ಲಕ್ಷಣ ಸೀರಿಯಲ್‌ನಲ್ಲಿ ನಕ್ಷತ್ರ ಮತ್ತು ಭೂಪತಿ ನಡುವಿನ ಶೀತಲ ಸಮರ ಕೊನೆಯಾಗಿದೆ. ಅವರಿಬ್ಬರೂ ಜೊತೆಯಾಗಿ ಚಂದ್ರಶೇಖರ್ ಮನೆಗೆ ಬಂದಿದ್ದಾರೆ. ಚಂದ್ರಶೇಖರ್‌ ಮುಖದಲ್ಲಿ ಅಷ್ಟಗಲ ನಗುವಿದೆ. ಇದಕ್ಕೆ ಡೆವಿಲ್ ಮತ್ತೆ ಅಡ್ಡಗಾಲು ಹಾಕ್ತಾಳ? 

ಲಕ್ಷಣ ಸೀರಿಯಲ್‌ನಲ್ಲಿ (lakshana serial) ಹೊಸ ಅಧ್ಯಾಯ ಶುರುವಾಗಿದೆ. ಇಲ್ಲೀವರೆಗೆ ನಕ್ಷತ್ರ ಮತ್ತು ಭೂಪತಿ ನಡುವೆ ಇದ್ದ ದೊಡ್ಡ ಗೋಡೆ ಒಡೆದುಹೋಗಿದೆ. ಅಪನಂಬಿಕೆಗಳನ್ನೆಲ್ಲ ಕಳಚಿ ಇಬ್ಬರೂ ಒಂದಾಗಿದ್ದಾರೆ. ಈ ಸೀರಿಯಲ್‌ ಆರಂಭದಿಂದಲೂ ಜನಪ್ರಿಯತೆ ಪಡೆಯುತ್ತಲೇ ಇದೆ. ಇದರ ನಾಯಕ ಭೂಪತಿ ಮತ್ತು ನಾಯಕಿ ನಕ್ಷತ್ರಾ ನಡುವೆ ಇಲ್ಲೀವರೆಗಿನ ನೋವು, ಸಿಟ್ಟು, ದ್ವೇಷಕ್ಕೆ ಶತ್ರುಗಳೂ ಕಾರಣ ಆದರೂ ಅದಕ್ಕಿಂತ ದೊಡ್ಡ ಕಾರಣ ಪರಿಸ್ಥಿತಿ. ಶ್ರೀಮಂತ ದಂಪತಿಗೆ ಹುಟ್ಟಿದರೂ ಬಡವರ ಮನೆಯಲ್ಲಿ ಅವಮಾನಗಳ ನಡುವೆ ನಕ್ಷತ್ರ ಬದುಕಬೇಕಾಗಿ ಬಂದದ್ದನ್ನು ಪರಿಸ್ಥಿತಿ ಎನ್ನದೇ ಬೇರೇನು ಹೇಳಲೂ ಸಾಧ್ಯವಿಲ್ಲ. ಹಾಗೆ ಬೆಳೆದ ನಕ್ಷತ್ರಗೆ ಭೂಪತಿ ಮೇಲೆ ಮನಸ್ಸಾಗುತ್ತೆ. ಭೂಪತಿಗೆ ಇದು ತಿಳಿಯೋ ಹೊತ್ತಿಗೆ ಆತ ಶ್ವೇತಾ ಜೊತೆ ಹಸೆಮಣೆ ಏರಿ ಆಗಿರುತ್ತೆ. ಅಷ್ಟೊತ್ತಿಗೇ ನಕ್ಷತ್ರ ತನ್ನ ಮಗಳು ಅನ್ನೋದು ಚಂದ್ರಶೇಖರ್‌ಗೆ ತಿಳಿದುಹೋಗುತ್ತೆ. ಇಲ್ಲೀವರೆಗೆ ನೋವು ಅವಮಾನಗಳಲ್ಲೇ ಬದುಕಿದ್ದ ಮಗಳ ಬದುಕಿನಲ್ಲಿ ಭೂಪತಿಯೂ ಹೋಗಿ ಬಿಟ್ಟರೆ ಮತ್ಯಾವ ಸಂತೋಷವೂ ಇರಲ್ಲ ಅಂದುಕೊಂಡು ತಂದೆಯ ಸ್ವಾರ್ಥದಲ್ಲಿ ಚಂದ್ರಶೇಖರ್ ಬಲವಂತದಿಂದ ಭೂಪತಿ ಕೈಲಿ ನಕ್ಷತ್ರಗೆ ತಾಳಿ ಕಟ್ಟಿಸಿಬಿಡುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮದುವೆಯಿಂದ ನಕ್ಷತ್ರ ಬಾಳಲ್ಲಿ ಮತ್ತೆ ಬಿರುಗಾಳಿ. ಅತ್ತೆ ಮನೆಯಲ್ಲಿ ಯಾರ ಸಪೋರ್ಟೂ ಇಲ್ಲ. ಪ್ರತಿಯೊಬ್ಬರೂ ಹಲ್ಲು ಮಸೆಯುವವರೇ. ಇನ್ನೊಂದು ಕಡೆ ಡೆವಿಲ್, ಮತ್ತೊಂದು ಕಡೆ ಶ್ವೇತಾ, ಮಗದೊಂದು ಕಡೆ ಮೌರ್ಯ. ಈ ಮೂವರ ನಡುವೆ ಜಿಂಕೆಯಂಥಾ ನಕ್ಷತ್ರಾ. ಮೌರ್ಯಗೆ ಇದೀಗ ನಕ್ಷತ್ರ ಒಳ್ಳೆಯತನ ತಿಳಿದಿದೆ. ಆತ ತನ್ನ ತಪ್ಪು ತಿದ್ದಿಕೊಂಡು ಈವರೆಗೆ ಮಾಡಿದ್ದಕ್ಕೆ ಪಶ್ಚಾತಾಪ ಪಟ್ಟದ್ದಾನೆ. ಅಷ್ಟೇ ಅಲ್ಲ ತನ್ನ ಅಣ್ಣ ಭೂಪತಿಯಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿ ಆಗಿದ್ದಾನೆ. ಭೂಪತಿಗೆ ನಕ್ಷತ್ರ ಎಷ್ಟು ಒಳ್ಳೆಯವಳು, ಅವಳೆಂಥಾ ಅಪರಂಜಿ, ಅವಳ ಬಗ್ಗೆ ತಾನೆಷ್ಟು ತಪ್ಪು ತಿಳಿದುಕೊಂಡಿದ್ದೆ ಅನ್ನೋದು ಗೊತ್ತಾಗೋ ಹಾಗೆ ಮಾಡಿದ್ದಾನೆ. 

Lakshana serial : ನೀನೆಷ್ಟು ಒಳ್ಳೇವ್ಳು ಖಾಲಿಡಬ್ಬಿ, ನಾ ನಿನ್ನ ಹತ್ರಕ್ಕೂ ಬರಲ್ಲ ಕಣೇ ಅಂತಿದ್ದಾನೆ ಭೂಪತಿ!

ಇದೀಗ ಭೂಪತಿಗೆ ನಕ್ಷತ್ರ ಮೇಲಿನ ಅಪನಂಬಿಕೆಗಳೆಲ್ಲ ಹೋಗಿವೆ. ಆತ ಅವಳ ಮುಂದೆ ದೇವಸ್ಥಾನದಲ್ಲಿ ಮಂಡಿಯೂರಿ ಕ್ಷಮೆ ಕೇಳಿದ್ದಾನೆ. ತನ್ನೆಲ್ಲ ತಪ್ಪುಗಳಿಗೆ ಸಾರಿ ಅಂದಿದ್ದಾನೆ. ನಕ್ಷತ್ರ ಒಳ್ಳೆತನಗಳನ್ನ ಮನಸಾರೆ ಮೆಚ್ಚಿಕೊಂಡಿದ್ದಾನೆ. ಆಕೆಯ ಜಾಗದಲ್ಲಿ ಬೇರೆ ಯಾರೇ ಇದ್ದರೂ ಪರಿಸ್ಥಿತಿ ಹೇಗಿರುತ್ತಿತ್ತು ಅನ್ನೋದನ್ನು ಊಹಿಸಿ ಕಂಗಾಲಾಗಿದ್ದಾನೆ. ಈಗ ಎಲ್ಲವೂ ಒಳ್ಳೆಯದೇ ಆಗಿದೆ. 

ಇಂಥಾ ಟೈಮಲ್ಲೇ ನಕ್ಷತ್ರ ಮತ್ತು ಭೂಪತಿ ಜೊತೆಯಾಗಿ ಚಂದ್ರಶೇಖರ್ ಮನೆಗೆ ಬಂದಿದ್ದಾರೆ. ಅಲ್ಲಿ ಅವರಿಬ್ಬರೂ ಆದರದ ಸ್ವಾಗತ ಸಿಕ್ಕಿದೆ. ಇವರಿಬ್ಬರೂ ಜೊತೆಯಾಗಿ ಬರ್ತಾರೆ ಅನ್ನೋ ಖುಷಿಯಲ್ಲಿ ಚಂದ್ರಶೇಖರ್‌ ದಂಪತಿ ರಾತ್ರಿಯೆಲ್ಲ ನಿದ್ದೆಯನ್ನೇ ಮಾಡಿಲ್ಲ. ಮಗಳು ಅಳಿಯನನ್ನು ಇನ್ನಿಲ್ಲದ ಸಂಭ್ರಮದಿಂದ ಅವರು ಬರಮಾಡಿಕೊಂಡಿದ್ದಾರೆ. 

ಅದೇ ಸಮಯಕ್ಕೆ ಅಲ್ಲಿ ಡೆವಿಲ್ ಎಂಟ್ರಿಯಾಗಿದೆ. ನಗುತ್ತಿರುವ ಚಂದ್ರಶೇಖರ್‌ ಮನಸ್ಸನ್ನು ಸಣ್ಣಗೆ ಚಿವುಟಿ ಮುಂದೆ ಹೋಗಿದ್ದಾಳೆ ಭಾರ್ಗವಿ. ಚಂದ್ರಶೇಖರ್‌ ಬದುಕನ್ನು ಸರ್ವನಾಶ ಮಾಡೋ ಗುರಿಯಲ್ಲಿರುವ ಆಕೆಗೆ ನಕ್ಷತ್ರ ಬದುಕು ಸರಿಹೋದದ್ದು ದೊಡ್ಡ ಸವಾಲಾಗಿದೆ. ಇದೀಗ ಶ್ವೇತಾನೂ ಆಕೆಗೆ ಜೊತೆಯಾಗಿದ್ದಾಳೆ. ಮುಂದೆ ಇಬ್ಬರಿಬ್ಬರೂ ಸೇರಿಕೊಂಡು ಏನು ಕಿತಾಪತಿ ಮಾಡ್ತಾರೆ. ಈಗಷ್ಟೇ ಹೊಸ ಬದುಕು ಕಾಣುತ್ತಿರುವ ನಕ್ಷತ್ರ ಭೂಪತಿಯನ್ನು ಮತ್ತೆ ನೋವಿಗೆ ದೂಡ್ತಾರ ಅನ್ನೋದನ್ನು ಕಾದು ನೋಡ್ಬೇಕಿದೆ. 

Lakshna serial: ಆಯ್ತಲ್ಲಾ, ನಕ್ಷತ್ರಾ ಕಥೆ ಎಲ್ಲ ಭೂಪತಿಗೆ ಗೊತ್ತಾಯ್ತು, ಮುಂದ?