ವ್ಯಾಟ್ಸಾಪ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನ ಹರಡಿದರೆ ಇನ್ಮುಂದೆ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದೀರಿ. ಸುಳ್ಳು ಸುದ್ದಿಗಳು ಹಾಗೂ ವದಂತಿಗಳ ನಿಗ್ರಹಕ್ಕೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರಲು ನಿರ್ಧರಿಸಿದೆ.

ನವದೆಹಲಿ(ಆ.30) : ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಹಾಗೂ ವದಂತಿಗಳಿಂದಾಗಿ ದೇಶದಲ್ಲಿ ಹೆಚ್ಚುತ್ತಿರುವ ಜನ ಸಾಮಾನ್ಯರ ಮೇಲಿನ ಹಿಂಸೆಗಳು, ಕೋಮು-ಸೌಹಾರ್ದಕ್ಕೆ ಧಕ್ಕೆ, ಕಾನೂನು ಸುವ್ಯವಸ್ಥೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಗಾಗಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸುಳ್ಳು ಸುದ್ದಿಗಳ ಹಾವಳಿ ತಡೆಯಲು ವಿಫಲವಾದ ಸಾಮಾಜಿಕ ಮಾಧ್ಯಮಗಳ ಭಾರತ ವಿಭಾಗದ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅವರ ನೇತೃತ್ವದ ಸಮಿತಿಯ ವರದಿ ಸಚಿವ ರಾಜನಾಥ್ ಸಿಂಗ್ ಅವರ ಕೈ ಸೇರಿದೆ.

ಇದರಲ್ಲಿ, ಸಂಸತ್ತಿನ ಅನುಮೋದನೆ ಮೂಲಕ ಸದ್ಯ ಇರುವ ಭಾರತೀಯ ದಂಡ ಸಂಹಿತೆಗೆ ಕೆಲ ಅಂಶಗಳನ್ನು ಸೇರ್ಪಡೆ ಮಾಡಿ, ಈ ಮೂಲಕ ಕಾನೂನನ್ನು ಹೆಚ್ಚು
ಕಠಿಣ ಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಈ ರಾಜೀವ್ ಗೌಬಾ ಅವರ ವರದಿ ಬಗ್ಗೆ ಸಚಿವರಾದ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ಥಾವರ್ ಚಂದ್ ಗೆಹ್ಲೋಟ್ ಚರ್ಚೆ ನಡೆಸಲಿದ್ದಾರೆ.

ಇದರ ಪ್ರಕಾರ, ‘ಜಾಗತಿಕ ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿಗಳು ಭಾರತದಲ್ಲಿದ್ದಾರೆ. ಅವರು ಆಕ್ಷೇಪಾರ್ಹ ವಿಚಾರ ಅಥವಾ ವಿಡಿಯೋಗಳನ್ನು ತಮ್ಮ ವೆಬ್‌ಸೈಟ್‌ನಿಂದ ತೆಗೆದು ಹಾಕದಿದ್ದಲ್ಲಿ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಳಕು ಸಂದೇಶ ಬೇಡ: ಪ್ರಧಾನಿ ಮೋದಿ:
ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ನಿಂದನೆಯಂತಹ ವಿಚಾರಗಳು ಹರಡುತ್ತಿರುವ ಬೆನ್ನಲ್ಲೇ,ಇದರ ಮೂಲಕ ಕೊಳಕು ಸಂದೇಶವನ್ನು ಹಬ್ಬಿಸಬೇಡಿ. ಒಳ್ಳೆಯ ವಿಚಾರಗಳ ಕುರಿತಾದ ಬಗ್ಗೆ ಚರ್ಚೆ ಮಾಡಿ ಎಂದು ಸಾರ್ವಜನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಸ್ವಕ್ಷೇತ್ರ ವಾರಣಾಸಿಯ ಬಿಜೆಪಿ ಕಾರ್ಯಕರ್ತರ ಜೊತೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು, ಭಾರತದ ಕುರಿತು ಧನಾತ್ಮಕ ವಾತಾವರಣವನ್ನು ನಿರ್ಮಿಸಬೇಕು ಹಾಗೂ ಸಮಾಜದ ಉನ್ನತೀಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದು ಅವರು ತಿಳಿ ಹೇಳಿದರು. 

ತಪ್ಪು ಮಾಹಿತಿಯನ್ನು ಇತರರಿಗೆ ರವಾನಿಸುವ ಮೂಲಕ ಅವರು ಸಮಾಜಕ್ಕೆ ಅದೆಷ್ಟು ಹಾನಿ ಮಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಕೆಲವರು ಮಹಿಳೆಯರ ಬಗ್ಗೆ ಮನಸ್ಸಿಗೆ ಬಂದಂತೆ ಬರೆಯುತ್ತಾರೆ. ಇದು ಎಲ್ಲರಿಗೂ ಸಂಬಂಧಿಸಿದ್ದು ಎಂದು ಹೇಳಿದರು.

ಸುಳ್ಳು ಸುದ್ಧಿ ತಡೆಗೆ ವಾಟ್ಸಾಪ್‌ನಿಂದ ರೇಡಿಯೊ ಅಭಿಯಾನ ಆರಂಭ:
ಸುಳ್ಳು ಸುದ್ದಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ದೇಶದ ವಿವಿಧ ರಾಜ್ಯಗಳಲ್ಲಿ ರೇಡಿಯೊ ಅಭಿಯಾನ ಆರಂಭಿಸುತ್ತಿದೆ ಎಂದು ವಾಟ್ಸಾಪ್ ಬುಧವಾರ ತಿಳಿಸಿದೆ. ತಮಗೆ ಬಂದ ವಾಟ್ಸಾಪ್ ಸಂದೇಶಗಳನ್ನು ಫಾರ್ವರ್ಡ್ ಮಾಡುವುದಕ್ಕೆ ಮೊದಲು, ಅದರಲ್ಲಿರುವ ಮಾಹಿತಿ ನಿಜವೇ ಎಂದು ಪರಿಶೀಲಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ.