ಬಿಗ್​ ಬಾಸ್​ ತಮಿಳಿನಲ್ಲಿ ಸ್ಪರ್ಧಿಸಿದ್ದ ಬಹುಭಾಷಾ ತಾರೆ ಕಸ್ತೂರಿ ಶಂಕರ್​ ಅವರು ಅದರ ವಿರುದ್ಧ ಮಾತನಾಡಿ, ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  

ಕಿಚ್ಚ ಸುದೀಪ್​ ನಡೆಸಿಕೊಂಡು ಬಿಗ್​ಬಾಸ್​ ಕನ್ನಡದ 10ನೇ ಆವೃತ್ತಿ ಘೋಷಣೆಯಾಗಿದೆ. ಇದೇ 8ರಿಂದ 10ನೇ ಆವೃತ್ತಿ ಶುರುವಾಗಲಿರುವುದಾಗಿ ಇದಾಗಲೇ ತಂಡ ಘೋಷಿಸಿದೆ. ಅಷ್ಟಕ್ಕೂ ಬಿಗ್​ಬಾಸ್​ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಪ್ರಸಾರ ಆಗುತ್ತಿದ್ದು, ದೊಡ್ಡ ಪ್ರೇಕ್ಷಕರ ಬಳಗವನ್ನೇ ಸೃಷ್ಟಿಸಿದೆ. ಈ ರಿಯಾಲಿಟಿ ಷೋ ಅನ್ನು ಬೈಯುತ್ತಲೇ ಪ್ರತಿ ದಿನವೂ ನೋಡುವ ದೊಡ್ಡ ವರ್ಗವೇ ಇದೆ. ಬಿಗ್​ಬಾಸ್ ವಿಷಯಕ್ಕೆ ಬಂದರೆ, ಸ್ಪರ್ಧಿಗಳ ಬಗ್ಗೆ ಹಲವು ಪ್ರೇಕ್ಷಕರು ದಿನನಿತ್ಯವೂ ಟ್ರೋಲ್​ ಮಾಡುತ್ತಲೇ ಇರುತ್ತಾರೆ, ಅದೇ ಇನ್ನೊಂದೆಡೆ, ಅವರನ್ನು ನೋಡಲು ದಿನವೂ ಈ ಷೋ ನೋಡುತ್ತಾರೆ. ಇದಕ್ಕೆ ಭಾಗವಹಿಸುವವರು ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿದವರು ಒಂದೆಡೆಯಾದರೆ, ಕಾಂಟ್ರವರ್ಸಿ ಮಾಡಿಕೊಂಡವರಿಗೇ ಹೆಚ್ಚು ಆದ್ಯತೆ ಎನ್ನುವ ಆರೋಪವೂ ಇದೆ. ಬಿಗ್​ಬಾಸ್​ ಕನ್ನಡ ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ ಸ್ಪರ್ಧಿಸಿರೋ ಹಲವು ಸ್ಪರ್ಧಿಗಳು ಕಿರುತೆರೆ, ಹಿರಿತೆರೆಗಳಲ್ಲಿ ಮಿಂಚುತ್ತಿರುವುದು ಎಷ್ಟು ಸತ್ಯವೋ, ಬಿಗ್​ಬಾಸ್​ ಸ್ಪರ್ಧಿ ಎಂದು ಹೆಮ್ಮೆಯಿಂದ ಅವರನ್ನು ನೋಡುವ ದೃಷ್ಟಿಕೋನವೂ ಬದಲಾಗುವುದು ಇದೆ. ಆದರೆ ಅದೇ ಇನ್ನೊಂದೆಡೆ ಇಲ್ಲಿಯ ಸ್ಪರ್ಧಿಗಳು ಮನೆಯೊಳಕ್ಕೆ ನಡೆದುಕೊಳ್ಳುವ ರೀತಿಗೆ ಬೈಯುವ ವರ್ಗವೂ ಇದೆ.

Add Asianetnews Kannada as a Preferred SourcegooglePreferred

ಅದೇ ಇನ್ನೊಂದೆಡೆ, ಬಿಗ್​ಬಾಸ್​ ಮನೆಯಲ್ಲಿ ನಡೆಯುವುದು ನಿಜವಾದದ್ದಲ್ಲ, ಅಲ್ಲಿರುವುದು ಸ್ಕ್ರಿಪ್ಟೆಡ್ ಎಂದು ಕೆಲವು ಹೊರಬಂದಿರೋ ಸ್ಪರ್ಧಿಗಳು ಇದಾಗಲೇ ಮಾತನಾಡಿದ್ದಾರೆ. ಬಿಗ್​ ಬಾಸ್​ ಮನೆಯೊಳಗೆ ತಮಗಾಗಿರುವ ಕೆಟ್ಟ ಅನುಭವಗಳನ್ನೂ ಶೇರ್​ ಮಾಡಿಕೊಂಡಿದ್ದಾರೆ. ಅದೇ ಇನ್ನೊಂದೆಡೆ ಬಿಗ್​ಬಾಸ್​ ಹಲವಾರು ಸ್ಪರ್ಧಿಗಳಿಗೆ ಜೀವನ ಕಟ್ಟಿಕೊಟ್ಟದ್ದೂ ಸುಳ್ಳಲ್ಲ, ಕಿರುತೆರೆ, ಹಿರಿತೆರೆ ನಟ-ನಟಿಯರಾಗಿ ಮಿಂಚುತ್ತಿದ್ದಾರೆ. ಆದರೆ ಕೆಲವೊಂದು ಸ್ಪರ್ಧಿಗಳು ಬಿಗ್​ಬಾಸ್​ ವಿರುದ್ಧ ಮಾತನಾಡಿದಂತೆ ಇದೀಗ ಕನ್ನಡ ಹಾಗೂ ತೆಲಗುವಿನ ಅನೇಕ ಸಿನಿಮಾಗಳಲ್ಲಿ ನಟಿಸಿರೋ ತಮಿಳು ನಟಿ ಕಸ್ತೂರಿ ಶಂಕರ್‌ ಮಾತನಾಡಿದ್ದಾರೆ. ಇವರು ನಟನೆಯಿಂದ ಮಾತ್ರವಲ್ಲದೆ ತಮ್ಮ ಹಾಟ್‌ ಫೋಟೋಗಳಿಂದ, ವಿವಾದಾತ್ಮಕ ಮಾತುಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವವರು. 1994 ರಲ್ಲಿ ತೆರೆ ಕಂಡ 'ಜಾಣ' ಚಿತ್ರದಲ್ಲಿ ಕಸ್ತೂರಿ ಶಂಕರ್‌, ರವಿಚಂದ್ರನ್‌ ಜೊತೆ ನಟಿಸಿದ್ದರು. ನಂತರ ಇಬ್ಬರ ನಡುವೆ ಮುದ್ದಿನ ಆಟ, ತುತ್ತಾ ಮುತ್ತಾ , ಹಬ್ಬ, ಪ್ರೇಮಕ್ಕೆ ಸೈ ಸಿನಿಮಾಗಳಲ್ಲಿ ಕಸ್ತೂರಿ ನಟಿಸಿದ್ದಾರೆ.

ಬಿಗ್​ಬಾಸ್​ ಸ್ಪರ್ಧಿಗಳ ಆಯ್ಕೆ ಮಾನದಂಡದ ಕುರಿತ ಪ್ರಶ್ನೆಗೆ ಸುದೀಪ್​ ಗರಂ: ಏನ್​ ಹೇಳಿದ್ರು ಕೇಳಿ

ಅಷ್ಟಕ್ಕೂ ಅವರು ತಮಿಳಿನ ಬಿಗ್​ಬಾಸ್ ವಿರುದ್ಧ ಮಾತನಾಡಿದ್ದಾರೆ. ಅಂದಹಾಗೆ ನಟಿ, ತಮಿಳು ಬಿಗ್‌ ಬಾಸ್‌ ಸೀಸನ್‌ 3 ರಲ್ಲಿ ಭಾಗವಹಿಸಿದ್ದರು. ಈಗ 7ನೇ ಸೀಸನ್​ ಶುರುವಾಗಿರುವ ಕಾರಣ ಅವರಿಗೆ ಪುನಃ ಅಲ್ಲಿ ಎಂಟ್ರಿ ಇದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ನೀಡಿರುವ ಉತ್ತರ ಸಕತ್​ ಟ್ರೋಲ್​ ಆಗುತ್ತಿದೆ. ಅಂದಹಾಗೆ ಕಸ್ತೂರಿ ಜೊತೆ ತಮಿಳು ಖ್ಯಾತ ನಟ ವಿಜಯ್‌ ಕುಮಾರ್‌ ಪುತ್ರಿ ವನಿತಾ ಕೂಡಾ ಸ್ಪರ್ಧಿಯಾಗಿದ್ದರು. ಈಗ ವನಿತಾ ಪುತ್ರಿ ಜೋವಿಕಾ 7ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಕಸ್ತೂರಿ ಶಂಕರ್‌ಗೆ ಜೋವಿಕಾ ಬಿಗ್‌ ಬಾಸ್‌ ಎಂಟ್ರಿ ಬಗ್ಗೆ ಕೇಳಿದ್ದಾರೆ. 

ಆಗ ಕಸ್ತೂರಿ ಅವರು ಬಿಗ್​ಬಾಸ್​ ವಿರುದ್ಧ ಮಾತನಾಡಿದ್ದಾರೆ. ಒಂದೇ ಮನೆಯಲ್ಲಿ ಅಷ್ಟು ಜನರನ್ನು ಇಟ್ಟು, ಅವರ ಕೃತಕ ಭಾವನೆಗಳನ್ನು ತೋರಿಸುವ ಶೋಗಳನ್ನು ನಾನು ಇಷ್ಟಪಡುವುದಿಲ್ಲ. ನನ್ನ ಮನೆಯಲ್ಲಿ ಟಿವಿ ಇಲ್ಲ. ನನಗೆ ಟೈಮ್‌ ಮೊದಲೇ ಇಲ್ಲ. ತಾಳ್ಮೆ, ಆಸಕ್ತಿಯೂ ಇಲ್ಲ. ನನಗೆ ಕುಟುಂಬ, ಅದರ ಜವಾಬ್ದಾರಿ ಹಾಗೂ ಕೆಲಸ ಇದೆ. ನಾನು ಬಿಗ್‌ ಬಾಸ್‌ ನೋಡುವುದಿಲ್ಲ ಎಂದಿದ್ದಾರೆ. ಇದು ಸಕತ್​ ಟ್ರೋಲ್​ ಆಗುತ್ತಿದೆ. ಗಂಟೆಗೆ ಐದು ಸಾವಿರ ರೂಪಾಯಿ ಪಡೆಯುವ ನಿಮಗೆ ಟೈಂ ಎಲ್ಲಿರುತ್ತದೆ ಎಂದು ಕೆಲವರು ನಟಿಗೆ ಪ್ರಶ್ನಿಸಿದರೆ, ಇನ್ನು ಕೆಲವರು, ನಿಮ್ಮ ಮಾತು ಅತಿ ಆಯ್ತು ಎಂದಿದ್ದಾರೆ. ಮೊದಲು ಬಿಗ್​ಬಾಸ್​ನಲ್ಲಿ ಭಾಗವಹಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಬಿಗ್‌ ಬಾಸ್‌ನಿಂದ ನಿಮಗೆ ದುಡ್ಡು ಬೇಕಿತ್ತು, ಆದರೆ ಅದರ ಬಗ್ಗೆ ಮಾತನಾಡಲು ಮಾತ್ರ ನಿಮಗೆ ಇಷ್ಟವಿಲ್ವಾ ಎಂದು ಇನ್ನು ಕೆಲವರು ಕಿಡಿ ಕಾರುತ್ತಿದ್ದಾರೆ. 

BIGGBOSS ಮನೆಯಲ್ಲಿ 73 ಕ್ಯಾಮೆರಾ: 24 ಗಂಟೆಗಳ ಕ್ಷಣ ಕ್ಷಣದ ದೃಶ್ಯ ವಿಕ್ಷಣೆಗೆ ಈ ಬಾರಿ ಅವಕಾಶ!

Scroll to load tweet…