* ಲಸಿಕೆ ಪಡೆದವರಿಗೆ ನಿಟ್ಟುಸಿರು ಬಿಡುವಂತೆ ಮಾಡಿದ ಸಂಶೋಧನಾ ವರದಿ* ಪದೇ ಪದೇ ಲಸಿಕೆ ಪಡೆಯೋ ಅಗತ್ಯವಿಲ್ಲ ಎಂದ ವಿಜ್ಞಾನಿಗಳು* ಮುಂದಿನ ಅಲೆ ದಾಳಿ ಇಟ್ಟರೂ ಅಪಾಯವಿಲ್ಲ

ನವದೆಹಲಿ(ಮೇ.31): ಕೊರೋನಾ ವಿಚಾರವಾಗಿ ಎರಡು ಹೊಸ ಸಂಶೋಧನೆಗಳು ಹೊಸದೊಂದು ಭರವಸೆ ಹುಟ್ಟಿಸಿವೆ. ಕೊರೋನಾ ವ್ಯಾಕ್ಸಿನ್, ಲಸಿಕೆ ಪಡೆದವರಿಗೆ ಜೀವನ ಪರ್ಯಂತ ಈ ಸೋಂಕಿನಿಂದ ರಕ್ಷಿಸಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಸಂಶೋಧನೆ ಅನ್ವಯ ಕೊರೋನಾ ಸೋಂಕಿನ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು ಜೀವನ ಪರ್ಯಂತ ಇರಲಿವೆ. ಹೀಗಿದ್ದರೂ ಲಸಿಕೆ ಪಡೆದವರಿಗೆ ಸೋಣಕು ತಗುಲುವ ಸಾಧ್ಯತೆ ಇದೆ ಎಂಬುವುದನ್ನೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಲಸಿಕೆ ಪಡೆದವರ ಕೊರೋನಾ ವೈರಸ್ ವಿರುದ್ಧ ಹೋರಾಡಬಲ್ಲ ರೋಗ ನಿರೋಧಕ ಶಕ್ತಿ ಹುಟ್ಟಿಕೊಳ್ಳಲಿದ್ದು, ಇದು ದೀರ್ಘ ಕಾಲದವರೆಗೆ ದೇಹವನ್ನು ಈ ಸೋಂಕಿನಿಂದ ರಕ್ಷಿಸಲಿದೆ ಎಂಬುವುದೇ ಸಂತಸದ ವಿಚಾರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನೇಕ ನ್ಯೂನತೆಗಳಿವೆ: ಲಸಿಕೆ ಅಭಿಯಾನದ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ಚಾಟಿ!

ಪದೇ ಪದೇ ಲಸಿಕೆ ಹಾಕಿಸಿಕೊಳ್ಳುವ ಆತಂಕ ಎದುರಾಗಿತ್ತು

ಈ ಸಂಶೋಧನೆಯಿಂದ ಕೊರೋನಾ ಲಸಿಕೆ ಪದೇ ಪದೇ ಪಡೆಯಬೇಕೆಂಬ ಭೀತಿಯೂ ದೂರವಾಗಲಿದೆ. ಈ ಹಿಂದೆ ಲಸಿಕೆ ಪಡೆದ ಬಳಿಕ ಕೊರೋನಾದ ಹೊಸ ತಳಿ ವಿರುದ್ಧ ಹೋರಾಡಲು ಲಸಿಕೆ ಮತ್ತೆ ಹಾಕಿಸಿಕೊಳ್ಳಬೇಕೆಂಬ ಭೀತಿ ಇತ್ತು. ಆದರೀಗ ಈ ಚಿಂತೆ ಮಾಯವಾಗಿದೆ.

ಲಸಿಕೆ ಬಳಿಕ ಪ್ರತಿರೋಧಕ ಕ್ಷಮತೆ ಎಷ್ಟಿರುತ್ತದೆ?

ಈ ಸಂಶೋಧನೆಯಲ್ಲಿ Sars-2 ಅಥವಾ Covid-19 ಸೋಂಕಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಕನಿಷ್ಠವೆಂದರೂ ಒಂದು ವರ್ಷ ಇರುತ್ತದೆ. ಆದರೆ ಕೆಲವರಲ್ಲಿ ಕೊರೋನಾ ವಿರುದ್ಧ ಹೋರಾಡಬಲ್ಲ ಪ್ರತಿಕಾಯ ಒಂದು ದಶಕಕ್ಕೂ ಹೆಚ್ಚಿನ ಸಮಯ ಇರುತ್ತದೆ ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ.

ಲಸಿಕೆ ವಿತರಣೆ: ದ. ಭಾರತಕ್ಕೇ ಕರ್ನಾಟಕ ನಂ.1!

ಯಾವ ಆಧಾರದಲ್ಲಿ ವಿಜ್ಞಾನಿಗಳು ಈ ವರದಿ ಕೊಟ್ಟಿದ್ದಾರೆ?

ವಿಜ್ಞಾನಿಗಳು ಈ ಸಂಶೋಧನಾ ವರದಿಯನ್ನು ದೇಹದ ಮೂಳೆ ಮಜ್ಜೆ(Bone Marrow) ಆಧಾರದಲ್ಲಿ ನೀಡಿದ್ದಾರೆ. ಸಾರ್ಸ್‌-2 ವಿರುದ್ಧ ಹೋರಾಡಲು ಬೋನ್‌ ಮ್ಯಾರೋ ಕೂಡಾ ಪ್ರತಿಕಾಯ ತಯಾರಿಸುವ ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ. ಎರಡೂ ಸಂಶೋಧನೆಯಲ್ಲಿ ವಿಜ್ಞಾನಿಗಳು ಬೋನ್‌ ಮ್ಯಾರೋನಲ್ಲಿರುವ ಇಮ್ಯೂನಿಟಿ ಸೆಲ್‌ಗಳ ಅಧ್ಯಯನ ನಡೆಸಿದ್ದಾರೆ.

ಈ ಜೀವಕೋಶಗಳು ಬೋನ್‌ ಮ್ಯಾರೋನಲ್ಲಿರುತ್ತವೆ. ಅಗತ್ಯ ಬಿದ್ದಾಗ ಇವು ಪ್ರತಿಕಾಯವನ್ನು ತಯಾರಿಸುತ್ತವೆ, ಕೊರೋನಾದಿಂದ ಗುಣಮುಖರಾದ ಕೆಲ ತಿಂಗಳ ಬಳಿಕ ರಕ್ತದಲ್ಲಿ ರೋಗ ನಿರೋಧಕ ಕಣಗಳು ಕಡಿಮೆಯಾಗುತ್ತವೆ ಎಂಬುವುದೂ ಇದರಲ್ಲಿ ಬಯಲಾಗಿದೆ.

ಬೂಸ್ಟರ್ ಲಸಿಕೆ ಅಗತ್ಯ ಬೀಳುವುದಿಲ್ಲ

ಇನ್ನು ಈ ಸಂಶೋಧನೆಯಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದ ವಿಚಾರವೆಂದರೆ ಕೊರೋನಾದ ಮುಂದಿನ ಅಲೆಯಲ್ಲಿ ಲಸಿಕೆ ಪಡೆದವರ ಆರೋಗ್ಯ ಸ್ಥಿತಿ ಗಂಭೀರವಾಗುವುದಿಲ್ಲ. ಯಾರೆಲ್ಲಾ ಲಸಿಕೆ ಪಡೆದಿದ್ದಾರೋ ಅವರ ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡಲು ಬೇಕಾಗುವ ರೋಗ ನಿರೋಧಕ ಶಕ್ತಿ ಇರುತ್ತದೆ. ಹೀಗಾಗಿ ಬೂಸ್ಟರ್ ಲಸಿಕೆ ಪಡೆಯುವ ಅಗತ್ಯ ಬೀಳುವುದಿಲ್ಲ ಎಂದು ತಿಳಿಸಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona