ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಕಾರ್ಯಕ್ರಮಲ್ಲಿ ಈ ಬಾರಿ ಮಹಾಕವಿ ಕುವೆಂಪು ಅವರನ್ನು ಪುಟಾಣಿ ಹಾಡುಗಾರ್ತಿ ದಿಯಾ ಹೆಗ್ಡೆ ನೆನೆದದ್ದು ವಿಶೇಷವಾಗಿತ್ತು. ಅದು ಹೇಗೆ ಅಂತೀರಾ? 

ಜೀ ಕನ್ನಡದಲ್ಲಿ (zee kannada) ಪ್ರಸಾರವಾಗುವ ಸರಿಗಮಪ (saregamapa littel champs) ಲಿಟಲ್ ಚಾಂಪ್ಸ್- ೧೯ನೇ ಎಪಿಸೋಡನ್ನು ನೀವು ನೋಡಿಯೇ ಇರ್ತೀರಾ. ನೋಡಿಲ್ಲ ಎಂದಾದಲ್ಲಿ ನೋಡಿ, ಮಿಸ್ ಮಾಡಿಕೊಳ್ಳಬೇಡಿ. ಈ ಶೋದಲ್ಲಿ ಎಲ್ಲರ ಗಮನ ಸೆಳೆಯುತ್ತಾ ಇರುವ ಹಾಡುಗಾರ್ತಿ ಎಂದರೆ ದಿಯಾ ಹೆಗ್ಡೆ. ತನ್ನ ಮುಗ್ಧತೆ ಹಾಗೂ ಮುದ್ದಾದ ಕಂಠದಿಂದ ಈ ಚಿನಕುರುಳಿ ಬಾಲಕಿ ಎಲ್ಲರನ್ನೂ ಈಗಾಗಲೇ ಬುಟ್ಟಿಗೆ ಹಾಕಿಕೊಂಡು ಬಿಟ್ಟಿದ್ದಾಳೆ. 

Add Asianetnews Kannada as a Preferred SourcegooglePreferred

ಇಂಥ ದಿಯಾ ನಿನ್ನೆ ಪ್ರಸಾರವಾದ ಎಪಿಸೋಡ್‌ನಲ್ಲಿ ಒಂದು ಮ್ಯಾಜಿಕ್ ಮಾಡಿಯೇಬಿಟ್ಟಳು.

ಇವತ್ತೇನು ವಿಶೇಷ ಎಂಬ ಪ್ರಶ್ನೆ ಹಾಕಿಕೊಂಡು ಆಕೆ ನೀಡಿದ ಉತ್ತರ ವಿಶೇಷವಾಗಿತ್ತು. ''ಜ್ಞಾನಪೀಠ ಪುರಸ್ಕೃತ, ರಸ ಋಷಿ ಕುವೆಂಪು ಅವರ ಜನ್ಮದಿನ'' ಇದಕ್ಕಿಂತ ನಂತರದ್ದು ಇನ್ನೂ ವಿಶೇಷವಾಗಿತ್ತು. ದಿಯಾ ಹಾಗೂ ಆಕೆಯ ಸಹೋದರೆ ಇಬ್ಬರೂ ಸೇರಿ, ಕನ್ನಡ ವರ್ಣಮಾಲೆಯಲ್ಲಿ 'ಅ'ದಿಂದ "ಅಃ'ದವರೆಗಿನ ಸ್ವರಗಳಿಂದ ಆರಂಭವಾಗುವ ವರ್ಣನೆಗಳಿಂದ ಮಹಾಕವಿ ಕುವೆಂಪು ಅವರನ್ನು ವರ್ಣಿಸಿದರು. ಅದು ಹೀಗಿತ್ತು- 

ಅ- ಅಕ್ಷರದ ಅನ್ನ ಉಣಬಡಿಸಿ
ಆ- ಆನಂದಮಯ ಈ ಜಗಹೃದಯ ಎಂದು ಸಾರಿ
ಇ- ಇಳೆಯ ವಿಶ್ವಮಾನವನಾಗಿ
ಈ- ಈ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತರಿಸಿ
ಉ- ಉದಯರವಿಯಾಗಿ
ಊ- ಊರಾದ ಕುಪ್ಪಳ್ಳಿಗೆ ಸಿರಿಯಾಗಿ
ಋ- ಋಷಿಯು ರಸ ಋಷಿಯಾಗಿ
ಎ- ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂದು ಬೀಗಿ
ಏ- ಏರಿಸಿಕೊಂಡು ಮುಡಿಗೆ ಪದ್ಮಭೂಷಣ
ಐ- ಐಕ್ಯತೆಯ ಭಾವ ಮೂಡಿಸಿ
ಒ- ಒಲವಿನ ಧಾರೆಯೆರೆದು
ಓ- ಓ ನನ್ನ ಚೇತನ ಎಂದು ಹಾಡಿ
ಔ- ಔದಾರ್ಯದಿಂದ ಬದುಕಿಗೆ
ಅಂ- ಅಂತರಂಗದ ಗುರುವಾಗಿರುವಿಕೆ
ಅಃ- ಅಹರ್ನಿಶಿ ಅವರೇ ನಮ್ಮ ಕನ್ನಡದ ಮಹಾಗುರು ಕುವೆಂಪು

ಅವತ್ತು ನಾನು ಈ ಸ್ಟೇಜಲ್ಲಿದ್ದೆ, ಅಮ್ಮ ಐಸಿಯುನಲ್ಲಿದ್ರು: ರಶ್ಮಿ ಪ್ರಭಾಕರ್‌ ಕಣ್ಣೀರು

ದಿಯಾ ಮತ್ತು ಆಕೆಯ ಅಕ್ಕ ಹೇಳಿದ ಈ ಹಾಡು ಕೇಳಿ ಮಹಾಗುರು ಹಂಸಲೇಖ ಕೂಡ ರೋಮಾಂಚಿತರಾಗಿಬಿಟ್ಟರು. ಇದನ್ನು ಸಿದ್ಧಪಡಿಸಿಕೊಟ್ಟ ದಿಯಾಳ ತಾಯಿಯನ್ನು 'ಮಾತೆ' ಎಂದು ಕೊಂಡಾಡಿದರು. 

ಆಮೇಲೆ, ಈ ದಿಯಾ ಹೆಗ್ಡೆ ಬಲು ಕಿಲಾಡಿ ಕೂಡ. ಏನೇನೋ ಕತೆ ಹೇಳಿ ಗೆಸ್ಟ್‌ಗಳನ್ನೇ ಯಾಮಾರಿಸಿಬಿಡುತ್ತಾಳೆ. ಕಳೆದ ಸಾರಿ ಚಟ್- ಪಟ್ ಎಂಬ ಇಬ್ಬರ ಕತೆ ಹೇಳಿ, ನಂತರ ಆ ಕತೆಯ ಕೊನೆಯಲ್ಲಿ ಗೆಸ್ಟ್‌ಗಳಿಗೆ ಪ್ರಶ್ನೆ ಕೇಳಿ ಅವರನ್ನು ತಬ್ಬಬ್ಬಾಗಿಸಿಬಿಟ್ಟಿದ್ದಳು. ಇವಳ ಚಿನಕುರುಳಿ ಪ್ರಶ್ನೆಗಳಿಗೆ ಗೆಸ್ಟ್‌ಗಳು ಮತ್ತು ಆಂಕರ್ ಅನುಶ್ರೀ ಕೂಡ ಮುದಗೊಂಡಿದ್ದರು. 

ಈ ಸಾರಿಯ ಸರಿಗಮಪ ಲಿಟಲ್ ಚಾಂಪ್ಸ್ ಸಾಕಷ್ಟು ಒಳ್ಳೆಯ ಪ್ರತಿಭೆಗಳನ್ನು ಹೊಂದಿದೆ. ಪೈಪೋಟಿಯಲ್ಲಿ ಪ್ರತಿಭೆಗಳು ಮಿಂಚುತ್ತಿವೆ. ಹಂಸಲೇಖ, ವಿಜಯಪ್ರಸಾದ್, ಅರ್ಜುನ್ ಜನ್ಯರಂಥ ದಿಗ್ಗಜಗಳು ತೀರ್ಪುಗಾರರಾಗಿರುವ ಈ ರಿಯಾಲಿಟಿ ಶೋ ಅನಗತ್ಯ ಭಾವುಕತೆಯನ್ನು ಬಂಡವಾಳವಾಗಿಸಿಕೊಳ್ಳದೆ, ಸಾಕಷ್ಟು ರಿಯಲ್ ಟ್ರ್ಯಾಕ್‌ನಲ್ಲೇ ನೋಡುಗರಿಗೆ ರೋಮಾಂಚನ ಮೂಡಿಸುವಲ್ಲಿ ಸಫಲತೆ ಕಂಡಿದೆ. 

ಕೈ ಕಾಲಿಲ್ಲ ಅಂದ್ರೂ ಮನೆಯಲ್ಲಿ ದೊಡ್ಡವರು ಇರಬೇಕು; ತಾಳಿ ಅಡವಿಟ್ಟ ಘಟನೆ ನೆನೆದು ಹೇಮಲತಾ ಭಾವುಕ

ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಪ್ರತೀ ಸೀಸನ್‌ನಲ್ಲಿಯೂ ವಿವಿಧ ಕಾರಣಗಳಿಂದ ಟಿಆರ್‌ಪಿ ಪಡೆದುಕೊಳ್ಳುತ್ತದೆ. ಅರಳು ಹುರಿದಂತೆ ಮಾತನಾಡುವ ಅನುಶ್ರೀ ಆ್ಯಂಕರಿಂಗ್ ಸೇರಿ, ವಿಭಿನ್ನ ಪ್ರತಿಭೆಯುಳ್ಳವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಗೀತ ಪ್ರೇಮಿಗಳು ಮನ ತಣಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಒಂದೊಂದು ಸೀಸನ್‌ನಲ್ಲಿಯೂ ಒಬ್ಬೊಬ್ಬ ಕಲಾವಿದರು Center of Attraction ಆಗಿರುತ್ತಾರೆ.