ಪರ್ಷಿಯನ್‌ ಕೊಲ್ಲಿಯಲ್ಲಿರುವ ಇರಾನ್‌ ನೈಸರ್ಗಿಕ ಅನಿಲ ಘಟಕದ ಮೇಲೆ ತಾನು ನಡೆಸಿದ ಏಕಾಏಕಿ ದಾಳಿ ಭಾರೀ ಪ್ರಕೋಪಕ್ಕೆ ಕಾರಣವಾದ ಬೆನ್ನಲ್ಲೇ ಇನ್ನು ಇರಾನ್‌ನ ತೈಲ ಮತ್ತು ಅನಿಲ ಘಟಕಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಇಸ್ರೇಲ್‌ ಹೇಳಿದೆ.

ದುಬೈ: ಪರ್ಷಿಯನ್‌ ಕೊಲ್ಲಿಯಲ್ಲಿರುವ ಇರಾನ್‌ ನೈಸರ್ಗಿಕ ಅನಿಲ ಘಟಕದ ಮೇಲೆ ತಾನು ನಡೆಸಿದ ಏಕಾಏಕಿ ದಾಳಿ ಭಾರೀ ಪ್ರಕೋಪಕ್ಕೆ ಕಾರಣವಾದ ಬೆನ್ನಲ್ಲೇ ಇನ್ನು ಇರಾನ್‌ನ ತೈಲ ಮತ್ತು ಅನಿಲ ಘಟಕಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಇಸ್ರೇಲ್‌ ಹೇಳಿದೆ.

Add Asianetnews Kannada as a Preferred SourcegooglePreferred

ಕತಾರ್‌ ಪಾಲುದಾರಿಕೆಯಲ್ಲಿ ಇರಾನ್‌ ಪರ್ಷಿಯನ್ ಕೊಲ್ಲಿಯಲ್ಲಿ ಸೌತ್‌ ಪರ್ಸ್‌ ಎಂಬ ಅನಿಲ ಘಟಕ ಹೊಂದಿದೆ. ಇದರ ಮೇಲೆ ಗುರುವಾರ ಇಸ್ರೇಲ್ ದಾಳಿ ನಡೆಸಿತ್ತು. ಇರಾನ್‌ ಒಟ್ಟು ವಿದ್ಯುತ್‌ ಉತ್ಪಾದನೆಗೆ ಅಗತ್ಯವಾದ ಅನಿಲದಲ್ಲಿ ಶೆ.80ರಷ್ಟು ಇಲ್ಲಿಂದಲೇ ಪೂರೈಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದಾಳಿಯಿಂದ ಆಕ್ರೋಶಗೊಂಡಿದ್ದ ಇರಾನ್‌, ಶುಕ್ರವಾರ ಹಲವು ಕೊಲ್ಲಿ ದೇಶಗಳ ಅನಿಲ ಮತ್ತು ತೈಲ ಬಾವಿ, ಸಂಸ್ಕರಣಾ ಘಟಕದ ಮೇಲೆ ದಾಳಿ ಮಾಡಿತ್ತು. ಇದು ಕಚ್ಚಾತೈಲ ಬೆಲೆ ಮತ್ತೆ 120 ಡಾಲರ್‌ಗೆ ತಲುಪುವಂತೆ ಮಾಡಿತ್ತು. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡಾ ಏಕಪಕ್ಷೀಯ ದಾಳಿಯನ್ನು ಖಂಡಿಸಿದ್ದರು. ಅದರ ಬೆನ್ನಲ್ಲೇ

‘ಇರಾನ್‌ನ ನೈಸರ್ಗಿಕ ಅನಿಲ ಸಂಸ್ಕರಣಾ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಿಲ್ಲ’ ಎಂದು ಇಸ್ರೇಲ್‌ ಘೋಷಿಸಿದೆ.

ಕೊಲ್ಲಿಯಾಚೆಗೂ ದಾಳಿ: ಇರಾನ್‌ ಎಚ್ಚರಿಕೆ

ದುಬೈ: ತನ್ನ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯಾಗಿ ಪ್ರತಿಯಾಗಿ ನೆರೆಯ ಕೊಲ್ಲಿ ದೇಶಗಳಲ್ಲಿನ ಅಮೆರಿಕ ನೆಲೆ ಮತ್ತು ಕೊಲ್ಲಿ ದೇಶಗಳ ತೈಲ, ಅನಿಲ ಘಟಕದ ಮೇಲೆ ದಾಳಿ ನಡೆಸುತ್ತಿದ್ದ ಇರಾನ್, ಇದೀಗ ತನ್ನ ದಾಳಿಯನ್ನು ಕೊಲ್ಲಿ ದೇಶದಾಚೆಗೂ ವಿಸ್ತರಿಸುವ ಎಚ್ಚರಿಕೆ ನೀಡಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೇನೆಯ ವಕ್ತಾರ ಜ.ಅಬೋಲ್ಫಜಲ್ ಶೇಕರ್ಚಿ, ‘ನಮ್ಮ ಶತ್ರುಗಳು ವಿಶ್ವದ ಯಾವುದೇ ಉದ್ಯಾನ, ಮನರಂಜನಾ ಪ್ರದೇಶ ಮತ್ತು ಪ್ರವಾಸಿ ತಾಣಗಳಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದು, ಮಧ್ಯಪ್ರಾಚ್ಯದಾದ್ಯಂತ ಇರುವ ತಮ್ಮ ಬೆಂಬಲಿತ ಪಡೆಗಳನ್ನು ಬಳಸಿಕೊಂಡು ವೈರಿಗಳನ್ನು ಅವರ ದೇಶದೊಳಗೇ ಮುಗಿಸುವ ಹುನ್ನಾರದ ಸುಳಿವೇ? ಎಂಬ ವಿಶ್ಲೇಷಣೆ ಶುರುವಾಗಿದೆ.

ಮಧ್ಯಪ್ರಾಚ್ಯಕ್ಕೆ ಅಮೆರಿಕ 3 ಯುದ್ಧ ನೌಕೆ, 2500 ಮರೀನ್‌ಗಳ ನೆರವು

ದುಬೈ: ಇರಾನ್‌ನ ಆದಾಯದ ಪ್ರಮುಖ ಕೇಂದ್ರಬಿಂದು ಖಾರ್ಗ್‌ ದ್ವೀಪ ವಶಕ್ಕೆ ಅಮೆರಿಕ ಯತ್ನಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಮಧ್ಯಪ್ರಾಚ್ಯ ರಾಷ್ಟ್ರಗಳ ಬಳಿ ಹೆಚ್ಚುವರಿಯಾಗಿ 3 ಯುದ್ಧ ನೌಕೆ ಮತ್ತು 2500 ನೌಕಾಪಡೆಗಳ ನಿಯೋಜನೆಗೆ ಮುಂದಾಗಿದೆ. ಅಮೆರಿಕ ಬಾಕ್ಸರ್‌ ಮತ್ತು ಇತರ ಎರಡು ಉಭಯಚರ ಹಡಗುಗಳು ಹಾಗೂ 11ನೇ ಸಾಗರ ದಂಡಯಾತ್ರೆ ಘಟಕದ 2500 ನೌಕಾ ಪಡೆಗಳು ಸ್ಯಾನ್‌ ಡಿಯಾಗೋದಿಂದ ಮಧ್ಯಪ್ರಾಚ್ಯಕ್ಕೆ ತೆರಳಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆದರೆ ಎಲ್ಲಿಗೆ ನಿಯೋಜನೆಯಾಗುತ್ತಿದೆ ಎನ್ನುವ ಮಾಹಿತಿ ಬಿಟ್ಟುಕೊಟ್ಟಿಲ್ಲ.