ಭಾಗ್ಯಲಕ್ಷ್ಮಿ ಕೆಲಸಕ್ಕಾಗಿ ಸ್ಟಾರ್​ ಹೋಟೆಲ್​ಗೆ ಹೋಗಿದ್ದಾಳೆ. ಅಲ್ಲಿ  ಸಂದರ್ಶನ ನಡೆಯುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಹೇಳ್ತಿರೋದೇನು? 

ಮಾತೃಭಾಷೆಯಲ್ಲಿಯೇ ಶಿಕ್ಷಣ ಎಂದು ಹೇಳುತ್ತಾ ಹಲವಾರು ದಶಕಗಳೇ ಕಳೆದಿದ್ದರೂ, ಇಂಗ್ಲಿಷ್​ ವ್ಯಾಮೋಹ ಮಾತ್ರ ಯಾರನ್ನೂ ಬಿಡುತ್ತಿಲ್ಲ. ಅದರಲ್ಲಿಯೂ ಕರ್ನಾಟಕದಲ್ಲಿನ ಸ್ಥಿತಿ ಅತ್ಯಂತ ಕೆಳಮಟ್ಟಕ್ಕೆ ಹೋಗಿದೆ. ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ತಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆ ಮಾತನಾಡುವವರಿಗೆ ಜಾಗವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಡೆದುಕೊಳ್ಳುತ್ತಾರೆ. ಅಲ್ಲಿ ತಮ್ಮ ಭಾಷೆ ಬಿಟ್ಟು ಇಂಗ್ಲಿಷ್​ ಭಾಷೆಯಲ್ಲಿಯೂ ನಾಮಫಲಕಗಳನ್ನು ಕಾಣಲು ಸಿಗುವುದು ಕಷ್ಟ. ಇದೇ ಕಾರಣಕ್ಕೆ ಅಲ್ಲಿ ಯಾವುದಾದರೂ ಕಾರಣಕ್ಕೆ ಹೋಗುವ ಸ್ಥಿತಿ ಬಂದರೆ ಅಲ್ಲಿಯ ಭಾಷೆಯನ್ನು ಮೊದಲು ಕಲಿತಿರಬೇಕು, ಇಲ್ಲದಿದ್ದರೆ ಬದುಕುವುದೇ ಕಷ್ಟ ಎನ್ನಿಸಬಹುದು. ಆದರೆ ಕರ್ನಾಟಕದ ಸ್ಥಿತಿ ಮಾತ್ರ ಹಾಗಿಲ್ಲ. ಇಲ್ಲಿ ಕನ್ನಡ ಬರುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ದೊಡ್ಡ ವರ್ಗವೇ ಇದೆ. ಏಕೆಂದರೆ ಇಲ್ಲಿ ಇಂಗ್ಲಿಷ್​ ಬರುವುದಿಲ್ಲ ಎಂದರೆ ನಾಚಿಕೆ ಪಡಬೇಕೇ ವಿನಾ ಮಾತೃಭಾಷೆ ಬರುವುದಿಲ್ಲ ಎಂದು ಹೇಳಲು ಹೆಮ್ಮೆ ಪಡಬೇಕಿದೆ.

Add Asianetnews Kannada as a Preferred SourcegooglePreferred

ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿಯೂ ಇದೇ ರೀತಿ ತೋರಿಸಲಾಗಿದ್ದು, ಇದರಿಂದ ಸೀರಿಯಲ್​ ಪ್ರೇಮಿಗಳು ಕರ್ನಾಟಕದ ನೈಜ ಚಿತ್ರಣವನ್ನು ಹೇಳುತ್ತಿದ್ದೀರಾ ಬಿಡಿ ಎನ್ನುತ್ತಿದ್ದಾರೆ. ಹೋಟೆಲ್​ನಲ್ಲಿ ಅಡುಗೆ ಮಾಡಲು ಬೇಕಿರುವುದು ಇಂಗ್ಲಿಷ್​ ಅಲ್ಲ, ಬದಲಿಗೆ ಅಡುಗೆ ಮಾಡುವ ಚಾಕಚಕ್ಯತೆ. ಆದರೆ ಸಂದರ್ಶನದಲ್ಲಿ ಇಂಗ್ಲಿಷ್​ನಲ್ಲಿಯೇ ಪ್ರಶ್ನೆ ಕೇಳಲಾಗುತ್ತಿದೆ. ಇಂಗ್ಲಿಷ್​ ಸರಿಯಾಗಿ ಬಾರದ ಭಾಗ್ಯ, ಹಾಗೂ ಹೀಗೂ ಬ್ಯಾಲೆನ್ಸ್ ಮಾಡಿ ಕನ್ನಡದಲ್ಲಿ ಮಾತನಾಡುತ್ತಿದ್ದಾಳೆ. ಇದರಲ್ಲಿ ಸ್ವಲ್ಪ ಓವರ್​ ಆಗಿ ತೋರಿಸಲಾಗಿದೆ ಎನ್ನುವುದು ನೆಟ್ಟಿಗರ ಮಾತು. ಇದಕ್ಕೆ ಕಾರಣ, ಭಾಗ್ಯಲಕ್ಷ್ಮಿ ಎಸ್​ಎಸ್​ಎಲ್​ಸಿ ಓದಿದ್ದಾಳೆ. ಆದರೆ ಬೇಸಿಕ್​ ಇಂಗ್ಲಿಷ್​ ಮಾತನಾಡಲು ಬರುತ್ತಿಲ್ಲ ಎಂದು ಟ್ರೋಲ್​ ಕೂಡ ಆಗುತ್ತಿದ್ದಾಳೆ. ಆದರೆ ಇದೀಗ ಕನ್ನಡದಲ್ಲಿ ಆಕೆ ಉತ್ತರ ಕೊಡುತ್ತಿದ್ದರೂ ಇಂಗ್ಲಿಷ್​ನಲ್ಲಿಯೇ ಪ್ರಶ್ನೆ ಕೇಳುತ್ತಿರುವುದು ಕರುನಾಡಿನ ಅವ್ಯವಸ್ಥೆಗೆ ಹಿಡಿದ ಕನ್ನಡಿ ಎನ್ನುವುದು ನೆಟ್ಟಿಗರ ಮಾತು.

ಪೂರ್ಣಿ ಅಮ್ಮನ ಗುಟ್ಟು ತಿಳಿಯೋ ಕಾಲ ಬಂದೇ ಬಿಡ್ತು! ತುಳಸಿ ಒಡಲಲ್ಲಿ ಬಚ್ಚಿಡಬೇಕಾ ಇನ್ನೊಂದು ಗುಟ್ಟು?

ಇನ್ನು, ಭಾಗ್ಯಲಕ್ಷ್ಮಿ ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಭಾಗ್ಯ ಹಲವಾರು ಅಡೆತಡೆಗಳನ್ನು ಮೀರಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಬರೆದಿದ್ದಾಳೆ. ಆದರೆ ಇದೀಗ ಪರಿಸ್ಥಿತಿ ಚಿಂತಾಜನಕವಾಗಿದೆ. ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್​ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್​ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ ಒಂದು ಹೋಟೆಲ್​ಗೆ ಹೋದಾಗ ಅವಳನ್ನು ಹೋಟೆಲ್​ ಮಾಲೀಕ ಕೆಲಸ ಇಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಸಾಲದು ಎನ್ನುವುದಕ್ಕೆ ಆಕೆಗೆ ಅಲ್ಲಿ ಒಂದಿಷ್ಟು ಅವಮರ್ಯಾದೆಯೂ ಆಗುತ್ತದೆ.

ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಓಡಿಸಲು ತಾಂಡವ್​ ಪ್ರಯತ್ನಿಸುತ್ತಿದ್ದಾನೆ. ಅವನಿಗೆ ಏನಿದ್ದರೂ ಬೇಕಿರುವುದು ಶ್ರೇಷ್ಠಾ ಮಾತ್ರ. ಆದರೆ ಭಾಗ್ಯ ಈಗ ಸುಲಭದಲ್ಲಿ ಜಗ್ಗುತ್ತಿಲ್ಲ. ಇದೇ ಕಾರಣಕ್ಕೆ ತಾಂಡವ್​ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ. ತಾಂಡವ್​ಗೆ ಪತ್ನಿ ಎದುರು ಸೋಲನ್ನು ಅನುಭವಿಸಿದ ಹಾಗಾಗುತ್ತಿದೆ. ಗಂಡಸಾಗಿ ತಾನು ಸೋತೆ ಎನ್ನುವ ಅಹಂ ಅಡ್ಡ ಬರುತ್ತಿದೆ. ಏನೂ ಅರಿಯದ ಪೆದ್ದು ಪತ್ನಿಯನ್ನು ಸುಲಭದಲ್ಲಿ ಮನೆಯಿಂದ ಹೊರಕ್ಕೆ ಹಾಕಬಹುದು ಎಂದುಕೊಂಡಿದ್ದ ತಾಂಡವ್​ಗೆ ಅದು ಸಾಧ್ಯವೇ ಆಗದ ಸ್ಥಿತಿ. ಪತ್ನಿಗೆ ಎಷ್ಟು ಟಾರ್ಚರ್​ ಕೊಡಬೇಕೋ ಅಷ್ಟನ್ನೆಲ್ಲಾ ಕೊಟ್ಟಾಯ್ತು. ಈತನ ಟಾರ್ಚರ್​ ತಾಳದೇ ಖುದ್ದು ಭಾಗ್ಯಳ ಮಾವನೇ ತನ್ನ ಮಗನಿಗೆ ಡಿವೋರ್ಸ್​ ಕೊಟ್ಟುಬಿಡಮ್ಮಾ, ನಿನ್ನ ಈ ಕಷ್ಟ ನೋಡಲು ಆಗ್ತಿಲ್ಲ ಎಂದೂ ಹೇಳಿ ಆಯ್ತು. ಆದರೆ ಈಕೆ ಭಾಗ್ಯ. ಪತ್ನಿಗಿಂತ ಹೆಚ್ಚಾಗಿ ಇಬ್ಬರು ಮಕ್ಕಳ ಅಮ್ಮ ಈಕೆ. ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ತಾಳಾ? ಸಾಧ್ಯವೇ ಇಲ್ಲ.

ಮಗು ಹುಟ್ಟುವ ಸಮಯದಲ್ಲಿ ಮದ್ವೆ ಫೋಟೋ ಡಿಲೀಟ್​ ಮಾಡಿದ್ದೇಕೆ ರಣವೀರ್‌​ ಸಿಂಗ್​? ಕೊನೆಗೂ ಸಿಕ್ತು ಕಾರಣ...