ರಾಮಮಂದಿರಕ್ಕೆ ಶಿಲಾನ್ಯಾಸ, ಅಯೋಧ್ಯೆ ರಾಜಕುಮಾರಿ ಕೊರಿಯಾ ರಾಣಿಯಾದ ಕತೆ!
ರಾಮಮಂದಿರಕ್ಕೆ ಶಿಲಾನ್ಯಾಸ/ ಸಂತಸ ವ್ಯಕ್ತಪಡಿಸಿದ ದಕ್ಷಿಣ ಕೊರಿಯಾ/ ಭಾರತ ಮತ್ತು ಕೊರಿಯಾ ಬಾಂಧವ್ಯ ಗಟ್ಟಿ/ ಇತಿಹಾಸದ ಪುಟ ತೆರೆಸಿದ ಕೊರಿಯಾ ರಾಯಭಾರಿ
ನವದೆಹಲಿ(ಆ.06) ಅಯೋಧ್ಯೆ ರಾಮಮಂದಿರ ವಿವಾದ ಸುಖಾಂತ್ಯ ಕಂಡಿದ್ದು ನಮಗೆ ಬಹಳ ಸಂತಸ ತಂದಿದೆ. ಅಯೋಧ್ಯೆ ಮತ್ತು ಕೊರಿಯಾದ ಸಿಯೋಲ್ ಗೆ ನಿಕಟ ಸಂಬಂಧ ಇದೆ ಎಂದು ದಕ್ಷಿಣ ಕೊರಿಯಾ ರಾಯಭಾರಿ ಶಿನ್ ಬೊಂಗ್ ಕಿಲ್ ಹೇಳಿದ್ದಾರೆ.
ಭವ್ಯ ರಾಮಮಂದಿರ ನಿರ್ಮಾಣ ಸಂತಸ ತಂದಿದೆ. ಇಡೀ ದೇಶವೇ ಒಂದಾಗಿ ಸುಪ್ರೀಂ ತೀರ್ಮಾನ ಸ್ವಾಗತ ಮಾಡಿದ್ದು ಪ್ರಪಂಚಕ್ಕೆ ಭಾರತ ಮಾದರಿಯಾಗಿದೆ ಎಂದು ಕೊಂಡಾಡಿದ್ದಾರೆ. ಭಾರತದ ಕಾನೂನು ವ್ಯವಸ್ಥೆಯ ಶಕ್ತಿ ಇಡೀ ಜಗತ್ತಿಗೆ ಪರಿಚಯವಾಗಿದೆ ಎಂದಿದ್ದಾರೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ದಕ್ಷಿಣ ಕೊರಿಯಾದ ಗಾಯಕಿ ಕಿಮ್ ಜುಂಗ್ ಸೂಕ್ 2018ರಲ್ಲಿ ಕ್ವೀನ್ ಹ್ ನೆನಪಿಗೋಸ್ಕರ ಅಯೋಧ್ಯೆಯಲ್ಲಿ ರಾಣಿ ಹ್ ಪಾರ್ಕ್ ಉದ್ಘಾಟನೆ ಮಾಡಿದ್ದರು ಎಂಬ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಭಾರತ ಮತ್ತು ಕೊರಿಯಾ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದ ದೊಡ್ಡ ಪಾರ್ಕ್ ಕೊರೋನಾ ಕಾರಣದಿಂದ ಈ ವರ್ಷ ಮುಕ್ತಾಯ ಕಂಡಿಲ್ಲ. ಮುಂದಿನ ವರ್ಷ ಪೂರ್ಣವಾಗುವ ವಿಶ್ವಾಸವಿದೆ ಎಂದಿದ್ದಾರೆ.
ದಕ್ಷಿಣ ಕೊರಿಯಾ ಅಂತಾರಾಷ್ಟ್ರೀಯ ಚುಚ್ಚುಮದ್ದು ಘಟಕ ದೆಹಲಿಯಲ್ಲಿ ಒಂದು ಕಚೇರಿ ತೆರೆಯಲಿದೆ. ಭಾರತದ ಸಹಭಾಗಿತ್ವದಲ್ಲಿ ಇದೊಂದು ಪ್ರಮುಖ ಘಟ್ಟ ಎಂದು ತಿಳಿಸಿದ್ದಾರೆ.
ಫಾರ್ಮಾ ಇಂಡಸ್ಟ್ರಿ ವಿಚಾರಕ್ಕೆ ಬಂದರೆ ಭಾರತ ದೊಡ್ಡದಾಗಿ ಬೆಳೆದು ನಿಂತಿದೆ. ದಕ್ಷಿಣ ಕೊರಿಯಾ ಸಹ ಒಂದೆರಡು ಕಂಪನಿಗಳನ್ನು ಹೊಂದಿದ್ದು ಜತೆಯಾಗಿ ಕೆಲಸ ಮಾಡಲಿವೆ ಎಂದಿದ್ದಾರೆ.
ಭಾರತದ ರಾಜಕುಮಾರಿ ಕೊರಿಯಾದ ರಾಜ ಕಿಮ್ ಸುರೋ ಅವರನ್ನು ಮದುವೆಯಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಭಾರತದಲ್ಲಿ ಸಿಕ್ಕ ಅನೇಕ ವಾಸ್ತುಶಿಲ್ಪಗಳ ಮೇಲೆ ಕೊರಿಯಾ ಪರಿಣಾಮ ಇದೆ ಎಂದು ಇತಿಹಾಸದ ಪುಟಗಳನ್ನು ಮೆಲಕು ಹಾಕುತ್ತಾರೆ. ರಾಜ ಕಿಮ್ ಸುರೋ ಒಂದು ದಂತಕತೆ ಎಂದು ಮೊದಲು ಭಾವಿಸಲಾಗಿತ್ತು, ಆದರೆ ನಂತರ ಅನೇಕ ದಾಖಲೆ ಸಿಕ್ಕವು ಎಂದಿದ್ದಾರೆ.