ಪದೇ ಪದೇ ಕಾಲ್ ಬಂದ್ರೆ ಪಿಕ್ ಮಾಡಿ; ಸ್ನೇಹಿತೆಯನ್ನು ಕಳೆದುಕೊಂಡು ಕಣ್ಣೀರಿಟ್ಟ ನಟಿ ಕಾವ್ಯಾ!
ಫ್ಯಾಮಿಲಿ ಗ್ಯಾಂಗ್ಸ್ಟರ್ಸ್ನಲ್ಲಿ ಮಿಂಚುತ್ತಿರುವ ಸೀರಿಯಲ್ ತಂಡಗಳು. ಸ್ನೇಹಿತರನ್ನು ನೆನೆದು ಕಣ್ಣೀರಿಟ್ಟ ನಟಿ..
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿಯೊಂದು ಧಾರಾವಾಹಿಯೂ ಒಂದೊಂದು ತಂಡವಾಗಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಫ್ಯಾಮಿಲಿ ಗ್ಯಾಂಗ್ಸ್ಟರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಗೆದ್ದವರಿಗೆ ಎಷ್ಟು ಸಿಗುತ್ತೆ ಗೊತ್ತಿಲ್ಲ ಆದರೆ ವಾರ ವಾರವೂ ಟಾಸ್ಕ್ ಗೆದ್ದರೆ ಅವರ ಮುಖದಲ್ಲಿ ಕಾಣೋ ಖುಷಿನೇ ದೊಡ್ಡ ಪ್ರಶಸ್ತಿ. ಕೆಲವು ದಿನಗಳ ಹಿಂದೆ ಪ್ರಸಾರವಾದ ಎಪಿಸೋಡ್ನಲ್ಲಿ ಸ್ನೇಹಿತರ ಜೀವನಕ್ಕೆ ಎಷ್ಟು ಮುಖ್ಯ ಅಂತ ಪ್ರಶ್ನೆ ಬಂದಾಗ ಕೆಂಡಸಂಪಿಗೆ ನಟಿ ಕಾವ್ಯಾ ಕಣ್ಣೀರಿಟ್ಟಿದ್ದಾರೆ.
'ನಾವು 5 ಜನ ಒಂದು ಗ್ರೂಪ್ನಲ್ಲಿರುವುದು ಅದರಲ್ಲಿ ಒಬ್ಬಳು ನನಗೆ ತುಂಬಾನೇ ಕ್ಲೋಸ್. ಹೇಗೆ ಅಂದ್ರೆ ದಿನ ಕಾಲ್ ಅಥವಾ ಮೆಸೇಜ್ ಮಾಡಿಕೊಂಡು ನಮ್ಮ ದಿನ ಹೇಗಿತ್ತು ಏನೆಲ್ಲಾ ಆಗುತ್ತಿತ್ತು ಎಂದು ಮಾತನಾಡುತ್ತೀವಿ. ಒಂದು ದಿನ ಹೈದರಾಬಾದ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದೆ. ಆಗ ಆಕೆ ನನಗೆ ಕಾಲ್ ಮಾಡಿದ್ದಾಳೆ. ತುಂಬಾ ಸಲ ಕರೆ ಮಾಡಿದ್ದಾರೆ. ಬೇಕು ಬೇಕು ಅಂತ ಕಾಲ್ ಪಿಕ್ ಮಾಡದೆ ಇರಲಿಲ್ಲ ಶೂಟಿಂಗ್ನಲ್ಲಿ ಪಿಕ್ ಮಾಡಬಾರದು ಅಂತಾನೂ ಯಾರೂ ಹೇಳಿಲ್ಲ ಆದರೆ ಕಾರಣ ಗೊತ್ತಿಲ್ಲ ನಾನು ಪಿಕ್ ಮಾಡಿಲ್ಲ. ಅವತ್ತು ಶೂಟಿಂಗ್ ಮುಗಿಸಿಕೊಂಡು ನಾನು ಹೋಗಿ ಮನೆಯಲ್ಲಿ ರೆಸ್ಟ್ ಮಾಡುತ್ತಿರುವಾಗ ಮಾರನೇ ದಿನ ಕರೆ ಬರುತ್ತೆ. ಆಕೆ ಇನ್ನಿಲ್ಲ ಅಂತ. ಆಕೆ ಏನು ಹೇಳುವುದಕ್ಕೆ ಕಾಲ್ ಮಾಡಿದಳು ನನಗೆ ಗೊತ್ತಿಲ್ಲ ದಿನ ಮಾತನಾಡುತ್ತಿದ್ದರೂ ಯಾವ ನೋವಿನಲ್ಲಿ ಇದ್ದಳು ಗೊತ್ತಿಲ್ಲ ಆದರೆ ನಾನು ಅವತ್ತು ಕರೆ ಮಾಡಿದ್ದರೆ ಬಹುಷ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದಿತ್ತು. ನನ್ನ ಬಳಿ ಹೇಳಿಕೊಂಡಿರೆ ನೆಮ್ಮದಿಯಾಗಿರುತ್ತಿದ್ದಳು' ಎಂದು ಕಾವ್ಯಾ ಕಣ್ಣೀರಿಟ್ಟಿದ್ದಾರೆ.
'ಪದೇ ಪದೇ ಒಬ್ಬರು ನಿಮಗೆ ಕರೆ ಮಾಡುತ್ತಿದ್ದಾರೆ ಅಂದ್ರೆ ದಯವಿಟ್ಟು ಪಿಕ್ ಮಾಡಿ ಮಾತನಾಡಿ ಖಂಡಿತಾ ನಿಮ್ಮ ಆ ಕೆಲವೊಂದು ನಿಮಿಷ ಒಬ್ಬರ ಜೀವನ ಉಳಿಸುತ್ತದೆ' ಎಂದು ಕಾವ್ಯಾ ಹೇಳಿದ್ದಾರೆ. ಸ್ನೇಹಿತರು ತುಂಬಾನೇ ಮುಖ್ಯ ಅಂತ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಸಾಕಷ್ಟು ಜನರು ಈ ರೀತಿ ಆಪ್ತರನ್ನು ಕಳೆದುಕೊಂಡಿರುವುದಾಗಿ ಹೇಳಿಕೊಂಡು ಭಾವುಕರಾಗಿದ್ದಾರೆ.
ಶನಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ಸಿನಿಲ್ ಕೂಡ ಕೆಂಡಸಂಪಿಗೆ ತಂಡದಲ್ಲಿದ್ದಾರೆ. 'ನನಗೆ ತಂದೆ ತಾಯಿ ಪ್ರೀತಿ ಸಿಕ್ಕಿಲ್ಲ ನಾನು ಬೆಳೆದಿರುವುದು ಆಶ್ರಮದಲ್ಲಿ ಹೀಗಾಗಿ ನನಗೆ ಸ್ನೇಹಿತರು ತುಂಬಾನೇ ಮುಖ್ಯವಾಗುತ್ತದೆ. ಸ್ನೇಹಿತರಿಂದ ನಾನು ಇಷ್ಟು ಜೀವನ ಮಾಡಿ ಸಾಧನೆ ಮಾಡಲು ಸಾಧ್ಯವಾಗಿದ್ದು. ನನಗೆ ಸ್ನೇಹಿತರು ತುಂಬಾನೇ ಮುಖ್ಯ' ಎಂದು ಸುನಿಲ್ ಹೇಳಿದ್ದಾರೆ.