ಉಡುಪಿಯಲ್ಲಿ ಅಕ್ಟೋಬರ್ 18 ಕಿರುತೆರೆ ನಟಿ ಆಶಿಕಾ ಪಡುಕೋಣೆ ಮದುವೆ!
ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗುತ್ತಿದ್ದಾರೆ ತ್ರಿನಯನಿ ನಟಿ ಆಶಿಕಾ ಪಡುಕೋಣೆ....
ತೆಲುಗು 'ತ್ರಿನಯನಿ' (Trinayani) ಧಾರಾವಾಹಿ ಕನ್ನಡದಲ್ಲಿ ಡಬ್ ಆಗಿ ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರವಾಗುತ್ತಿದೆ. ಚಂದನ್ ಗೌಡಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಆಶಿಕಾ ಪಡುಕೋಣೆ (Ashika Padukone) ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಉಡುಪಿಯಲ್ಲಿ (Udupi) ನಡೆಯಲಿದೆ ಎನ್ನಲಾಗಿದೆ.
ಆಶಿಕಾ ಕೈ ಹಿಡಿಯುತ್ತಿರುವ ಹುಡುಗನ ಹೆಸರು ಚೇತನ್ ಶೆಟ್ಟಿ (Chetan Shetty). ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ (Software Engineer) ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಕಾಟದಿಂದ ಹುಟ್ಟೂರು ಉಡುಪಿಯಲ್ಲಿ ಸರಳವಾಗಿ ಮದುವೆ ನಡೆಯಲಿದೆ. ತೆಲುಗು ಹಾಗೂ ಕನ್ನಡ ಚಿತ್ರರಂಗದ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆಶಿಕಾ ಸಹೋದರು ವಿದೇಶದಲ್ಲಿರುವ ಕಾರಣ ಬೆಂಗಳೂರಿಗೆ ಬರುತ್ತಿದ್ದಂತೆ ಮದುವೆ ಕೆಲಸ ಶುರುವಾಗಲಿದೆ.
'ನನ್ನ ಅಕ್ಕ ಈ ವರ್ಷ ಅಮೆರಿಕದಿಂದ (America) ಬರುತ್ತಿದ್ದಂತೆ ಮದುವೆ ಆಗಬೇಕು ಎಂದು ಪ್ಲಾನ್ ಹಾಕಿಕೊಂಡಿದ್ದೆವು. ಈ ನಡುವೆಯೇ ನಿಶ್ಚಿತಾರ್ಥ (Engagement) ಮಾಡಿಕೊಳ್ಳಬೇಕು ಎಂದಿತ್ತು. ಕಳೆದ ನವೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು. ನಿಜವಾಗಿ ಹೇಳಬೇಕು ಅಂದ್ರೆ ನಾನು ಮದುವೆ ಬಗ್ಗೆ ಅಷ್ಟಾಗಿ ಆಸಕ್ತಿ ಹೊಂದಿರಲಿಲ್ಲ ಹಾಗೂ ಅದಕ್ಕೆ ತಯಾರಿನೂ ಇರಲಿಲ್ಲ. ಮದುವೆ ಆಗು ಅಂತ ನನ್ನ ಪೋಷಕರು ಎಂದಿಗೂ ಒತ್ತಾಯ ಮಾಡಲಿಲ್ಲ. ಲಾಕ್ಡೌನ್ ಸಮಯದಲ್ಲಿ ಅಮ್ಮ ಚೇತನ್ ಶೆಟ್ಟಿ ಫೋನ್ ನಂಬರ್ ಕೊಟ್ಟರು. ಮಾತನಾಡಲು ಆರಂಭಿಸಿ ಬೇಗ ಆತ್ಮೀಯರಾದೆವು,' ಎಂದು ಆಶಿಕಾ ಮಧ್ಯಮಗಳಿಗೆ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಆಶಿಕಾ ತಮ್ಮ ಭಾವಿ ಪತಿ ಜೊತೆ ಫೋಟೋ ಶೂಟ್ (Photoshoot) ಮಾಡಿಸಿದ್ದಾರೆ. ಅದರಲ್ಲೂ ರೆಟ್ರೋ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
ತೆಲುಗು ಪರ ನಿಂತು ಕನ್ನಡ ಬಗ್ಗೆ ತಪ್ಪು ಮಾತನಾಡಿದ ನಟಿ ಆಶಿಕಾ, ಚಂದು ಗೌಡ ಬಹಿರಂಗ ಕ್ಷಮೆ!'ಚೇತನ್ ತುಂಬಾ ಮೃದು ಸ್ವಭಾವದ ಹುಡುಗ. ಅವರಿಗೆ ನನ್ನ ತಂದೆಯಂತೆ ತುಂಬಾ ತಾಳ್ಮೆ, ಸಂಯಮವಿದೆ. ಅದೇ ಅವರಲ್ಲಿ ನನಗೆ ತುಂಬಾ ಇಷ್ಟವಾಯ್ತು. ನನ್ನಂತೆ ಇರುವ ಹುಡುಗಿ ಪತ್ನಿಯಾಗಿ ಸಿಗಬೇಕು ಎಂದು ಚೇತನ್ ಬಯಸಿದ್ದರಂತೆ. ಮದುವೆ ನಂತರವೂ ನಟಿಸಲು ನಾನು ಇಷ್ಟ ಪಡ್ತೀನಿ. ಚೇತನ್ ತುಂಬಾ ಬೆಂಬಲ ಕೊಡುತ್ತಾರೆ. ನನ್ನ ಕೆಲಸ ಅರ್ಥ ಮಾಡಿಕೊಳ್ಳುತ್ತಾರೆ. ಅವಶ್ಯಕತೆ ಬಿದ್ದಲ್ಲಿ ಹೈದರಾಬಾದ್ಗೆ (Hyderabad) ಹೋಗಲೂ ಚೇತನ್ ರೆಡಿ ಇದ್ದಾರೆ. ಕಲೆ, ನಾಟಕದಲ್ಲಿ ಚೇತನ್ಗೆ ತುಂಬಾ ಆಸಕ್ತಿಯಿದೆ. ನನ್ನ ಕೆಲಸದ ಬಗ್ಗೆ ಸದಾ ವಿಚಾರಿಸುತ್ತಿರುತ್ತಾರೆ,' ಎಂದು ಭಾವಿ ಪತಿ ಬಗ್ಗೆ ಆಶಿಕಾ ಮಾತನಾಡಿದ್ದಾರೆ.
'ನಾನು ಕನ್ನಡತಿ. ಕನ್ನಡದಲ್ಲಿ ಒಳ್ಳೆಯ ಸ್ಕ್ರಿಪ್ಟ್ ಸಿಗಲಿ ಎಂದು ಕಾಯುತ್ತಿರುವೆ. ತ್ರಿನಯನಿ ತೆಲುಗು ಧಾರಾವಾಹಿ ಆಗಿ ಕನ್ನಡದಲ್ಲಿ ಡಬ್ ಆಗುತ್ತಿದ್ದರೂ, ಇಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದಕ್ಕೆ ಸಂತಸವಿದೆ,' ಎಂದು ಆಶಿಕಾ ಹೇಳಿದ್ದಾರೆ. ಇದೇ ಧಾರಾವಾಹಿ ಚಿತ್ರೀಕರಣದ ಸಮಯದಲ್ಲಿ ಆಶಿಕಾ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. 'ಬೆಂಗಳೂರಿನಲ್ಲಿ 70-80 ರಷ್ಟು ತೆಲುಗು ಮಾತನಾಡುವವರಿದ್ದಾರೆ. ಅವರೇ ಧಾರಾವಾಹಿ ನೋಡುತ್ತಾರೆ' ಎಂದಿದ್ದಾರೆ. ದೊಡ್ಡ ಕಾಂಟ್ರೋವರ್ಸಿ ಕ್ರಿಯೇಟ್ ಆಗುತ್ತಿದ್ದಂತೆ, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. '70-80% ತೆಲುಗು ವೀಕ್ಷಕರಿದ್ದಾರೆ ಎಂದು ಹೇಳುವ ಉದ್ದೇಶ ಆಗಿತ್ತು. ನಾನು ಎಂದೂ ಕನ್ನಡಿಗರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ನಾನು ಕನ್ನಡ ಬಿಟ್ಟು ಕೊಡುವ ಹುಡುಗಿಯಲ್ಲ. ನಾನು ಎಂದಿಗೂ ಕನ್ನಡದವಳೇ,' ಎಂದು ವಿವಾದಕ್ಕೆ ತೆರೆ ಎಳೆದರು.