Asianet Suvarna News Asianet Suvarna News

ಪಿತೃಪಕ್ಷದಲ್ಲಿ ಪಿಂಡಪ್ರದಾನ ಏಕೆ ಮಾಡಬೇಕು? ಆಚರಣೆ ಹೇಗೆ? ಲಾಭವೇನು?

ಗತಿಸಿದ ನಮ್ಮ ಜೀವನದಲ್ಲಿ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ-ಸಹಕಾರ ಮಾಡಿದ ಸರ್ವರನ್ನೂ ನೆನೆದು ಶ್ರಾದ್ಧವನ್ನು ಮಾಡುವುದೇ ಮಹಾಲಯ ಶ್ರಾದ್ಧ. ಮಹತಾಂ ಜನನಾಂ ಆಲಯಂ, ಮಹದಾದೀನಾಂ ಆಲಯಮ್‌ ಮಹಾಲಯಮ್‌. ಸರ್ವ ಪಿತೃಗಳನ್ನು ಉದ್ದೇಶಿಸಿ ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವೇ ಮಹಾಲಯ ಶ್ರಾದ್ಧ.

Why do Pindapradana in Pitrupaksha wrote by ganesh bhat kumata rav
Author
First Published Sep 19, 2022, 8:25 AM IST

ಗಣೇಶ ಭಟ್ಟ, ಕುಮಟಾ

ನಮ್ಮ ಕುಲದಲ್ಲಿ ಗತಿಸಿದ ಪೂರ್ವಜರನ್ನು ಉದ್ದೇಶಿಸಿ ಅವರ ಹಸಿವು-ತೃಷೆಯ ನಿವೃತ್ತಿಗಾಗಿ ಶೃದ್ಧಾ-ಭಕ್ತಿಯಿಂದ ಪಿಂಡದಾನ ಹಾಗೂ ಜಲದಾನ (ತರ್ಪಣ) ಮಾಡುವುದನ್ನು ಶ್ರಾದ್ಧ ಎಂದು ಕರೆಯುತ್ತೆವೆ. ನಮ್ಮ ಪೂರ್ವಜರನ್ನು ವರ್ಷದಲ್ಲಿ ಒಮ್ಮೆಯಾದರೂ ಸ್ಮರಿಸಿ ಇವುಗಳನ್ನು ನೀಡುವುದು ಕೃತಜ್ಞತೆಯ ಒಂದು ಭಾಗದ ಜೊತೆಗೆ ವಿಶೇಷ ಕರ್ತವ್ಯ ಕೂಡ ಆಗಿದೆ. ವಿಶೇಷವಾಗಿ ಇದಕ್ಕೋಸ್ಕರವೇ ಮೀಸಲಾಗಿ ಇರುವ ಪಿತೃಪಕ್ಷದ ದಿನಗಳಲ್ಲಿ ಅಥವಾ ಪಿತೃಪಕ್ಷದ ಅಮಾವಾಸ್ಯೆಯಂದು ಈ ಕಾರ್ಯವನ್ನು ಖಂಡಿತ ಮಾಡಬಹುದು.

ಆರು ಚಕ್ರಗಳಲ್ಲಿ ಒಂದು ಚಕ್ರ ಸರಿಯಾಗಿಲ್ಲದಿದ್ದರೂ ಪಿತೃ ದೋಷ ಕಾಡುತ್ತದೆ!

ಪಿತೃಪಕ್ಷ ಯಾವಾಗ?

ಆಷಾಢೀಮವಧಿಂ ಕೃತ್ವಾ ಪಂಚಮಂ ಪಕ್ಷಮಾಶ್ರಿತಾಃ

ಕಾಂಕ್ಷಂತಿ ಪಿತರಃ ಕ್ಲಿಷ್ಟಾಅನ್ನಮಪ್ಯನ್ವಹಂ ಜಲಮ್‌

(ನಿರ್ಣಯಸಿಂಧು)

ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುವರು. ಈ ಹದಿನಾರು ದಿನಗಳು ಪಿತೃಗಳು ತಮ್ಮವರಿಂದ ಪಿಂಡದಾನ-ತರ್ಪಣವನ್ನು ಬಯಸಿ ಬರುವರು. ಆಗ ಅವರನ್ನು ಉದ್ದೇಶಿಸಿ, ಶ್ರಾದ್ಧಾದಿಗಳನ್ನು ಮಾಡಿದರೆ, ಪಿತೃಗಳು ತೃಪ್ತರಾಗುವರು. ಮಾಡದಿದ್ದರೆ ನಿರಾಸೆಯಿಂದ ಹಿಂತಿರುಗುವರು.

ವರ್ಷದಲ್ಲಿ ಗತಿಸಿದ ತಂದೆ-ತಾಯಿಯರ ಶ್ರಾದ್ಧವನ್ನು ಮಾಡುತ್ತೇವೆ, ಮತ್ತೆ ಈ ಪಿತೃಪಕ್ಷದಲ್ಲಿ ಅವರಿಗೆ ಶ್ರಾದ್ಧ ಮಾಡಬೇಕೆ? ಎಂದರೆ ವರ್ಷದಲ್ಲಿ ಶ್ರಾದ್ಧ ಮಾಡುವುದು ಗತಿಸಿದ ತಂದೆ-ತಾಯಿಯರ ಮೂರು ತಲೆಮಾರಿನವರನ್ನು ಮಾತ್ರ. ಆದರೆ ಪಿತೃಪಕ್ಷದಲ್ಲಿ ಅವರನ್ನೂ ಸೇರಿಸಿ ಗತಿಸಿದ ನಮ್ಮ ಜೀವನದಲ್ಲಿ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ-ಸಹಕಾರ ಮಾಡಿದ ಸರ್ವರನ್ನೂ ನೆನೆದು ಶ್ರಾದ್ಧವನ್ನು ಮಾಡುವುದೇ ಮಹಾಲಯ ಶ್ರಾದ್ಧ. ಮಹತಾಂ ಜನನಾಂ ಆಲಯಂ, ಮಹದಾದೀನಾಂ ಆಲಯಮ್‌ ಮಹಾಲಯಮ್‌. ಸರ್ವ ಪಿತೃಗಳನ್ನು ಉದ್ದೇಶಿಸಿ ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವೇ ಮಹಾಲಯ ಶ್ರಾದ್ಧ.

ಪಿತೃಗಳೆಂದರೆ ಯಾರು?

ಪಾತಿ (ರಕ್ಷತಿ) ಅಪತ್ಯಮ್‌, ತಮ್ಮ ಸಂತತಿಯನ್ನು ರಕ್ಷಿಸುವವರು ಪಿತೃಗಳು. ಪಾ (ರಕ್ಷಣೆ) ಧಾತುವಿನಿಂದ ಪಿತೃಶಬ್ದ ಬಂದಿದೆ, ಅಂದರೆ ನಮ್ಮನ್ನು ಯಾರು ಪಾಲಿಸುವರೊ, ರಕ್ಷಿಸುವರೊ ಅವರು ಪಿತೃಗಳು. ಅಂತೆಯೇ ಪಾ (ಪಾನೆ) ಶಬ್ದದಿಂದ ಪಿತೃಶಬ್ದ ಬಂದಿದೆ. ಬದುಕಿರುವಾಗ ನಮ್ಮನ್ನು ರಕ್ಷಿಸುವ ನಮ್ಮ ಪಿತೃಗಳು, ಮರಣ ಹೊಂದಿದ ನಂತರ ನಾವು ಕೊಟ್ಟತರ್ಪಣಾದಿಗಳನ್ನು ಪಾನಮಾಡಿ ನಮ್ಮನ್ನು ರಕ್ಷಿಸುವವರೂ ಪಿತೃಗಳು. ಪಿತೃಗಳೆಂದರೆ ಮೂಲದಲ್ಲಿ ಅವರು ದೇವತೆಗಳೇ. ಬ್ರಹ್ಮನ ಅನುಗ್ರಹದಿಂದ ಪಿತೃಗಳಾದವರು.ಪುರಾಣಗಳ ಪ್ರಕಾರ ದೇವತೆಗಳಿಗಿಂತ ಪಿತೃಗಳ ಸ್ಥಾನ-ಮಾನ ಶ್ರೇಷ್ಠವಾದುದು. ದೇವಕಾರ್ಯಾದಪಿ ಪಿತೃಕಾರ್ಯಂ ವಿಶಿಷ್ಯತೇ. ದೇವತೆಗಳನ್ನು ಪೂಜಿಸುವ ಮೊದಲು ಪಿತೃಕಾರ್ಯ ಮಾಡುವುದು ಅಗತ್ಯವೆಂದು, ದೇವಕಾರ್ಯಕ್ಕಿಂತ ಪಿತೃಕಾರ್ಯವು ಶ್ರೇಷ್ಠವೆಂದು ಪರಿಗಣಿತವಾಗಿದೆ. ಹಾಗಾದರೆ ಈ ಪಿತೃಗಳು ಎಷ್ಟಿದ್ದಾರೆ? ಪಿತೃಗಳು ಅನಂತ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಸುಕಲಾ, ಅಂಗಿರಸ, ಸುಸ್ವಧಾ, ಸೋಮ, ವೈರಾಜ, ಅಗ್ನಿಷ್ವಾತ್ತ, ಬರ್ಹಿಷದರೆಂಬ ಏಳು ಪಿತೃಗಳು ಪ್ರಮುಖರಾದವರು. ವಸು-ರುದ್ರ-ಆದಿತ್ಯರು ಇವರ ಅಧಿಪತಿಗಳು. ನಂಬಿಕೆಯ ಪ್ರಕಾರ ನಾವು ಪಿತೃಗಳನ್ನು ಸ್ಮರಿಸಿದ ತಕ್ಷಣ ಅವರು ಆಗಮಿಸಿ, ಶ್ರಾದ್ಧವನ್ನು ಸ್ವೀಕರಿಸಿ, ಆತನ ವಂಶ-ಪರಂಪರೆಯನ್ನು ರಕ್ಷಿಸಿ, ವೃದ್ಧಿಸುವರು. ನಮ್ಮ ವಂಶದಲ್ಲಿ ಗತಿಸಿದ ಪಿತೃಗಳು ಒಂದು ವೇಳೆ ಮೋಕ್ಷವನ್ನು ಹೊಂದಿದ್ದರೂ, ವಸು-ರುದ್ರ-ಆದಿತ್ಯರು ಶ್ರಾದ್ಧವನ್ನು ಸ್ವೀಕರಿಸಿ ಕುಲಕ್ಕೆ ಒಳಿತನ್ನು ಹರಸುವರು.

ಪೌರಾಣಿಕ ಹಿನ್ನೆಲೆಯೇನು?

ರಾಜ ದಶರಥನು ಮರಣ ಹೊಂದಿದ ನಂತರ ಭರತನು ಯಥೋಚಿತವಾಗಿ ದಶರಥನ ಶ್ರಾದ್ಧ ತರ್ಪಣಾದಿ ಕ್ರಿಯೆಗಳನ್ನು ಮಾಡಿ, ವಿಧಿಯುಕ್ತವಾಗಿ ಹೇರಳವಾಗಿ ದಾನಧರ್ಮಗಳನ್ನು ಮಾಡಿದ. ಶ್ರೀರಾಮನು ವನವಾಸದ ಸಂದರ್ಭದಲ್ಲಿ ಚಿತ್ರಕೂಟದಲ್ಲಿರುವಾಗ ತಂದೆಯ ಮರಣದ ವಾರ್ತೆಯನ್ನು ಕೇಳಿ, ಕೂಡಲೇ ಮಂದಾಕಿನಿ ನದಿ ತಟಕ್ಕೆ ತೆರಳಿ ತಂದೆಯನ್ನು ನೆನೆದು ವೇದೋಕ್ತವಾಗಿ ಶ್ರಾದ್ಧ-ತರ್ಪಣಾದಿ ಕ್ರಿಯೆಗಳನ್ನು ಮಾಡಿದನು. ಭಗವಾನ್‌ ಶ್ರೀಕೃಷ್ಣನು ತನ್ನ ತಂಗಿ ಸುಭದ್ರಾಳ ಮೃತ ಮಗನಾದ ಅಭಿಮನ್ಯುವಿನ ಶಾದ್ಧವನ್ನು ವಿಧಿಯುಕ್ತವಾಗಿ ಮಾಡಿದನೆಂದು ಮಹಾಭಾರತ ಗ್ರಂಥ ನಮಗೆ ತಿಳಿಸಿಕೊಡುವುದು. ಮಹಾಭಾರತದ ಆಶ್ವಮೇಧಿಕ ಪರ್ವ ಹಾಗೂ ಶಾಂತಿ ಪರ್ವದ ಪ್ರಕಾರ ಧರ್ಮರಾಯ ಯುದಿಷ್ಠಿರನು ಮಹಾಭಾರತದ ಯುದ್ಧದಲ್ಲಿ ಮರಣಹೊಂದಿದ ಎಲ್ಲಾ ಸೈನಿಕರ ಸಹಿತ ಭೀಷ್ಮ, ದ್ರೋಣ, ದುರ್ಯೋಧನ, ಕರ್ಣ ಮುಂತಾದವರಿಗೆ ಅಂತ್ಯೇಷ್ಠಿ ಕ್ರಿಯೆ ನಡೆಸಿ, ಪ್ರತಿಯೊಬ್ಬರಿಗೂ ತರ್ಪಣಾದಿಗಳನ್ನು ನೀಡಿ, ಪ್ರತಿಯೊಬ್ಬರ ಹೆಸರಿನಲ್ಲೂ ಸರೋವರ, ಭವನಗಳನ್ನು ನಿರ್ಮಿಸಿದ.

ಹರಿವಂಶ ಪುರಾಣದ ಪ್ರಕಾರ ಒಮ್ಮೆ ಭೀಷ್ಮನು ಮರಣ ಹೊಂದಿದ ತನ್ನ ತಂದೆಯ ಶ್ರಾದ್ಧ ಮಾಡುತ್ತಿದ್ದ. ತಂದೆಯ ಹೆಸರು ಹೇಳಿ ಪಿಂಡ ಇಡಲು ಮುಂದಾದಾಗ ಪಿಂಡ ಸ್ವೀಕರಿಸಲು ಸ್ವತಃ ತಂದೆ ಶಂತನುವಿನ ಕೈ ಭೂಮಿಯಿಂದ ಮೇಲಕ್ಕೆ ಬಂತು. ತಂದೆ ಶಂತನು ಹೇಳಿದ- ನನ್ನ ಕೈಯಲ್ಲೇ ಪಿಂಡ ನೀಡು. ಭೀಷ್ಮನು ತಂದೆಯ ಕೈ ಗುರುತು ಹಿಡಿದ. ಆದರೆ ತಂದೆಯ ಕೈಯಲ್ಲಿ ಪಿಂಡ ನೀಡಲಿಲ್ಲ. ಶ್ರಾದ್ಧದಲ್ಲಿ ಬರ್ಹಿಸ್ಸಿ (ದರ್ಭೆಕಟ್ಟು)ನಲ್ಲಿಯೇ ಪಿಂಡ ನೀಡಬೇಕು ಎಂಬುದು ಶಾಸ್ತ್ರ . ತಂದೆಯನ್ನೇ ಉದ್ದೇಶಿಸಿ ಶ್ರಾದ್ಧದಲ್ಲಿ ಸ್ವತಃ ತಂದೆಯೇ ಪ್ರತ್ಯಕ್ಷವಾಗಿ ಬಂದು ಸ್ವೀಕರಿಸಲು ಇಚ್ಛಿಸಿದರೂ ನೀಡತಕ್ಕದ್ದಲ್ಲ, ಈ ರೀತಿ ಮಾಡಿದರೆ ಮುಂದೆ ಇದೇ ಪರಂಪರೆಯಾಗಬಹುದು, ತಂದೆಯೇ ಸ್ವತಃ ಬಂದು ಸ್ವೀಕರಿಸಿದರೆ ಮಾತ್ರ ಪಿಂಡ ನೀಡುವೆ ಎಂದು ಭಾವಿಸಿ, ಬರದೇ ಇದ್ದಾಗ ಮುಂದೆ ಶ್ರಾದ್ಧಕರ್ಮವೇ ಸಮಾಪ್ತಿಯಾಗಬಹುದು. ಹಾಗಾಗಿ ಬರ್ಹಿಸ್ಸಿ (ದರ್ಭೆಕಟ್ಟು)ನಲ್ಲಿಯೇ ನೀಡುವುದು ಉಚಿತ ಎಂದು ಭೀಷ್ಮ ಹಾಗೆ ಮಾಡಿದನು. ಆತನ ಶಾಸ್ತ್ರನಿಷ್ಠೆ ನೋಡಿ, ಪಿತೃದೇವತೆ ಆತನಿಗೆ ಇಚ್ಛಾಮರಣಿಯಾಗೆಂದು ವರ ನೀಡಿದರು.

ಆಚರಣೆ ಹೇಗೆ? ಲಾಭವೇನು?

ಮಹಾಭಾರತದ ಅನುಶಾಸನ ಪರ್ವದ ಪ್ರಕಾರ ಪಿತೃಪಕ್ಷದ ದಿನಗಳಲ್ಲಿ ಪಿತೃಗಳು ಆತ್ಮೀಯ ಬಂಧುಗಳು ಮನೆಗೆ ಆಗಮಿಸುವಂತೆ ತಮ್ಮ ಸಮೀಪದವರಲ್ಲಿಗೆ ಬರುವರು. ತಮ್ಮ ಕುಟುಂಬದಲ್ಲಿ ಹಿಂದೆ ಶಸ್ತ್ರದಿಂದ, ವಿಷದಿಂದ, ಅಗ್ನಿಗೆ ತುತ್ತಾಗಿ, ಸನ್ಯಾಸಿಯಾಗಿ ಅಥವಾ ಅಕಾಲಿಕವಾಗಿ ಮರಣ ಹೊಂದಿದ್ದರೆ ಹೀಗೆ ಕುಲದಲ್ಲಿ ವಿವಿಧ ರೀತಿಯಲ್ಲಿ ಗತಿಸಿದ ಸರ್ವರನ್ನೂ ನೆನೆದು ಶ್ರಾದ್ಧವನ್ನು ಮಾಡುವುದು ಶ್ರೇಯಸ್ಕರ. ಈ ಪಿತೃಪಕ್ಷದಂದು ಮೃತಪಟ್ಟತಂದೆ-ತಾಯಿಯರ ಶ್ರಾದ್ಧವನ್ನು ಮಕ್ಕಳು, ಹೆಣ್ಣುಮಕ್ಕಳು ಹಾಗೂ ಮಕ್ಕಳಿಲ್ಲದ ವಿಧವೆಯು ತನ್ನ ಪತಿಯ ಶ್ರಾದ್ಧವನ್ನು ಮಾಡಲು ನಿರ್ಣಯಸಿಂಧು ಮುಂತಾದ ಗ್ರಂಥಗಳು ಸೂಚಿಸಿವೆ. ಸಂಪನ್ನತೆ ಇರುವವರು ಮನೆಯಲ್ಲಿ ಅಥವಾ ತೀರ್ಥಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ಶ್ರಾದ್ಧವನ್ನು ಮಾಡುವುದು. ಈ ದಿನಗಳಲ್ಲಿ ಏನೂ ಇಲ್ಲದ, ಶ್ರಾದ್ಧ ಮಾಡಲು ಅಶಕ್ಯನಾದ ಬಡವನೂ ಸಹ, ನದಿ-ಜಲಾಶಯ-ಸಮುದ್ರ-ತೀರ್ಥಕ್ಷೇತ್ರಗಳಿಗೆ ತೆರಳಿ ಪಿತೃಗಳನ್ನು ಉದ್ದೇಶಿಸಿ ಒಂದು ಹನಿ ನೀರು ನೀಡಿದರೂ ಪಿತೃಗಳು ಆಶೀರ್ವದಿಸುವರು. ಪಿತೃಪಕ್ಷದ ಈ ದಿನಗಳಲ್ಲಿ ಪ್ರಯಾಣದಲ್ಲಿ ಇರುವವರು, ಸಾಧನಶೀಲರಾದವರು, ಅನಿವಾರ್ಯ ಕಾರಣಗಳಿಂದ ಶ್ರಾದ್ಧ ಮಾಡಲು ಅಶಕ್ಯರಾದವರು ಶೃದ್ಧೆಯಿಂದ ಪಿತೃಗಳನ್ನು ನೆನೆದು, ತನ್ನೆರಡು ಕೈಗಳನ್ನು ಮೇಲಕ್ಕೆತ್ತಿ, ತನ್ನ ಅಸಹಾಯಕ ಸ್ಥಿತಿಯನ್ನು ಹೇಳಿಕೊಂಡು, ಭಕ್ತಿ-ಶೃದ್ಧೆಯನ್ನು ಸಮರ್ಪಿಸಿಕೊಂಡರೂ ಅದರಿಂದಲೇ ಪಿತೃಗಳು ಪ್ರಸನ್ನರಾಗಿ ತೃಪ್ತರಾಗುವರು. ಒಟ್ಟಿನಲ್ಲಿ ಈ ದಿನಗಳಲ್ಲಿ ಪಿತೃಗಳನ್ನು ಉದ್ದೇಶಿಸಿ, ಯಾರು ಶೃದ್ಧೆಯಿಂದ ಪಿಂಡ-ತಿಲೋದಕಗಳ ಮೂಲಕ ಆರಾಧಿಸುತ್ತಾರೋ ಅದರಿಂದ ಪಿತೃಗಳು ಒಂದು ವರ್ಷದವರೆಗೆ ತೃಪ್ತಿ ಹೊಂದಿ ಆರೋಗ್ಯ, ಆಯುಷ್ಯ, ಸಂತಾನ, ಸಂಪತ್ತು, ವಿದ್ಯೆ, ಸುಖ-ಭೋಗಗಳನ್ನು ಕುಟುಂಬದವರಿಗೆ ಹರಸುವರು. ಅಸಂತುಷ್ಟರಾದ ಪಿತೃಗಳು ನಮ್ಮ ಭವಿಷ್ಯದ ಭಾಗ್ಯವನ್ನು, ವಂಶಾಭಿವೃದ್ಧಿಯನ್ನು ತಡೆಗಟ್ಟುವರೆಂಬ ನಂಬಿಕೆ ಭಾರತೀಯ ಪರಂಪರೆಯಲ್ಲಿದೆ.

Mahalaya Amavasya: ಅಜ್ಜ, ಮುತ್ತಜ್ಜ, ಬಂಧುಬಳಗ, ಸ್ನೇಹಿತ, ನಾಯಿ.. ಅಗಲಿದವರಿಗೆಲ್ಲ ಮಾಡಿ ಶ್ರಾದ್ಧ!

ಪಿತೃಪಕ್ಷದ ದಿನಗಳಲ್ಲಿ ಅಥವಾ ಮಹಾಲಯ ಪರ್ವದಿನದಂದು ಶ್ರದ್ಧೆಯಿಂದ ಗತಿಸಿದ ಸರ್ವಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಿ, ನಮ್ಮ ಪೂರ್ವಜರು ನಮಗೆ ಮಾಡಿದ ತ್ಯಾಗಗಳನ್ನು ನೆನೆದು ಅವರು ತೋರಿದ ದಾರಿಯಲ್ಲಿ ವರ್ಷವಿಡೀ ಸಾಗುವುದು ನಮ್ಮ ಪರಂಪರಾಗತ ನಂಬಿಕೆಯಾಗಿದೆ.

Follow Us:
Download App:
  • android
  • ios