾಯಿಸಿದ್ದಾರೆ. ಭಾರತದ ವೈಮಾನಿಕ ದಾಳಿಯಿಂದ ನಗರದ ಹಲವೆಡೆ ದಟ್ಟಹೊಗೆ ಆವರಿಸಿದ್ದು, ಸದ್ಯ ಲಾಹೋರ್‌ದಲ್ಲಿ ಆತಂಕದ ಸ್ಥಿತಿ ಮನೆ ಮಾಡಿದೆ. ಜನ ಮನೆಯಿಂದ ಹೊರಬರಲು ಆತಂಕಪಡುವಂತಾಗಿದೆ. ಸ್ಫೋಟದ ವಿಚಾರವನ್ನು ಸ್ಥಳೀಯ ಮಾಧ್ಯಮಗಳೂ ಖಚಿತಪಡಿಸಿವೆ. ಲಾಹೋರ್‌ ಮತ್ತು ಸಿಯಾಲ್‌ಕೋಟ್‌ನಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹಲವು ವರ್ಷಗಳ ಶಿಕ್ಷೆಯನ್ನು ಪ್ರಶ್ನಿಸಿ ಉಗ್ರ ಹಫೀಜ್‌ ಪಾಕಿಸ್ತಾನ ಕೋರ್ಟ್‌ಗೆ ಅರ್ಜಿ

ಪಾಕಿಸ್ತಾನದಿಂದ ಅಪಪ್ರಚಾರ: ಆಪರೇಷನ್ ಸಿಂದೂರದ ಬಳಿಕ ಪಾಕಿಸ್ತಾನವು ಸಾಮಾಜಿಕ ಜಾಲತಾಣಗಳ ಮೂಲಕ ಭಾರತದ ವಿರುದ್ಧ ಅಪಪ್ರಚಾರಕ್ಕಿಳಿದಿದೆ. ಭಾರತವು ಉಗ್ರರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದರೆ ಪಾಕಿಸ್ತಾನ ಮಾತ್ರ ಭಾರತವು ಜನರ ಮೇಲೆ ದಾಳಿ ನಡೆಸಿದೆ ಎಂದು ಅಪಪ್ರಚಾರಕ್ಕಿಳಿದಿದೆ.