50 ಕೋಟಿ ರೂ. ನಾಯಿ ವಿಚಾರವಾಗಿ ಇಡಿ ದಾಳಿಗೆ ಒಳಗಾಗಿದ್ದ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಇದೀಗ ಜೈಲಿನ ಅನುಭವದ ಬಗ್ಗೆ ಮಾತನಾಡಿದ್ದಾರೆ. ಜೈಲೇ ದಿ ಬೆಸ್ಟ್, ಅಲ್ಲಿ ಅಪ್ಪ-ಅಮ್ಮನಿಗಿಂತ ಚೆನ್ನಾಗಿ ನೋಡಿಕೊಂಡರು ಎಂಬ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ನೂರಾರು ಕೋಟಿ ರೂಪಾಯಿಗಳ ನಾಯಿಗಳ ಒಡೆಯ ಬಿಗ್ಬಾಸ್ ಖ್ಯಾತಿಯ ಡಾಗ್ ಸತೀಶ್ ಅವರ ಮೇಲೆ ಇದಾಗಲೇ ಕೇಸ್ ಕೂಡ ಆಗಿತ್ತು. ವೂಲ್ಫ್ ಡಾಗ್ ಅನ್ನು ಖರೀದಿಸಿರುವ ಬಗ್ಗೆ ಅವರು ಪೋಸ್ಟ್ ಹಾಕಿದ್ದರು. ಇದು ಬಿಗ್ಬಾಸ್ಗೂ ಹೋಗುವ ಮುನ್ನ ನಡೆದಿದ್ದ ಘಟನೆ. ಐವತ್ತು ಕೋಟಿ ರೂ. ಶ್ವಾನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಅವರ ನಿವಾಸದ ಮೇಲೆ ದಾಳಿ ಕೂಡ ನಡೆಸಿತ್ತು. ಹಲವಾರು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಸುಳ್ಳು ಎಂದೇ ಹೇಳಿದ್ದರು. ಕೊನೆಗೆ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ED ರೇಡ್
ಇದರ ಬೆಲೆ 4.4 ಮಿಲಿಯನ್ ಪೌಂಡ್ ಆಗಿದ್ದು ಭಾರತದ ರೂಪಾಯಿಗೆ ಈ ಹಣವನ್ನು ಹೋಲಿಕೆ ಮಾಡಿದರೆ ಇದು 49 ಕೋಟಿ ರೂ. ಮೌಲ್ಯದ್ದು ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾಡು ತೋಳ ಹಾಗೂ ಕಕೇಶಿಯನ್ ಶೆಪರ್ಡ್ ಎಂಬ ಎರಡು ತಳಿಗಳ ಮಿಶ್ರಣವಾಗಿದ್ದ ಈ ನಾಯಿಯು ತೀರಾ ಅಪರೂಪದಲ್ಲಿ ಅಪರೂಪದ್ದು ಎಂದು ಸತೀಶ್ ಹೇಳಿಕೊಂಡಿದ್ದರು. ಆದರೆ ಇವೆಲ್ಲವೂ ಸುಳ್ಳು ಎಂದು ಅಧಿಕಾರಿಗಳು ತಿಳಿಸಿದ್ದರು. ಇದೇ ವಿಚಾರ ಹಾಗೂ ಬಳಿಕ ಪತ್ನಿಯಿಂದ ಡಿವೋರ್ಸ್ ವಿಚಾರವಾಗಿ ಬಹಳ ಸದ್ದು ಮಾಡಿದ್ದ ಡಾಗ್ ಸತೀಶ್ ಅವರಿಗೆ ಬಿಗ್ಬಾಸ್ ಆಫರ್ ಕೊಟ್ಟಿತ್ತು. ಇದೀಗ ಅವರು ಬಿಗ್ಬಾಸ್ ಸತೀಶ್ ಆಗಿ ಫೇಮಸ್ ಆಗಿದ್ದಾರೆ.
ಜೈಲೇ ದಿ ಬೆಸ್ಟ್
ಇದೀಗ, ತಾವು ಜೈಲಿಗೆ ಹೋಗಿದ್ದ ಬಗ್ಗೆ ಮಾತನಾಡಿರುವ ಚಿತ್ರಲೋಕ ಚಾನೆಲ್ನಲ್ಲಿ ಮಾತನಾಡಿರುವ ಸತೀಶ್, ಜೈಲಿನಲ್ಲಿ ತಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡರು ಎನ್ನುವ ಬಗ್ಗೆ ವಿವರಿಸಿದ್ದಾರೆ. ಜೈಲು ದಿ ಬೆಸ್ಟ್. ಅಪ್ಪ-ಅಮ್ಮನಿಗಿಂತಲೂ ಅಲ್ಲಿ ಇರುವವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಹೊರಗಡೆ ಇರುವ ಬದಲು ಒಳಗಡೆ ಇರುವುದೇ ತುಂಬಾ ಲೇಸು ಎಂದು ಹೇಳಿದ್ದಾರೆ. ಆಚೆ ನೆಮ್ಮದಿ ಇಲ್ಲ ಎಂದೂ ಹೇಳಿದ್ದಾರೆ. ಏನಾದ್ರೂ ಇಶ್ಯು ಮಾಡಿ ಒಳಗೆ ಕಳಿಸುವ ಹಾಗಿದ್ರೆ ಕಳಿಸಿ ಸರ್ ಎಂದಿದ್ದಾರೆ!
ಜೈಲಿನಲ್ಲಿ ಅವರು ಹಾಗೆ ನೋಡಿಕೊಂಡರು ಎನ್ನುವ ಬದಲು ನಾನು ಹಾಗೆ ನೋಡಿಕೊಳ್ಳುವಂತೆ ಮಾಡಿದೆ ಎಂದ ಡಾಗ್ ಸತೀಶ್, ಅಂಥದ್ದೇನು ಮಾಡಿದ್ರಿ ಎಂದು ಕೇಳಿದಾಗ ಮಾತ್ರ ಅಪ್ಪಿತಪ್ಪಿಯೂ ಆ ವಿಷಯ ಹೇಳಲಿಲ್ಲ. ಅದನ್ನೆಲ್ಲಾ ಹೇಳೋಕೆ ಆಗಲ್ಲ, ಮುಂದೆನೂ ಹೇಳಲ್ಲ, ಇದು ಸೀಕ್ರೇಟ್ ಎಂದು ಹೇಳಿದ್ರು. ಆದರೆ ಒಳಗಡೆ ನೀವು ಕಳಿಸಿದ್ರೆ, ಇತ್ತ ಪತ್ನಿ ಕಾಟನೂ ಇರಲ್ಲ, ನೆಮ್ಮದಿಯಾಗಿ ಇರ್ತೇನೆ ಎಂದು ಜೋರಾಗಿ ನಕ್ಕರು.
ಭಾರಿ ಚರ್ಚೆ
ಇಷ್ಟು ಇವರು ಹೇಳುತ್ತಿದ್ದಂತೆಯೇ, ಸೋಷಿಯಲ್ ಮೀಡಿಯಾದಲ್ಲಿ ಜೈಲಿನಲ್ಲಿ ಶ್ರೀಮಂತ ಆರೋಪಿಗಳು ಹಾಗೂ ಅಪರಾಧಿಗಳ ಬಗ್ಗೆ ಚರ್ಚೆ ಮತ್ತೆ ಶುರುವಾಗಿದೆ. ವಿಕೃತಕಾಮಿ ಉಮೇಶ್ ರೆಡ್ಡಿ ಮತ್ತು ಐಸಿಸ್ ಉಗ್ರನಿಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಕಮೆಂಟಿಗರು ಮತ್ತೆ ಕೆದಕಿದ್ದಾರೆ. ದುಡ್ಡಿದ್ದರೆ ಸಾಕು, ಜೈಲಿನಲ್ಲಿ ಎಲ್ಲವೂ ಸಿಗುತ್ತೆ ಎನ್ನುವುದು ಸಾಬೀತು ಆಗ್ತಿದೆ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಆರೋಪಿಗಳನ್ನು ಅಪರಾಧಿಗಳಂತೆ ನೋಡುವುದು ಸರಿಯಲ್ಲ.ಅವರನ್ನು ನಮ್ಮ ಜೈಲಿನಲ್ಲಿ ಚೆನ್ನಾಗಿ ನೋಡಿಕೊಳ್ತಿರೋದು ಖುಷಿಯ ವಿಚಾರ ಎಂದಿದ್ದಾರೆ. ಒಟ್ಟಿನಲ್ಲಿ ಈ ಸಮಯದಲ್ಲಿ ಈ ವಿಡಿಯೋ ವೈರಲ್ ಆಗಿರುವುದು ವಿಧವಿಧ ರೀತಿಯ ಕಮೆಂಟ್ಸ್ಗೆ ದಾರಿ ಮಾಡಿಕೊಡುತ್ತಿದೆ.
