Asianet Suvarna News Asianet Suvarna News

ಉತ್ತರ ಕನ್ನಡ ಈಗ ಕೊರೋನಾ ವೈರಸ್ ಮುಕ್ತ

ಉತ್ತರ ಕನ್ನಡ ಜಿಲ್ಲೆಯಿಂದ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದ್ದು, ಕೊರೋನಾ ಮುಕ್ತ ಜಿಲ್ಲೆ ಎನಿಸಿಕೊಂಡಿದೆ. ಈ ಮೂಲಕ ಗ್ರೀನ್‌ ಝೋನ್‌ನತ್ತ ಉತ್ತರ ಕನ್ನಡ ದಾಪುಗಾಲು ಇಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Uttara Kannada is Coronavirus  Free district 1 dies in Dakshina Kannada
Author
Uttara Kannada, First Published May 1, 2020, 8:20 AM IST

ಬೆಂಗಳೂರು(ಮೇ.01): ಕಾರವಾರದ ಐಎನ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕೊನೆಯ ಕೋವಿಡ್‌ 19 ಸೋಂಕಿತ ಗುರುವಾರ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎಲ್ಲ 11 ಸೋಂಕಿತರೂ ಗುಣಮುಖರಾಗುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆ ಈಗ ಕೋವಿಡ್‌​-19 ಮುಕ್ತ ಜಿಲ್ಲೆಯಾಗಿದೆ. ಏ.11ರ ನಂತರ ಜಿಲ್ಲೆಯ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಒಂದೇ ಒಂದು ಪ್ರಕರಣವೂ ಇಲ್ಲದೆ 28 ದಿನಗಳು ಆದಲ್ಲಿ ಉತ್ತರ ಕನ್ನಡ ಜಿಲ್ಲೆ ಕೂಡ ಹಸಿರು ವಲಯಕ್ಕೆ ಬರಲಿದೆ. ಸದ್ಯ ಆರೇಂಜ್‌ ವಲಯದಲ್ಲಿದೆ.

ಮೈಸೂರಲ್ಲಿ 7 ಮಂದಿ ಡಿಸ್ಚಾರ್ಜ್‍:

ಮೈಸೂರಿನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ270, ಪಿ321, ಪಿ365, ಪಿ366, ಪಿ183, ಪಿ303 ಮತ್ತು ಪಿ369 ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 90 ಮಂದಿಯಲ್ಲಿ ಕೊರೋನಾ ವೈರಸ್‌ ಸೋಂಕು ಕಂಡು ಬಂದಿದ್ದು, ಇದರಲ್ಲಿ 65 ಮಂದಿ ಗುಣಮುಖರಾಗಿದ್ದಾರೆ. ಉಳಿದ 25 ಮಂದಿ ಮಾತ್ರ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಕ್ಕದ ಬೆಡ್‌ನಲ್ಲಿದ್ದವಳಿಗೂ ಸೋಂಕು:

ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯೊಬ್ಬರಲ್ಲಿ ಕೊರೋನಾ ಪಾಸಿಟಿವ್‌ ಕೇಸ್‌ ಗುರುವಾರ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಪಡೀಲಿನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಮೊದಲು ಪತ್ತೆಯಾದ ಕೊರೋನಾ ಪಾಸಿಟಿವ್‌ ಮಹಿಳೆಯ ಬೆಡ್‌ನ ಪಕ್ಕದ ಬೆಡ್‌ನಲ್ಲಿ ಈ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ಇವರಿಗೂ ಕೊರೋನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

ಜಪ್ತಿಯಾದ ವಾಹನಗಳು ಇಂದಿನಿಂದ ವಾಪಸ್‌! ಯಾವ ವಾಹನಕ್ಕೆಷ್ಟು ದಂಡ..?

ಕಲ್ಪತರು ನಾಡು ತುಮಕೂರು ನಗರದಲ್ಲಿ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5ಕ್ಕೇರಿದೆ. ಈಕೆ ನಗರದ ಕೆಎಚ್‌ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಯ ಪತ್ನಿಯಾಗಿದ್ದಾರೆ. ವಿಜಯಪುರದ ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೋವಿಡ್‌-19 ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ದಾವಣಗೆರೆ ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢವಾಗಿದೆ.
ಕೊರೋನಾಗೆ ದ.ಕನ್ನಡದಲ್ಲಿ 3ನೇ ಬಲಿ

ದಕ್ಷಿಣ ಕನ್ನಡದಲ್ಲಿ ಒಂದು ಸಾವು

ಮಂಗಳೂರು": ಕೊರೋನಾ ಸೋಂಕಿಗೊಳಗಾಗಿ ನಗರದ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ 67 ವರ್ಷದ ಮಹಿಳೆ ಗುರುವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಮೂವರು ಕೂಡ ಬಂಟ್ವಾಳ ಕಸಬಾದ ಆಸುಪಾಸಿನ ಮನೆಯವರು ಎಂಬುದು ಗಮನಾರ್ಹ.

ಕೆಲವು ದಿನಗಳಿಂದ ಕೆಮ್ಮು, ಜ್ವರ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 67 ವರ್ಷದ ಮಹಿಳೆಯನ್ನು ಏ.18ರಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಅಲ್ಲಿ ನ್ಯುಮೋನಿಯಾಗೆ ಚಿಕಿತ್ಸೆ ನೀಡಿದ್ದು, ಮಧುಮೇಹ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಏ.20ರಂದು ಗಂಟಲು ದ್ರವ ಮಾದರಿ ಪರೀಕ್ಷೆಯ ಫಲಿತಾಂಶ ಪಾಸಿಟಿವ್‌ ಬಂದಿದ್ದರಿಂದ ಐಸಿಯುನಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಕೆ ಗುರುವಾರ ಸಂಜೆ ಮೃತಪಟ್ಟರು ಎಂದು ಜಿಲ್ಲಾಡಳಿತದ ಬುಲೆಟಿನ್‌ ತಿಳಿಸಿದೆ. ಬಂಟ್ವಾಳ ಕಸಬಾದಲ್ಲಿ ಮೊದಲು ಮೃತಪಟ್ಟಮಹಿಳೆಯ ಶವ ಸಂಸ್ಕಾರ ನಡೆಸಿದ ಮಂಗಳೂರು ಬೋಳೂರಿನ ವಿದ್ಯುತ್‌ ಚಿತಾಗಾರದಲ್ಲೇ ಈ ಮಹಿಳೆಯ ಅಂತ್ಯಕ್ರಿಯೆ ನಡೆಯಲಿದೆ.

ಒಂದೇ ಕಡೆ ಮೂರು ಸಾವು:

ಕೊರೋನಾ ಸೋಂಕಿನಿಂದ ಮಂಗಳೂರು ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ 65 ವರ್ಷದ ಬಂಟ್ವಾಳ ಕಸಬಾ ನಿವಾಸಿ ಏ.19ರಂದು ಮೃತಪಟ್ಟಿದ್ದರು. ಇದಾದ ನಾಲ್ಕೇ ದಿನದಲ್ಲಿ ಅಂದರೆ ಏ.23ರಂದು ಮೃತ ಮಹಿಳೆಯ ಅತ್ತೆ ಕೂಡ ಕೊರೋನಾ ಸೋಂಕಿನಿಂದ ಸಾವಿಗೀಡಾಗಿದ್ದರು. ಇದೀಗ ನೆರೆಮನೆಯ ವೃದ್ಧೆಯೂ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರೆಲ್ಲರೂ ಬಂಟ್ವಾಳ ಕಸಬಾ ನೆರೆಮನೆಯ ನಿವಾಸಿಗಳು ಎಂಬುದು ಗಮನಾರ್ಹ. ನೆರೆಮನೆಯ ಸೋಂಕಿತೆಯ ಸಂಪರ್ಕದಿಂದ ಈಕೆಗೂ ಸೋಂಕು ತಗಲಿರುವುದು ಟ್ರಾವಲರ್‌ ಹಿಸ್ಟರಿಯಲ್ಲಿ ಕಂಡುಬಂದಿತ್ತು.
 

Follow Us:
Download App:
  • android
  • ios