ಕುಮಟಾದಲ್ಲಿ ನಾಗರಹಾವು ಒಂದು ಚಾಕುವನ್ನು ನುಂಗಿ ಒದ್ದಾಡುತ್ತಿತ್ತು. ಉರಗ ತಜ್ಞರ ಸಮಯಪ್ರಜ್ಞೆಯಿಂದ ಹಾವಿನ ಹೊಟ್ಟೆಯಿಂದ ಚಾಕುವನ್ನು ಹೊರತೆಗೆದು, ಹಾವಿಗೆ ಪವಾಡಸದೃಶ ರಕ್ಷಣೆ ನೀಡಲಾಯಿತು.

ಕಾರವಾರ (ಜೂ.9): ನಾಗರಹಾವೊಂದು ಉದ್ದದ ಚಾಕು ನುಂಗಿ ವಿಲವಿಲ ಒದ್ದಾಡಿದ ಘಟನೆ ನಡೆದಿದೆ. ಕೊನೆಗೆ ಉರಗ ತಜ್ಞರ ಸಹಾಯದಿಂದ ಹಾವು ನುಂಗಿದ್ದ ಚಾಕುವನ್ನು ಹೊರತೆಗೆದಿದ್ದರಂದ ಪವಾಡಸದೃಶವಾಗಿ ಬದುಕುಳಿದಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕ ಎಂಬವರ ಮನೆಯಲ್ಲಿ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋವಿಂದ ನಾಯ್ಕರ ಅಡುಗೆ ಮನೆಯ ಗೋಡೆಯಲ್ಲಿದ್ದ ಚಾಕು ಅವರ ಗಮನಕ್ಕೆ ಬಾರದೆ ಮನೆಯ ಹಿಂಬದಿ ಹೊರಕ್ಕೆ ಬಿದ್ದಿತ್ತು. ಈ ವೇಳೆ ಅತ್ತ ಸುಳಿದಿದ್ದ ನಾಗರಹಾವು ಇದನ್ನು ತನ್ನ ಆಹಾರ ಎಂದು ಭ್ರಮಿಸಿ 1 ಅಡಿ 2 ಇಂಚು ಉದ್ದದ ಚಾಕುವನ್ನು ಅನಾಯಾಸವಾಗಿ ನುಂಗಿದೆ. ಈ ನಡುವೆ ಮನೆಯ ಹೊರಗೆ ಹಾವು ಓಡಾಡುತ್ತಿದ್ದರಿಂದ ಅಲ್ಲಿ ಹೋಗಲು ಗೋವಿಂದ್ ಕುಟುಂಬ ಕೂಡ ಹೆದರಿತ್ತು.

ಕೆಲವು ಹೊತ್ತಿನ ಬಳಿಕ ಹೊರಕ್ಕೆ ಬಿದ್ದಿದ್ದ ಚಾಕು ಕೂಡಾ ಕಣ್ಮರೆಯಾಗಿದ್ದನ್ನು ಕುಟುಂಬ ಗಮನಿಸಿದೆ. ಹಾವು ಕೂಡಾ ಏನೋ ತಿಂದು ಒದ್ದಾಡುತ್ತಿದ್ದದ್ದರಿಂದ ಹಾವು ಹೋಗಲಿ ಎಂದು ಮನೆಯವರು ಕಾಯುತ್ತಿದ್ದರು. ಸ್ಥಳದಲ್ಲಿ ಚಾಕು ಇಲ್ಲದ್ದನ್ನು ನೋಡಿ ಅನುಮಾನ ಬಂದಿದ್ದರಿಂದ, ಉರಗ ತಜ್ಞ ಪವನ್ ನಾಯ್ಕ ಅವರಿಗೆ ಗೋವಿಂದ್ ಕುಟುಂಬ ಕರೆ ಮಾಡಿ ಮಾಹಿತಿ ನೀಡಿದೆ.

ಉರಗ ತಜ್ಞ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಹಾವು ಚಾಕು ನುಂಗಿದ್ದು, ಅದರ ಎದೆ ಭಾಗದಲ್ಲಿ ಸಿಲುಕಿದ್ದು ಕಂಡುಬಂದಿತ್ತು. ಚಾಕು ಹೊರ ತೆಗೆಯದೇ ಇದ್ದರೆ ಹಾವು ಸಾಯಲಿದೆ ಎಂದು ನಿರ್ಧರಿಸಿದ ಪವನ್‌, ಹಾವು ಹಿಡಿದು ಚಿಕಿತ್ಸೆಗೆ ಕೊಂಡೊಯ್ದಿದ್ದರು.

ಪಶು ಆಸ್ಪತ್ರೆಯ ಸಹಾಯಕ ಅದ್ವೈತ ಭಟ್ ಅವರ ಮನೆಗೆ ತೆರಳಿ ಉರಗ ತಜ್ಞ ಪವನ್‌ ಚಿಕಿತ್ಸೆ ಒದಗಿಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನದ ಬಳಿಕ ಹಾವಿನ ಹೊಟ್ಟೆಯಿಂದ ಚಾಕುವನ್ನು ಹೊರಗೆಳೆಯಲು ಯಶಸ್ವಿಯಾಗಿದ್ದಾರೆ. ಹಾವಿಗೆ ಚಿಕಿತ್ಸೆ ನೀಡಿದ ಬಳಿಕ ಸುರಕ್ಷಿತ ಸ್ಥಳದಲ್ಲಿ ಹಾವನ್ನು ಉರಗ ತಜ್ಞ ಕಾಡಿಗೆ ಬಿಟ್ಟಿದ್ದಾರೆ.