BBK 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ನನಗೆ ಚಪ್ಪಲಿ ತೋರಿಸಿದರು, ಕಲಾವಿದರಿಗೆ ಅವಮಾನ ಆಡಿದರು ಎಂದು ಅಶ್ವಿನಿ ಗೌಡ ಪಟ್ಟು ಹಿಡಿದಿದ್ದರು. ಇದು ಹೊರಗಡೆಯೂ ಸೌಂಡ್‌ ಆಗಿತ್ತು. ಈ ಬಗ್ಗೆ ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ನನಗೆ ಚಪ್ಪಲಿ ತೋರಿಸಿದರು ಎಂದು ಅಶ್ವಿನಿ ಗೌಡ ಅವರು ಪದೇ ಪದೇ ಹೇಳಿದ್ದರು. ಆದರೆ ಕಳೆದ ವಾರ ಸುದೀಪ್‌ ಈ ಬಗ್ಗೆ ಮಾತನಾಡಲೇ ಇಲ್ಲ. ಈ ವಿಷಯ ಹಾಗೆ ಉಳಿದಿತ್ತು. ಅದಾದ ಬಳಿಕ ರಂಗಭೂಮಿ ಕಲಾವಿದೆ ಕುಶಲಾ ಎನ್ನುವವರು ಮಾಧ್ಯಮದ ಮುಂದೆ ಬಂದು, “ರಕ್ಷಿತಾ ಕಲಾವಿದರಿಗೆ ಚಪ್ಪಲಿ ತೋರಿಸಿದರು. ಬಿಗ್‌ ಬಾಸ್‌ ಶೋ ಬ್ಯಾನ್‌ ಆಗಬೇಕು” ಎಂದು ಹೇಳಿದ್ದರು. ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಅಶ್ವಿನಿ ಗೌಡ ವಾದ ಏನು?

ಚಪ್ಪಲಿ ವಿಷಯದ ಬಗ್ಗೆ ಅಶ್ವಿನಿ ಗೌಡ ಬಳಿ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ. “ ರಕ್ಷಿತಾ ಶೆಟ್ಟಿ ನಾಟಕ ಮಾಡಿ, ಚಪ್ಪಲಿ ತೋರಿಸುತ್ತಿದ್ದೀಯಾ ಅಂದರೆ ಯಾರಿಗೆ ಅವಮಾನ ಮಾಡುತ್ತಿದ್ದೀಯಾ?” ಎಂದು ಅಶ್ವಿನಿ ಗೌಡ ಅವರು ಕಿಚ್ಚ ಸುದೀಪ್‌ ಮುಂದೆ ಪ್ರಶ್ನೆ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಏನು ಹೇಳಿದ್ರು?

“ಕಲಾವಿದರಿಗೆ ರಕ್ಷಿತಾ ಶೆಟ್ಟಿ ಚಪ್ಪಲಿ ತೋರಿಸಿದ್ರಾ? ನಾವು ಪರಿಕಲ್ಪನೆಯನ್ನು ತಪ್ಪಾಗಿ ಕೊಟ್ಟಾಗ, ಯಾರು ಯಾರೋ ಕಲಾವಿದರಿಗೆ ಅವಮಾನ ಮಾಡಿದ್ರಿ ಅಂತಾರೆ. ನಾನೊಬ್ಬ ಕಲಾವಿದ ಅಲ್ವಾ? ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕಲಾವಿದರಿಗೆ ನಾನು ತಪ್ಪು ತಿಳುವಳಿಕೆ ಎಂದು ಉತ್ತರ ಕೊಡಬೇಕಿತ್ತು” ಎಂದು ಕಿಚ್ಚ ಸುದೀಪ್‌ ಪ್ರಶ್ನೆ ಮಾಡಿದ್ದಾರೆ.

ನಿಜಕ್ಕೂ ನಡೆದಿದ್ದು ಏನು?

ಅಂದಹಾಗೆ ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಗೌಡ ಅವರ ಮಧ್ಯೆ ಜಗಳ ಆಗಿತ್ತು. ರಕ್ಷಿತಾ ಅವರು ಅಶ್ವಿನಿ ಬಳಿ ಮತ ಕೇಳಬೇಕಿತ್ತು, ಆಗ ರಕ್ಷಿತಾ ಮತ ಕೇಳಲ್ಲ ಎಂದರು. ಅದಾದಮೇಲೆ ರಕ್ಷಿತಾ ಅವರು ನಿಮ್ಮ ಮತವನ್ನು ನಾನು ಕಾಲಿನಲ್ಲಿ ಹಾಕಿ ತುಳಿಯುತ್ತೇನೆ ಎಂಬರ್ಥದಲ್ಲಿ ಸನ್ನೆ ಮಾಡಿದರು. ಇದನ್ನು ನೋಡಿ ಅಶ್ವಿನಿ ಅವರು ಕಲಾವಿದರಿಗೆ ಅವಮಾನ ಮಾಡಿದಳು, ಚಪ್ಪಲಿ ತೋರಿಸಿದರು ಎಂದರು. ಇದನ್ನು ಧನುಷ್‌ ಗೌಡ, ಗಿಲ್ಲಿ ನಟ ಕೂಡ ನೋಡಿದ್ದು, ಸ್ಪಷ್ಟನೆ ನೀಡಿದ್ದರೂ ಕೂಡ ಅಶ್ವಿನಿ ನಂಬಲೇ ಇಲ್ಲ.

ಪ್ರತ್ಯಕ್ಷದರ್ಶಿ ಮಲ್ಲಮ್ಮ ಏನು ಹೇಳಿದ್ರು?

ಅಂದಹಾಗೆ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮಲ್ಲಮ್ಮ ಕೂಡ ಈ ಬಗ್ಗೆ ಮಾತನಾಡಿದ್ದು, “ರಕ್ಷಿತಾ ಚಪ್ಪಲಿ ತೋರಿಸಿಲ್ಲ. ಆದರೆ ನಿಮ್ಮ ಮತವನ್ನು ತುಳಿದು ಹಾಕ್ತೀನಿ ಎಂದಳು. ಅವಳು ಆ ಮಾತು ಆಡಬಾರದಿತ್ತು, ಆದರೆ ಚಪ್ಪಲಿ ತೋರಿಸಿಲ್ಲ” ಎಂದು ಎಷಿಯಾನೆಟ್‌ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.