ಕಲರ್ಸ್ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಯಾವುದೇ ಸಮುದಾಯವನ್ನು ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ ಎಂದು ಹಾಸ್ಯನಟ ಹುಲಿ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ  ಜಾತಿ ನಿಂದನೆ ಮಾಡಿದ ಪದದ ರೀತಿ ಕೇಳಿಸಿದ್ದಲ್ಲಿ ಕ್ಷಮಿಸಿ ಎಂದಿದ್ದಾರೆ.

ಬೆಂಗಳೂರು (ಅ.08): ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ 2024ರ ಕಾರ್ಯಕ್ರಮದಲ್ಲಿ ಕಾಮಿಡಿ ಸ್ಕಿಟ್‌ನಲ್ಲಿ ತುಕಾಲಿ ಸಂತೋಷ್‌ಗೆ ಬೈಯುವಾಗ ನೀನು ಗುಂಡ ಆಲ್ಲ, 'ರೋಡಲ್ಲಿ ಬಿದ್ದಿರೋ ಹೊಂಡ (ವಡ್ಡ ಅಲ್ಲ) ಇದ್ದಂಗೆ ಇದ್ದೀಯಾ' ಎಂದು ಹೇಳಿದ್ದಾಗಿ ಹಾಸ್ಯನಟ ಹುಲಿ ಕಾರ್ತಿಕ್ ಅವರು ಸ್ಪಷ್ಟನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಹುಲಿ ಕಾರ್ತಿಕ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಎಫ್‌ಐಆರ್ ದಾಖಲಾದ ಬೆನ್ನಲ್ಲಿಯೇ ಸ್ಪಷ್ಟೀಕರಣ ನೀಡುವುದಕ್ಕೆ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಅದರಲ್ಲಿ ನಾವು ಎಲ್ಲ ಸಮುದಾಯವನ್ನು ನಗಿಸುವ ಕೆಲಸ ಮಾಡುತ್ತೇವೆ. ಯಾವುದೇ ಸಮುದಾಯವನ್ನು ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ. ಯಾವುದೇ ಜಾತಿ, ಧರ್ಮದ ಬಗ್ಗೆ ಹಾಸ್ಯ ಮಾಡುವುದಕ್ಕೆ ಖಾಸಗಿ ವಾಹಿನಿಯಲ್ಲಿ ಅವಕಾಶ ಇರುವುದಿಲ್ಲ. ಸೂಕ್ತವಾಗಿ ವ್ಯವಸ್ಥೆ ಇದ್ದು ಅದರಂತೆ ಸ್ಕ್ರಿಪ್ಟ್ ತಯಾರಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಕಾಲಿ ಸಂತೋಷ್‌ಗೆ ಬೈಯುವಾಗ ಜಾತಿ ನಿಂದನೆ ಮಾಡಿದ ಹುಲಿ ಕಾರ್ತಿಕ್ ವಿರುದ್ಧ ಎಫ್‌ಐಆರ್!

ಇನ್ನು ಕಾಮಿಡಿ ಸ್ಕಿಟ್‌ನಲ್ಲಿ ನಾನು ಬಳಸಿರುವ ಪದ 'ಹೊಂಡಾ' ಜಾತಿ ಸೂಚಕ ಪದವಲ್ಲ. ತುಕಾಲಿ ಸಂತೋಷ್ ಹೇಳಿದ ಡೈಲಾಗ್‌ಗೆ ಕೌಂಟರ್ ಡೈಲಾಗ್ ಹೇಳುವಾಗ 'ನೀನು ಗುಂಡನಾ? ರೋಡ್ ನಲ್ಲಿ ಬಿದ್ದಿರುವ ಹೊಂಡಾ ಇದ್ದಂಗ್ ಇದ್ದೀಯಾ' ಎಂದು ಹೇಳಿದ್ದೇನೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಈ ವಾಕ್ಯ ಬಳಕೆ ಮಾಡಿವಾಗ ಸ್ಪಷ್ಟವಾಗಿ ಹೊಂಡಾ ಎಂದು ಬಳಸಿದ್ದೇನೆ. ಆದರೆ, ಮ್ಯೂಸಿಕ್ ಜೊತೆಗೆ ಡೈಲಾಗ್ ಹೇಳುವಾಗ ಹೊಂಡಾ ಪದ ಸಮುದಾಯದ ಹೆಸರಿಸಿರುವಂತೆ ಕೇಳಿಸಿರಬಹುದು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಯಾವುದೇ ಸಮುದಾಯವನ್ನು ಹಾಸ್ಯ ಮಾಡುವ ಉದ್ದೇಶ ಇಲ್ಲ. ಮನರಂಜನೆ ನೀಡುವ ಉದ್ದೇಶದಿಂದ ನಟನೆ ಮಾಡುತ್ತಿದ್ದೇವೆ. ಒಂದು ವೇಳೆ ಆ ರೀತಿ ನಿಮಗೆ ಕೇಳಿಸಿದ್ದಲ್ಲಿ ದಯವಿಟ್ಟು ಕ್ಷಮಿಸಿ. ಯಾರಿಗೂ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲ ಎಂದು ಹಾಸ್ಯನಟ ಹುಲಿ ಕಾರ್ತೀಕ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಆಗ ರಾಕೇಶ್ ಜೊತೆ ಅವಳಾಟ, ಇದೀಗ ಜಗದೀಶ್-ಹಂಸ ಹೊಸ ಆಟ, ಗೆಲ್ಲಲ್ಲು ಎಲ್ಲ ಮರೀತಾರಾ?

ಬೋವಿ ಸಮುದಾಯದ ಮುಖಂಡ ಲೋಕೇಶ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಮಾಡಿದ್ದಾರೆಂದು ಕೊಟ್ಟ ದೂರಿನಲ್ಲಿ ಹುಲಿ ಕಾರ್ತಿಕ್ (ಎ1), ಸಂಭಾಷಣೆಕಾರ (ಸ್ಕ್ರಿಪ್ಟ್ ರೈಟರ್-ಎ2), ಕಾರ್ಯಕ್ರಮದ ನಿರ್ದೇಶಕ (ಅನುಬಂಧ ಡೈರೆಕ್ಟರ್ -ಎ3) ಹಾಗೂ ಕಾರ್ಯಕ್ರಮದ ನಿರ್ಮಾಪಕ (ಎ4) ವಿರುದ್ಧವೂ ದೂರು ಕೊಟ್ಟಿದ್ದರು ಈ ಸಂಬಂಧ FIR ದಾಖಲಾಗಿತ್ತು. ಮುಂದುವರೆದು, ಕೆಂಗೇರಿ ಉಪವಿಭಾಗ ಎಸಿಪಿಯಿಂದ ವಿಚಾರಣೆಗೆ ಹಾಜರಾಗಲು ಕಾರ್ತಿಕ್‌ಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.