ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಚೀನಾ ಒತ್ತಾಯಿಸಿದೆ. ಟೆಹ್ರಾನ್ ಸ್ಫೋಟದಲ್ಲಿ ತನ್ನ ಪ್ರಜೆಯೊಬ್ಬರು ಸಾವನ್ನಪ್ಪಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ಯುದ್ಧವು ಬೇರೆ ದೇಶಗಳಿಗೆ ಹರಡದಂತೆ ತಡೆಯುವುದೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ.

ಬೀಜಿಂಗ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಇಡೀ ಪಶ್ಚಿಮ ಏಷ್ಯಾವನ್ನು ಆವರಿಸುತ್ತಿರುವ ಹೊತ್ತಲ್ಲಿ, ಚೀನಾ ಕೊನೆಗೂ ಮೌನ ಮುರಿದು ಶಾಂತಿಗಾಗಿ ಕರೆ ನೀಡಿದೆ. ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಚೀನಾದ ವಿದೇಶಾಂಗ ಇಲಾಖೆ ಆಗ್ರಹಿಸಿದೆ. ಇರಾನ್‌ನ ಸರ್ವೋಚ್ಚ ನಾಯಕನನ್ನು ಹತ್ಯೆಗೈದ ಟೆಹ್ರಾನ್ ಮೇಲಿನ ದಾಳಿಯಲ್ಲಿ ಚೀನಾದ ಪ್ರಜೆಯೊಬ್ಬರು ಸಾವನ್ನಪ್ಪಿರುವುದನ್ನು ಚೀನಾ ಗಂಭೀರವಾಗಿ ಪರಿಗಣಿಸಿದೆ.

ಕ್ಷಿಪಣಿ ದಾಳಿಯಲ್ಲಿ ಓರ್ವ ಚೀನಾ ಪ್ರಜೆ ಸಾವು

ಪಶ್ಚಿಮ ಏಷ್ಯಾದ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ಯುದ್ಧವು ಬೇರೆ ದೇಶಗಳಿಗೆ ಹರಡದಂತೆ ತಡೆಯುವುದಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೋ ನಿಂಗ್ ಹೇಳಿದ್ದಾರೆ. ಟೆಹ್ರಾನ್‌ನಲ್ಲಿ ನಡೆದ ಅಮೆರಿಕ-ಇಸ್ರೇಲ್ ದಾಳಿಯಲ್ಲೇ ಚೀನಾದ ಪ್ರಜೆ ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನೀಡುವಂತೆ ಇರಾನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಗೆ ಸರ್ಕಾರ ಸೂಚನೆ ನೀಡಿದೆ.

ಇರಾನ್ ತೊರೆದಿರುವ 3 ಸಾವಿರಕ್ಕೂ ಅಧಿಕ ಪ್ರಜೆಗೆಳು

ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸೋಮವಾರದೊಳಗೆ ಸುಮಾರು 3,000ಕ್ಕೂ ಹೆಚ್ಚು ಚೀನಾ ಪ್ರಜೆಗಳು ಇರಾನ್ ತೊರೆದಿದ್ದಾರೆ. ಈ ಪ್ರದೇಶಕ್ಕೆ ಪ್ರಯಾಣಿಸದಂತೆ ಚೀನಾ ಕಳೆದ ವಾರವೇ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿತ್ತು. ಒಂದು ಸಾರ್ವಭೌಮ ರಾಷ್ಟ್ರದ ನಾಯಕನ ಮೇಲೆ ದಾಳಿ ಮಾಡುವುದು ಮತ್ತು ಅಲ್ಲಿನ ಸರ್ಕಾರವನ್ನು ಬದಲಿಸಲು ಯತ್ನಿಸುವುದು ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ರಷ್ಯಾದ ವಿದೇಶಾಂಗ ಸಚಿವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಖಂಡಿಸಿದ್ದಾರೆ.

Scroll to load tweet…

ಇರಾನ್‌ನ ಕ್ಷಿಪಣಿ ದಾಳಿಯ ನಂತರ ದುಬೈ, ದೋಹಾ ಮತ್ತು ಮನಾಮಾದಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ವರದಿಗಳು ತಿಳಿಸಿವೆ. ಅಮೆರಿಕದ ಸೇನಾ ನೆಲೆಗಳ ಮೇಲೆ 'ಇತಿಹಾಸದಲ್ಲೇ ಅತ್ಯಂತ ಕಠಿಣ ದಾಳಿ' ನಡೆಸುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಪಡೆ ಎಚ್ಚರಿಕೆ ನೀಡಿದೆ.

YouTube video player