ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ದಂಪತಿ ಪುಲಿಕೇಶಿನಗರ ಪೊಲೀಸ್ ಠಾಣೆಗೆ ಹಾಜರು
ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಅನ್ಯಕೋಮಿನ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
![Actress Harshika Poonacha and Bhuvan Ponnanna present at Pulikeshinagar Police Station sat Actress Harshika Poonacha and Bhuvan Ponnanna present at Pulikeshinagar Police Station sat](https://static-ai.asianetnews.com/images/01hw50cw8nn7g8ewwr7fz26bed/harshika-punaccha-and-buvan-ponnanna_363x203xt.jpg)
ಬೆಂಗಳೂರು (ಏ.23): ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಅನ್ಯಕೋಮಿನ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿ ಮೈಮೇಲಿದ್ದ ಚಿನ್ನಾಭರಣವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಮೂವರು ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ್ದ ನಟಿ ಹರ್ಷಿಕಾ ಪೂಣಚ್ಚ ಮತ್ತು ಅವರ ಪತಿ ಭುವನ್ ಪೊನ್ನಣ್ಣ ಅವರು ಮಂಗಳವಾರ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ನಟಿ ಹರ್ಷಿಕಾ ಪೂಣಚ್ಚ ದಂಪತಿ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತು ಮಂಗಳವಾರ ಹೇಳಿಕೆ ದಾಖಲಿಸಲು ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಹೇಳಿಕೆ ದಾಖಲಿಸಿದ ಬಳಿಕ ಹರ್ಷಿಕ ಹಾಗೂ ಭುವನ್ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರ್ತಿಸಿದ್ದೀವಿ. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿ ಕೆಲ ವ್ಯಕ್ತಿಗಳನ್ನು ತೋರಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ನಮ್ಮ ಮೇಲೆ ಗಲಾಟೆ ಮಾಡಿದ ಮೂವರ ಮುಖವನ್ನು ಪತ್ತೆ ಮಾಡಿದ್ದೀವಿ ಎಂದು ತಿಳಿಸಿದರು.
ನಮ್ಮ ಮೇಲೆ ನಡೆದ ಹಲ್ಲೆ ಘಟನೆ ಬಗ್ಗೆ ಪೊಲೀಸರು ನಮ್ಮಿಬ್ಬರಿಂದಲೂ ಬಳಿ ಹೇಳಿಕೆ ಪಡೆದಿದ್ದಾರೆ. ಪೊಲೀಸರ ತನಿಖೆ ಬಗ್ಗೆ ಖುಷಿ ಇದೆ, ಇಷ್ಟು ವೇಗವಾಗಿ ತನಿಖೆ ಮಾಡ್ತಾರೆ ಅನ್ಕೊಂಡಿರಲಿಲ್ಲ. ನಮಗೆ ಆದ ರೀತಿ ಬೇರೆ ಯಾರಿಗೂ ಆಗಬಾರದು ಅನ್ನೋ ಉದ್ದೇಶಕ್ಕೆ ದೂರು ಕೊಟ್ಟಿದ್ದೀವಿ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧನ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾವು ಕೂಡ ತನಿಖೆಗೆ ಎಲ್ಲಾ ರೀತಿಯ ಸಹಕಾರ ಮಾಡ್ತೀವಿ ಎಂದು ತಿಳಿಸಿದ್ದೇವೆ ಎಂದು ಭುವನ್ ಪೊನ್ನಣ್ಣ ಮಾಹಿತಿ ನೀಡಿದರು.
ಘಟನೆಯ ವಿವರವೇನು?
ಕನ್ನಡ ಚಿತ್ರರಂಗದ ಸ್ಟಾರ್ ಕಪಲ್ ಭುವನ್ ಮತ್ತು ಹರ್ಷಿತಾ ಪೊಣಚ್ಚ ಒಂದೆರಡು ದಿನಗಳ ಹಿಂದೆ ಫ್ಯಾಮಿಲಿ ಜೊತೆ ಫ್ರೆಜರ್ ಟೌನ್ನಲ್ಲಿ ಇರುವ ಹೋಟೆಲ್ನಲ್ಲಿ ಭೋಜನ ಮುಗಿಸಿಕೊಂಡು ಹಿಂತಿರುಗಿ ಬರುವಾಗ ಹಿಂದಿ ಮತ್ತು ಉರ್ದು ಮಾತನಾಡುತ್ತಿದ್ದ ವ್ಯಕ್ತಿಗಳು ಏಕಾಏಕಿ ಹಲ್ಲೆ ಮಾಡಿದ್ದಾರೆ. ಘಟನೆಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರೂ ಯಾವ ಸಹಾಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ತಮ್ಮ ಬಳಿ ಇದ್ದ ಬೆಲೆ ಬಾಳುವ ವಸ್ತುಗಳನ್ನು ಕಸಿಯಲು ಪ್ರಯತ್ನ ಪಟ್ಟಿದ್ದಾರೆ ಎಂದು ವಿಡಿಯೋ ಮಾಡಿ ಪೋಸ್ಟ್ ಒಂದನ್ನು ಹರ್ಷಿಕಾ ಪೂಣಚ್ಚ ಹಂಚಿಕೊಮಡಿದ್ದರು. ಇದಾದ ಬೆನ್ನಲ್ಲಿಯೇ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮಾತಾಡಿದ್ದಕ್ಕೆ ಹಲ್ಲೆ: ನಟಿ ಹರ್ಷಿಕಾ, ಭುವನ್ ದೂರು
ಸಾಮಾಜಿಕ ಜಾಲತಾಣದಲ್ಲಿ ಹರ್ಷಿಕಾ ಪೂಣಚ್ಚ ಪೋಸ್ಟ್ ವೈರಲ್ ಆಗಿದ್ದು, ಎಲ್ಲರೂ ಅವರ ಬೆಂಬಲಕ್ಕೆ ನಿಂತರು. ಇದರ ಬೆನ್ನಲ್ಲಿಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಕೂಡ ತಿಳಿಸಿದ್ದರು. ಇದರ ಬೆನ್ನಲ್ಲಿಯೇ ಹರ್ಷಿಕಾ ಪೂಣಚ್ಚ ಮತ್ತು ಅವರ ಪತಿ ಭುವನ್ ಪೊನ್ನಣ್ಣ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿಕೊಂಡಿದ್ದರು. ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಇಂದು ಮಂಗಳವಾರ ಹರ್ಷಿಕಾ ದಂಪತಿಯನ್ನು ಕರೆದು ಹೇಳಿಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ಆರೋಪಿಗಳನ್ನು ಗುರುತಿಸುವಂತೆ ತಿಳಿಸಿದಾಗ ಮೂವರು ಹಲ್ಲೆ ಮಾಡಿದವರನ್ನು ದಂಪತಿ ಗುರುತಿಸಿ ಬಂದಿದ್ದಾರೆ.