ಸಂತೋಷ್ ತಂಗಿದ್ದ ಹೋಂ ಸ್ಟೇಗೆ ಪೊಲೀಸರ ಭೇಟಿ, ಮಹತ್ವದ ದಾಖಲೆ ಕಲೆಹಾಕಿದ ತಂಡ!
ಬೆಳಗಾವಿಯ ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ಚಿಕ್ಕಮಗಳೂರಿನ ಹೋಂ ಸ್ಟೇ ಅಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಈ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಹೋಂ ಸ್ಟೇ ಗೆ ಭೇಟಿ ನೀಡಿ ಪ್ರಮುಖ ದಾಖಲೆಗಳನ್ನು ಕಲೆಹಾಕಿದ್ದಾರೆ.
ಬೆಂಗಳೂರು (ಏ.16): ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಆತ್ಮಹತ್ಯೆ (Suicide) ಪ್ರಕರಣದಲ್ಲಿ ಪೊಲೀಸರು (Police) ತನಿಖೆ ಚುರುಕು ಮಾಡಿದ್ದಾರೆ. ಸಂತೋಷ್ ಪಾಟೀಲ್ ಉಡುಪಿಯ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಚಿಕ್ಕಮಗಳೂರಿನ (Chikkamagaluru) ಹೋಮ್ ಸ್ಟೇ ಅಲ್ಲಿ ಮೂರು ದಿನ ತಂಗಿದ್ದರು.
ಈ ನಿಟ್ಟಿನಲ್ಲಿ ಹೋಂ ಸ್ಟೇ ಗೆ ಭೇಟಿ ನೀಡಿದ ಉಡುಪಿಯ ಪೊಲೀಸರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮುಳ್ಳಯ್ಯನ ಗಿರಿ ರಸ್ತೆಯಲ್ಲಿರುವ ಖಾಸಗಿ ಹೋಂ ಸ್ಟೇಯಲ್ಲಿ ಸಂತೋಷ್ ಪಾಟೀಲ್ ತಂಗಿದ್ದರು. ಶನಿವಾರ ಇಲ್ಲಿಗೆ ತೆರಳಿದ ಪೊಲೀಸರು ವಿಚಾರಣೆ ನಡೆಸಿ ಮಹತ್ವದ ಕೆಲ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
ನಮ್ಮೂರಿನ ಕಂಟ್ರಾಕ್ಟರ್ ಗಳು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಊರು ಬಿಟ್ಟಿದ್ದಾರೆ
ಹೋಂ ಸ್ಟೇಯಲ್ಲಿ ಸಂತೋಷ್ ಹಾಗೂ ಅವರ ಸ್ನೇಹಿತರು ತಂಗಿದ್ದರು. ಸಿಸಿಟಿವಿಯ ಡಿವಿಆರ್ ಸೇರಿ ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ಪ್ರಸಾರ ಮಾಡಿತ್ತು. ಚಿಕ್ಕಮಗಳೂರಿನಿಂದ ಉಡುಪಿಗೆ ತೆರಳಿದ್ದ ಸಂತೋಷ್ ಪಾಟೀಲ್, ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.