ಬಿಗ್‌ಬಾಸ್‌ ಖ್ಯಾತಿಯ ಹನುಮಂತ ಮನೆಗೆ ಧನರಾಜ್‌ ಭೇಟಿ ನೀಡಿದಾಗ, ಹನುಮಂತನ ಅಣ್ಣ ಮಾರುತಿಯೂ ರಿಯಾಲಿಟಿ ಶೋ ಸ್ಪರ್ಧಿ ಎಂಬುದು ಬಹಿರಂಗವಾಯಿತು. ಮಾರುತಿ 'ಹಳ್ಳಿ ಹೈದ'ದಲ್ಲಿ ಸ್ಪರ್ಧಿಸಿದ್ದು, ಡಾ.ರಾಯ್‌ ಕೊಟ್ಟ ಸಹಿ ಇರುವ ಬ್ಯಾಟ್‌ ಅಮೂಲ್ಯವೆನ್ನುತ್ತಾರೆ. ಹನುಮಂತ ಈಗ ಇವೆಂಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಧನರಾಜ್‌ ಹನುಮಂತನ ಮನೆಯವರ ಪ್ರೀತಿಗೆ ಮನಸೋತಿದ್ದಾರೆ.

ಇತ್ತೀಚೆಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಖ್ಯಾತಿಯ ಧನರಾಜ್‌ ಆಚಾರ್‌ ಅವರು ತನ್ನ ದೋಸ್ತ, ಬಿಗ್‌ ಬಾಸ್‌ ವಿಜೇತ ಹನುಮಂತ ಮನೆಗೆ ಹೋಗಿದ್ದಾರೆ. ಆ ವೇಳೆ ಹನುಮಂತನ ಅಣ್ಣ ಮಾರುತಿಯ ಕುರಿತ ರೋಚಕ ವಿಷಯ ರಿವೀಲ್‌ ಆಗಿದೆ.

ಇವೆಂಟ್‌ಗಳಲ್ಲಿ ಹನುಮಂತ ಬ್ಯುಸಿ! 
ಹನುಮಂತ ಈಗಾಗಲೇ ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿದ್ದಾರೆ. ಆರಂಭದಲ್ಲಿ ʼಸರಿಗಮಪʼ, ಆಮೇಲೆ ʼಭರ್ಜರಿ ಬ್ಯಾಚುಲರ್ಸ್ʼ‌, ʼಕಾಮಿಡಿ ಕಿಲಾಡಿಗಳುʼ ಶೋನಲ್ಲಿಯೂ ಕೂಡ ಹಾವೇರಿಯ ಹನುಮಂತ ಭಾಗವಹಿಸಿದ್ದರು. ಈಗ ಅವರು ಇವೆಂಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಹನುಮಂತ ದೊಡ್ಮನೆಯಲ್ಲಿದ್ದಾಗಲೇ ಅವರ ಅಣ್ಣ ಮಾರುತಿ ಕೂಡ ರಿಯಾಲಿಟಿ ಶೋ ಸ್ಪರ್ಧಿ ಎನ್ನೋದು ಗೊತ್ತಾಗಿತ್ತು. ಹನುಮಂತ ನಿಜಕ್ಕೂ ಮುಗ್ಧನೋ ಅಥವಾ ಬುದ್ಧಿವಂತನೋ ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇದ್ದು, ಇನ್ನೂ ಇದಕ್ಕೆ ಸ್ಪಷ್ಟ ಉತ್ತರವೇ ಸಿಕ್ಕಿಲ್ಲ. 

ಅಣ್ಣನೂ ರಿಯಾಲಿಟಿ ಶೋ ಸ್ಪರ್ಧಿ! 
2015ರಲ್ಲಿ ʼಹಳ್ಳಿ ಹೈದ ಪ್ಯಾಟೇಗ್‌ ಬಂದ ಸೀಸನ್‌ 2’ ಶೋನಲ್ಲಿ ಮಾರುತಿ ಭಾಗವಹಿಸಿದ್ದರು.ಈ ಶೋವನ್ನು ನಟ ಸಂತೋಷ್‌ ನಿರೂಪಣೆ ಮಾಡಿದ್ದರು. ಈ ಶೋನ ಮೊದಲ ಸೀಸನ್‌ನ್ನು ಖ್ಯಾತ ನಿರೂಪಕ ಅಕುಲ್‌ ಬಾಲಾಜಿ ಅವರು ನಿರೂಪಣೆ ಮಾಡಿದ್ದರು. ʼಹಳ್ಳಿ ಹೈದʼ ಸೀಸನ್‌ 2ರಲ್ಲಿ ಶಿವಕುಮಾರ್‌ ಎನ್ನುವವರು ವಿನ್ನರ್‌ ಆಗಿದ್ದರು. ಈ ಶೋನಲ್ಲಿ ಮಾರುತಿ ಅವರು ಫಿನಾಲೆ ಸ್ಪರ್ಧಿಯಾಗಿದ್ದರು. ಈ ಶೋನ ಆರಂಭದ ಪ್ರೋಮೋದಲ್ಲಿ ಮಾರುತಿ ಅವರು ಕುರಿ ಕಾಯೋದು, ಜೊತೆಯಲ್ಲಿ ಹನುಮಂತ ತಂದೆ-ತಾಯಿ ಮಾತನಾಡಿರುವ ದೃಶ್ಯ ಇದೆ.

ಮಾರುತಿಗೆ ಸಿಕ್ಕ ಬ್ಯಾಟ್!‌ 
ಮಾರುತಿ ಓದಿರೋದು ಕೇವಲ ಮೂರನೇ ಕ್ಲಾಸ್‌. ಶಾಲೆಯಲ್ಲಿ ಯಾವಾಗಲೂ ಮಾರುತಿ ಬಗ್ಗೆ ದೂರುಗಳು ಕೇಳಿಬರುತ್ತಿದ್ದವು. ಬ್ಯಾಗ್‌ ಕಳೆದೋಯ್ತ, ಪೆನ್ಸಿಲ್ ಇಲ್ಲ, ಪಾಟಿ ಇಲ್ಲ, ಪುಸ್ತಕ ಇಲ್ಲ ಅಂತ ಹೇಳಲಾಗುತ್ತಿತ್ತು. ಹೀಗಾಗಿ ಮಾರುತಿ ಮೂರನೇ ಕ್ಲಾಸ್‌ಗೆ ಶಾಲೆ ಬಿಟ್ಟು ಕುರಿ ಕಾಯಲು ಶುರು ಮಾಡಿದ್ದರು. ಈಗ ಧನರಾಜ್‌ ಆಚಾರ್‌ ಅವರು ಮಾರುತಿ ಜೊತೆ ಮಾತನಾಡಿದ್ದರು. ಅಲ್ಲಿ ಅವರು, “ನಾನು ಹಳ್ಳಿ ಹೈದ ಪ್ಯಾಟೇಗ್‌ ಬಂದ ಶೋನಲ್ಲಿ ಭಾಗವಹಿಸಿದ್ದೆ. ಸೀಸನ್‌ 2 ಅದಾಗಿತ್ತು. ಆಗ ಡಾ ರಾಯ್‌ ಅವರು ನನಗೆ ಒಂದು ಕ್ರಿಕೆಟ್‌ ಬ್ಯಾಟ್‌ ಕೊಟ್ಟರು. ಆ ಕ್ರಿಕೆಟ್‌ ಬ್ಯಾಟ್‌ನ್ನು ದುಬೈನಿಂದ ತರಿಸಿಕೊಟ್ಟಿದ್ದರು. ಅದರಲ್ಲಿ ಭಾರತೀಯ ಕ್ರಿಕೆಟ್‌ ಟೀಂನ ಎಲ್ಲರ ಸಹಿ ಇದೆ. ನಾನು ಇದನ್ನು ಯಾರಿಗೂ ಕೊಡೋದಿಲ್ಲ. 70ಕೋಟಿ ಕೊಟ್ಟರೂ ಕೂಡ ಕೊಡೋದಿಲ್ಲ” ಎಂದು ಮಾರುತಿ ಅವರು ಧನರಾಜ್‌ಗೆ ಹೇಳಿದ್ದಾರೆ. 

ಅಂದಹಾಗೆ ಹನುಮಂತ ಅವರು ಧನರಾಜ್‌ ಜೊತೆಗೆ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಮ್ಯಾಚ್‌ನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂತು ನೋಡಿದ್ದರು. ಸ್ಟೇಡಿಯಂನಲ್ಲಿಯೇ ಕೂತಿದ್ದರೂ ಕೂಡ ಅಷ್ಟಾಗಿ ಕಾಣೋದಿಲ್ಲ ಎಂದು ಅವರು ಮೊಬೈಲ್‌ನಲ್ಲಿ ನೋಡಿದ್ದು ಮಾತ್ರ ಹಾಸ್ಯಾಸ್ಪದವಾಗಿತ್ತು. ಇದನ್ನು ಧನರಾಜ್‌ ಅವರು ಹೇಳಿಕೊಂಡು ನಕ್ಕಿದ್ದಾರೆ. ಅಂದಹಾಗೆ ನೆಟ್ಟಿಗನೊಬ್ಬ, “ಆರ್‌ಸಿಬಿ ಗೆಲ್ಲಿಸಿ, ಇಲ್ಲ ಅಂದ್ರೆ ನಿಮ್ಮದು ದರಿದ್ರ ಮುಖಗಳು” ಎಂದು ಕಾಮೆಂಟ್‌ ಮಾಡಿದ್ದನ್ನು ಧನರಾಜ್‌ ಅವರು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋದಲ್ಲಿ ಸ್ಮರಿಸಿದ್ದಾರೆ. ಅಂದಹಾಗೆ ಧನರಾಜ್‌ ಅವರು ಸ್ಟೇಡಿಯಂಗೆ ಹೋಗಿದ್ದ ದಿನ ಮ್ಯಾಚ್‌ ಗೆದ್ದಿದೆ. ಹಾವೇರಿಯಲ್ಲಿಯೇ ದೊಡ್ಡ ಇವೆಂಟ್‌ ನಡೆದಿತ್ತು. ಅಲ್ಲಿ ಹನುಮಂತ ಜೊತೆಗೆ ಧನರಾಜ್‌ ಕೂಡ ಭಾಗಿಯಾಗಿದ್ದರು. ಅಲ್ಲಿನ ಜನರ ಪ್ರೀತಿ ಕಂಡು ಧನರಾಜ್‌ ಫುಲ್‌ ಖುಷಿಯಾಗಿದ್ದಾರೆ. ದೋಸ್ತ ಹಾಗೂ ದೋಸ್ತನ ಮನೆಯವರ ಪ್ರೀತಿಗೆ ಧನರಾಜ್‌ ಶರಣಾಗಿದ್ದಾರೆ.

ಹನುಮಂತ ಅವರು ಕಲರ್ಸ್‌ ಕನ್ನಡ ವಾಹಿನಿಯ ʼಬಾಯ್ಸ್‌ v/s ಗರ್ಲ್ಸ್ʼ‌ ಶೋನಲ್ಲಿ ಕೆಲ ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಅವರು ಯಾವ ಶೋನಲ್ಲಿ ಕಾಣಿಸ್ತಾರೆ ಎಂದು ಕಾದು ನೋಡಬೇಕಿದೆ. 

YouTube video player