Asianet Suvarna News Asianet Suvarna News

ಕಾರವಾರ: ಸಿಆರ್‌ಝಡ್ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ, ಮೀನುಗಾರರಿಗೆ ಸಂಕಷ್ಟ

- ಸಿಆರ್‌ಝಡ್ ನಿಯಮ ಉಲ್ಲಂಘಿಸಿ ಕಾರವಾರ ನಗರಸಭೆಯಿಂದ ಪಾರ್ಕ್ ನಿರ್ಮಾಣ 

- ಕಾಳಿ ನದಿಗೆ ಮಣ್ಣು ಹಾಗೂ ಕಸದ ರಾಶಿ ಹಾಕಿ ನಗರಸಭೆಯಿಂದ ಪಾರ್ಕ್ ಕಾಮಗಾರಿ 

- ಪಾರ್ಕ್ ನಿರ್ಮಾಣದಿಂದ ಸ್ಥಳೀಯ ಮೀನುಗಾರರಿಗೂ ತಪ್ಪದ ಸಂಕಷ್ಟ 

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ವ ಹಿತಾಸಕ್ತಿಯಿಂದ ನಡೆಸುವ ಕೆಲವೊಂದು ಕಾಮಗಾರಿಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಬಿಡುತ್ತವೆ. ಜನಪರ ಕಾರ್ಯ ನಡೆಸೋ ಬದಲು ಜನರ ವಿರೋಧದ ನಡುವೆಯೇ ಕಾಮಗಾರಿ ಕೈಗೊಳ್ಳಲು ಮುಂದಾಗುತ್ತಾರೆ. ಈ ಮೂಲಕ ಜನಸಾಮಾನ್ಯರ ಆಕ್ರೋಶಕ್ಕೆ ತುತ್ತಾಗುತ್ತಾರೆ. ಅಂತದ್ದೇ ಒಂದು ಎಡವಟ್ಟಿನ ಕಾಮಗಾರಿಗೆ ಕಾರವಾರದ ನಗರ ಸಭೆ ಮುಂದಾಗಿದ್ದು,‌ ಈ ಮೂಲಕ ಸಿಆರ್‌ಝಡ್ ನಿಯಮ (CRZ Rule) ಉಲ್ಲಂಘಿಸಿ ಪಾರ್ಕ್ (Park) ನಿರ್ಮಾಣ ಮಾಡ ಹೊರಟಿದ್ದಲ್ಲದೇ, ಮೀನುಗಾರರ ಹೊಟ್ಟೆ ಮೇಲೆ ಹೊಡೆಯುತ್ತಿದೆ. 

ಸಾರ್ವಜನಿಕರಿಗಾಗಿ ನಿರ್ಮಾಣ ಮಾಡೋ ಕಾಮಗಾರಿಯನ್ನು ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಸಾರ್ವಜನಿಕರ ವಿರೋಧದ ನಡುವೆಯೇ ನಿರ್ಮಾಣ ಮಾಡಲು ಮುಂದಾಗಿದೆ.  ಕಾರವಾರ ತಾಲೂಕಿನ ಸುಂಕೇರಿಯ ಕಾಳಿ ನದಿ ತಟದಲ್ಲಿ ಕಾರವಾರ ನಗರ ಸಭೆಯು ಪಾರ್ಕ್ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದೆ. ಇದರಿಂದಾಗಿ ಸ್ಥಳೀಯ ಮೀನುಗಾರರ ಬದುಕು ಸಂಪೂರ್ಣ ದುಸ್ಥಿತಿಗೆ ಬಂದಂತಾಗಿದ್ದು, ಕಾಳಿ ನದಿಯ ಮೇಲೆಯೂ ಪರಿಣಾಮ ಬೀರಲಾರಂಭಿಸಿದೆ. 

BIG 3: ಈ ಸೇತುವೆಯಲ್ಲಿ ನಡೆದಾಡಲಿಕ್ಕೆ ಗುಂಡಿಗೆ ಬೇಕು: ಅಡಿಕೆ ಮರವೇ ಸೇತುವೆ..!

ಕಾರವಾರ ನಗರಸಭೆಯು ಸುಂಕೇರಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗೋ ಮೂಲಕ ಸಿಆರ್‌ಝಡ್ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಕಾರವಾರದಲ್ಲಿ ಕಾಳಿ ನದಿ ವ್ಯಾಪ್ತಿ ಸಿಆರ್‌ಝಡ್‌ನಡಿ ಬರೋದ್ರಿಂದ ಯಾವುದೇ ಕಾಮಗಾರಿಯನ್ನು ಈ ವ್ಯಾಪ್ತಿಯಲ್ಲಿ ನಡೆಸಬಾರದು ಅನ್ನೋ ನಿಮಯಗಳಿವೆ. ಆದರೆ, ನಗರಸಭೆ ಮಾತ್ರ ಈ ನಿಯಮವನ್ನು ಉಲ್ಲಂಘಿಸಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ. ಮ್ಯಾಂಗ್ರೋವ್ ಗಿಡಗಳು ಕೂಡಾ ಕಾಳಿ ನದಿ ತಟದಲ್ಲಿ ಬಹಳ ಸೊಂಪಾಗಿ ಬೆಳೆಯುತ್ತಿರುವುದರಿಂದ ಅವುಗಳನ್ನು ಕೂಡಾ ಕತ್ತರಿಸಿ ಅದರ ಮೇಲೆ ಕಸಗಳು ತುಂಬಿದ ಮಣ್ಣನ್ನು ಹಾಕಿ ಕಾಳಿ ನದಿಯ ಹರಿವನ್ನೇ ಮುಚ್ಚಿ ಹಾಕಲಾಗಿದೆ.‌ ಮಣ್ಣು ಮುಚ್ಚಿರುವ ಕಾರಣದಿಂದ ಮುಂದಿನ ಮಳೆಗಾಲದಲ್ಲಿ ಸ್ಥಳೀಯ ಮನೆಗಳು ನೆರೆಯಿಂದ ಸಂಕಷ್ಟಕ್ಕೀಡಾಗುವ ಸಾಧ್ಯತೆಗಳಿವೆ.

ಕಾರವಾರ: ಚಾರಣ ಪ್ರಿಯರು ಒಮ್ಮೆ ಬರಲೇಬೇಕಾದ ಜಾಗ ಭೀಮನ ಬುಗರಿ ಗುಡ್ಡ..!

 ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾಡಲು ಸಾಕಷ್ಟು ಕೆಲಸಗಳಿದ್ದು, ಪಾರ್ಕ್ ನಿರ್ಮಾಣ ಮಾಡೋ ಹಣದಲ್ಲಿ ಈ ಗ್ರಾಮದ ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಬಹುದು ಅನ್ನೋದು ಸ್ಥಳೀಯ ಅಭಿಪ್ರಾಯ. ಈಗಾಗಲೇ ಸುಮಾರು 200 ಮೀಟರ್ ನಷ್ಟು ಕಾಳಿ ನದಿ ತಟವನ್ನು ನಗರ ಸಭೆ ಮುಚ್ಚಿರೋದ್ರಿಂದ ಮೀನುಗಾರರ ಹೊಟ್ಟೆ ಮೇಲೆ‌ ಹೊಡೆದಂತಾಗಿದೆ. ಇಲ್ಲಿ ತ್ಯಾಜ್ಯಗಳನ್ನು ಕೂಡಾ ತಂದು ಹಾಕಿರೋದ್ರಿಂದ ಜಲಚರಗಳು ಕೂಡಾ ಸಾವನ್ನಪ್ಪಿವೆ. ಈ ಕಾರಣದಿಂದ ಈ ಯೋಜನೆಯನ್ನು ನಿಲ್ಲಿಸಿ ಹಾಕಿರೋ ಮಣ್ಣನ್ನು ತೆಗೆಯಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

Video Top Stories