Asianet Suvarna News Asianet Suvarna News

ಆರ್ಥಿಕ ಸಂಕಷ್ಟ.. ಹೊನ್ನಾವರದ ಬಾಡಿಗೆ ಮನೆ ಖಾಲಿ ಮಾಡಿದ ನಟಿ ವಿಜಯಲಕ್ಷ್ಮೀ

* ಹಳ್ಳಿಯಲ್ಲಿ ಬಾಡಿಗೆಮನೆಯಲ್ಲಿದ್ದ ನಟಿ  ವಿಜಯಲಕ್ಷ್ಮಿ!

* ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಚಲನಚಿತ್ರ ನಟಿ ವಿಜಯಲಕ್ಷ್ಮಿ

* ಕಳೆದ 5-6 ದಿನಗಳಿಂದ ಹೊನ್ನಾವರದ ಕರ್ಕಿಯಲ್ಲಿ ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿದ್ದ ವಿಜಯಲಕ್ಷ್ಮೀ 

* ಇಂದು ಬೆಳಗ್ಗೆ ಕುಟುಂಬ ಸಮೇತ ಬೆಂಗಳೂರಿಗೆ ವಾಪಾಸ್ ತೆರಳಿದ ನಟಿ

ಕಾರವಾರ, ಉತ್ತರಕನ್ನಡ(ಸೆ. 24) ಸೋಶಿಯಲ್ ಮೀಡಿಯಾ ಮೂಲಕ ಅಳಲು ತೋಡಿಕೊಳ್ಳುತ್ತಿದ್ದ ನಟಿ ವಿಜಯಲಕ್ಷ್ಮಿ ಹೊನ್ನಾವರದ ಬಾಡಿಗೆ ಮನೆಯಲ್ಲಿ ಇದ್ದರು.  ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಚಲನಚಿತ್ರ ನಟಿ ವಿಜಯಲಕ್ಷ್ಮಿ ಕಳೆದ 5-6 ದಿನಗಳಿಂದ ಹೊನ್ನಾವರದ ಕರ್ಕಿಯಲ್ಲಿ ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿದ್ದವರು ಮನೆ ಖಾಲಿ ಮಾಡಿದ್ದಾರೆ.

ತಮ್ಮ ಸಂಕಷ್ಟದ ಬಗ್ಗೆ ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಮಾಡಿ ಹರಿ ಬಿಡುತ್ತಿದ್ದ ವಿಜಯಲಕ್ಷ್ಮೀ ಕೋವಿಡ್ ಕಾರಣದಿಂದ ಅಸ್ಪತ್ರೆ ಸೇರಿದ್ದಾಗ ಆಸ್ಪತ್ರೆ ವೆಚ್ಚವನ್ನು ಕೂಡಾ ಭರಿಸಲಾಗದ ಸ್ಥಿತಿಯಲ್ಲಿದ್ದರು. ಈ ವೇಳೆ ಹೊನ್ನಾವರದ ಸಮಾಜ ಸೇವಕ ತುಕಾರಾಮ ನಾಯ್ಕ ಕರ್ಕಿ ಅವರ ಮಗಳು ಆಸ್ಪತ್ರೆ ಬಿಲ್ ಭರಿಸಿದ್ದರು . ಅಲ್ಲದೇ, ತಂದೆಯ ಮೂಲಕ ಹೊನ್ನಾವರದ ಕರ್ಕಿಯಲ್ಲಿ ಉಳಿದುಕೊಳ್ಳಲು ಮನೆಯ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಕಣ್ಣೀರು ಬತ್ತಿ ಹೋಗಿದೆ ಎಂದ ನಟಿ 

ತುಕಾರಾಮ ನಾಯ್ಕ ಅವರೇ 4000ರೂ. ಪಾವತಿಸಿ ಬಾಡಿಗೆ ಮನೆ  ಹಾಗೂ ಮನೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅನಾರೋಗ್ಯ ಪೀಡಿತ ತಾಯಿ ಹಾಗೂ ತಂಗಿಯನ್ನು ಕರೆದುಕೊಂಡು  ಹೊನ್ನಾವರಕ್ಕೆ ಬಂದಿದ್ದರು. ನಡೆದಾಡಲು ಸಾಧ್ಯವಾಗದೆ, ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿರುವ ನಟಿಯ ತಾಯಿ ಮತ್ತು ಸಹೋದರಿ ಇದ್ದರು. "ನಾಗಮಂಡಲ" ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ವಿಜಯಲಕ್ಷ್ಮಿ  'ಜೋಡಿಹಕ್ಕಿ', 'ಭೂಮಿ ತಾಯಿಯ ಚೊಚ್ಚಲ ಮಗ', 'ಮಾತಿನ ಮಲ್ಲ', 'ಸ್ವಸ್ತಿಕ್', 'ಹಬ್ಬ', 'ಸೂರ್ಯವಂಶ' ಮುಂತಾದ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು. ತಮಿಳಿನಲ್ಲಿ 'ಫ್ರೆಂಡ್ಸ್', 'ರಾಮಚಂದ್ರ', 'ಮಿಲಿಟರಿ', 'ಯೆಸ್ ಮೇಡಮ್', 'ಬಾಸ್ ಎಂಗಿರ ಭಾಸ್ಕರನ್' ಮುಂತಾದ ಚಿತ್ರಗಳಲ್ಲಿ ಮಿಂಚಿದ್ದರು. ಇನ್ನು ತೆಲುಗಿನ 'ಹನುಮಾನ್ ಜಂಕ್ಷನ್' ಚಿತ್ರದಲ್ಲೂ ನಟಿಸಿದ್ದ ನಟಿ ವಿಜಯಲಕ್ಷ್ಮಿ ನೆರವಿಗೆ ಕೇಳಿಕೊಂಡಿದ್ದರು. 

Video Top Stories