Asianet Suvarna News Asianet Suvarna News

Vastu Tips: ಗೋಡೆ ಮೂಲೆಯಲ್ಲೆಲ್ಲೋ ಅಶ್ವತ್ಥ ಗಿಡ ಬೆಳೀತಿದ್ಯಾ? ಕಿತ್ತಾಕುವ ಮುನ್ನ ಇದನ್ನೋದಿ

ಪ್ರತಿ ದಿನ ಅಶ್ವತ್ಥ ಮರದ ಪೂಜೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ದೇವಾನುದೇವತೆಗಳ ವಾಸಸ್ಥಾನವಾಗಿರುವ ಅಶ್ವತ್ಥ ಮರವನ್ನು ಎಲ್ಲ ಕಡೆ ಬೆಳೆಸೋದು ಸೂಕ್ತವಲ್ಲ. ಮನೆಯಲ್ಲಿ ಅದು ಬೆಳೆದುಕೊಂಡಿದ್ರೆ ಸ್ವಲ್ಪ ಎಚ್ಚರಿಕೆವಹಿಸ್ಬೇಕು. 
 

What To Do If Peepal Tree Grows In House
Author
First Published May 24, 2023, 12:39 PM IST

ಮನೆಯ ಮುಂದೆ ಅಥವಾ ಮನೆಯ ಗೋಡೆ ಮೂಲೆಯಲ್ಲಿ ನಾವು ಬೀಜ ಹಾಕದೆ ಯಾವ್ಯಾವುದೋ ಸಸಿ ಮೊಳಕೆಯೊಡೆದಿರುತ್ತದೆ. ಸುಂದರವಾದ ಹೂ ಬಿಟ್ಟಾಗ ಕೆಲವೊಮ್ಮೆ ಅಚ್ಚರಿಯಾಗೋದಿದೆ. ಅಲ್ಲಿ ಯಾರೂ ಗಿಡ ಬೆಳೆಸಿಲ್ಲ, ಬೀಜ ಹಾಕಿಲ್ಲ, ಅದು ಹೇಗೆ ಹುಟ್ಟಿಕೊಂಡಿತು ಎನ್ನುವ ಪ್ರಶ್ನೆ ನಮ್ಮನ್ನು ಖಾಡುತ್ತದೆ. ಅಶ್ವತ್ಥ ಗಿಡ ಕೂಡ ಇದಕ್ಕೆ ಹೊರತಾಗಿಲ್ಲ. ನಮ್ಮ ಮನೆಯ ಗೋಡೆಯ ಮೂಲೆಯಲ್ಲಿ ಅಥವಾ ಗೇಟ್ ಪಕ್ಕದಲ್ಲಿ ಅಶ್ವತ್ಥ ಮರದ ಎಲೆಗಳು ಕಾಣಿಸಿಕೊಳ್ಳಲು ಶುರುವಾಗಿರುತ್ತದೆ. ಹಿಂದೂ ಧರ್ಮದಲ್ಲಿ ಅಶ್ವತ್ಥ ಮರವನ್ನು ಪವಿತ್ರವೆಂದು ನಂಬಲಾಗಿದೆ. ಹಾಗಾಗಿ ಬೆಳೆದ ಗಿಡವನ್ನು ಕೀಳಲು ಜನರು ಮುಂದೆ ಬರೋದಿಲ್ಲ. ಹಾಗಂತ ಅದನ್ನು ಬೆಳೆಸುವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಎಲೆಗಳು, ಬೇರುಗಳು ಅಥವಾ ಹಣ್ಣುಗಳ ಮೂಲಕವೂ ಬೆಳೆಯಬಹುದು. ಸಾಮಾನ್ಯವಾಗಿ ಅದರ ಬೀಜ ಅಥವಾ ಬೇರಿನ ಒಂದು ಭಾಗ ಗೋಡೆಗೆ ಸಿಲುಕಿಕೊಂಡಿದ್ದರೆ, ಅದಕ್ಕೆ ನೀರು ಬೀಳ್ತಿದ್ದರೆ ಅಶ್ವತ್ಥ ಗಿಡ ಬೆಳೆಯಲು ಶುರುವಾಗುತ್ತದೆ. ಕೆಲವೊಮ್ಮೆ ಅಶ್ವತ್ಥ ಮರ  ಮನೆಯ ಹತ್ತಿರ ಎಲ್ಲೋ ಇದ್ದರೆ, ಅದರ ಬೇರು ನೆಲದ ಒಳಗಿನಿಂದ ಮನೆಗೆ ತಲುಪುತ್ತದೆ. ಮನೆಯ ಗೋಡೆ ಬಳಿ ಅಶ್ವತ್ಥ ಗಿಡ ಬೆಳೆದುಕೊಳ್ತಿದ್ದರೆ ಅದನ್ನು ಏನು ಮಾಡ್ಬೇಕು, ಅದ್ರಿಂದ ಆಗುವ ಲಾಭ – ನಷ್ಟವೇನು ಎಂಬುದನ್ನು ನಾವಿಂದು ಹೇಳ್ತೇವೆ.

ಮನೆ (House) ಯ ಯಾವುದೇ ಮೂಲೆಯಲ್ಲಿ ಅಶ್ವತ್ಥ (Peepal) ಮರ ಬೆಳೆಯುತ್ತಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಶ್ವತ್ಥ ಮರದಲ್ಲಿ ದೇವರು ಮತ್ತು ದೇವತೆಗಳು ವಾಸಿಸುತ್ತವೆ ಎಂದು ನಂಬಲಾಗಿದೆ.  ಇದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಮನೆಯಲ್ಲಿ ಬೆಳೆದರೆ ಒಳ್ಳೆಯದಲ್ಲ. ಅದು ಪಿತೃ ದೋಷಕ್ಕೆ ಕಾರಣವಾಗುತ್ತದೆ. 

ಭಾನುವಾರ ಅಶ್ವತ್ಥ ಮರವನ್ನು ಪೂಜಿಸಿದ್ರೆ ಮನೆಗೆ ಬರ್ತಾಳೆ ದರಿದ್ರ ಲಕ್ಷ್ಮೀ! ಯಾಕೆ ಗೊತ್ತಾ?

ಮನೆಯ ಗೋಡೆಯಲ್ಲಿ ಅಥವಾ ಮನೆಯ ಗೇಟ್ ಬಳಿ ಅಶ್ವತ್ಥ ಮರ ಬೆಳೆಯುತ್ತಿದ್ದರೆ ಇದು ಕೌಟುಂಬಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅಶ್ವತ್ಥ ಮರದ ಬೇರು ದಟ್ಟವಾಗಿರುತ್ತದೆ. ದಪ್ಪವಾಗಿರುತ್ತದೆ ಮತ್ತು ಎಲ್ಲೆಡೆ ಹರಡಿಕೊಂಡಿರುತ್ತದೆ. ಈ ಸಮಯದಲ್ಲಿ ಮನೆಯ ಗೋಡೆಗೆ ಅಶ್ವತ್ಥ ಮರ ಬೆಳೆದರೆ, ಅದು ಮನೆಯಲ್ಲಿ ಬಿರುಕು ಉಂಟುಮಾಡುತ್ತದೆ. ಇದು ಕುಟುಂಬದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅಶ್ವತ್ಥ ಮರ ಮನೆಯಲ್ಲಿ ಬೆಳೆದ್ರೆ ಅದು ಮನೆಯವರ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

ಹಣದ ನಷ್ಟ ಮತ್ತು ವೈಫಲ್ಯಕ್ಕೂ ಅಶ್ವತ್ಥ ಮರ ಕಾರಣವಾಗುತ್ತದೆ. ಮನೆಯಲ್ಲಿ ಪದೇ ಪದೇ ಅಶ್ವತ್ಥ ಗಿಡ ಚಿಗುರೊಡೆಯುತ್ತಿದ್ದರೆ ಕುಟುಂಬಸ್ಥರ ಮಧ್ಯೆ ಗೊಂದಲ, ಭಿನ್ನಾಭಿಪ್ರಾಯ, ಉದ್ವೇಗ ಇತ್ಯಾದಿ  ಕಾಣಿಸಿಕೊಳ್ಳುತ್ತದೆ. ಪೂರ್ವಜರ ಕೋಪ ಇದಕ್ಕೆ ಕಾರಣ. ಪಿತೃ ದೋಷದಿಂದ ಮೊದಲು ಹೊರಬರಬೇಕಾಗುತ್ತದೆ. ಇಲ್ಲವೆಂದ್ರೆ  ಜೀವನದಲ್ಲಿ ಅಶುಭ ಘಟನೆಗಳು ನಡೆಯುತ್ತಿರುತ್ತವೆ. ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಯಾವುದೇ ಕೆಲಸ ಕೈಗೂಡುವುದಿಲ್ಲ. ಸದಾ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಅಶ್ವತ್ಥ ಮರ ಬೆಳೆಯುತ್ತಿದ್ದರೆ ಅದು ಗ್ರಹಗಳ ಕೋಪಕ್ಕೆ ಮೂಲವಾಗುತ್ತದೆ. ಗ್ರಹಗಳು ಕೋಪಗೊಂಡಾಗ ಸಮಸ್ಯೆ ಎದುರಾಗುತ್ತದೆ. ತಪ್ಪು ನಿರ್ಧಾರಗಳನ್ನು ನೀವು ತೆಗೆದುಕೊಳ್ಳುತ್ತೀರಿ. ಮನೆಯಲ್ಲಿ ಒಂದಾದ್ಮೇಲೆ ಒಂದು ಸಮಸ್ಯೆ ಶುರುವಾಗುವುದಲ್ಲದೆ ಯಾವುದೇ ಕೆಲಸ ಮುಂದುವರೆಯುವುದಿಲ್ಲ.

Astrology Tips : ಅಶ್ವತ್ಥ ಮರಕ್ಕೆ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಪೂಜೆ ಮಾಡ್ಬೇಡಿ

ಮನೆಯಲ್ಲಿ ಬೆಳೆದ ಅಶ್ವತ್ಥ ಮರವನ್ನು ತೆಗೆಯೋದು ಹೇಗೆ? : ಮನೆ, ಮನಸ್ಸು ಎರಡಕ್ಕೂ ತೊಂದರೆ ನೀಡುವ ಈ ಅಶ್ವತ್ಥ ಮರವನ್ನು ಬೇಕಾಬಿಟ್ಟಿ ಕಿತ್ತೆಸೆಯುವುದು ಸೂಕ್ತವಲ್ಲ. ಅದ್ರಲ್ಲಿ ವಿಷ್ಣು ನೆಲೆಸಿರುತ್ತಾನೆ. ನೀವು ಅಶ್ವತ್ಥ ಮರವನ್ನು ಕಿತ್ತಾಗ, ವಿಷ್ಣುವನ್ನು ಮನೆಯಿಂದ ಹೊರಹಾಕಿದಂತಾಗುತ್ತದೆ. ಮನೆಯಲ್ಲಿ ಅಶ್ವತ್ಥ ಮರ ಬೆಳೆದಿದ್ದರೆ 45 ದಿನಗಳ ಕಾಲ ಪ್ರತಿದಿನ ಪೂಜೆ ಮಾಡಬೇಕು. ಅದಕ್ಕೆ ನಿತ್ಯ ಹಾಲನ್ನು ಅರ್ಪಿಸಬೇಕು. ನಂತ್ರ ಅರ್ಚಕರ ನೆರವಿನಿಂದ ಅಶ್ವತ್ಥ ಮರವನ್ನು ಕಿತ್ತು ಬೇರೆ ಸ್ಥಳದಲ್ಲಿ ನೆಡಬೇಕು. ವಿಧಿ – ವಿಧಾನದ ಮೂಲಕ ಅದನ್ನು ಬೇರೆಡೆ ಬೆಳೆಸಿದಲ್ಲಿ, ಅಶ್ವತ್ಥ ಮರ ಬೆಳೆದಂತೆ ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಒಂದ್ವೇಳೆ ಅರ್ಚಕರು ಸಿಗದಿರುವ ಸಮಯದಲ್ಲಿ  ಅವಿವಾಹಿತ ಹುಡುಗಿ ಮೂಲಕ ಅಶ್ವತ್ಥ ಮರವನ್ನು ಪೂಜಿಸಿ, ಬೇರು ಸಮೇತ ಕಿತ್ತು ನಂತ್ರ ನೆಡಬೇಕು.

Follow Us:
Download App:
  • android
  • ios