Asianet Suvarna News Asianet Suvarna News

Covid-19 Crisis: ವೀಕೆಂಡ್‌ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ: ಸಚಿವ ಸೋಮಶೇಖರ್

*  ವಾರಾಂತ್ಯ ಕರ್ಫ್ಯೂ ಮುಂದುವರಿಸುವ ಸಂಬಂಧ ನಾಳೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ
*  ತಜ್ಞರು ನೀಡಿದ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಂಡಿದೆ
*  ಬಿಬಿಎಂಪಿ ಚುನಾವಣೆ ಬಗ್ಗೆ ಪಕ್ಷ ಉತ್ಸುಕವಾಗಿದೆ

Weekend curfew is not the decision of a CM Says Minister ST Somashekhar grg
Author
Bengaluru, First Published Jan 20, 2022, 1:01 PM IST

ಮೈಸೂರು(ಜ.20): ವಾರಾಂತ್ಯ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ. ತಜ್ಞರು ನೀಡಿದ ಮುನ್ನೆಚ್ಚರಿಕೆ, ಸಂಪುಟದ ಸಚಿವರ ತೀರ್ಮಾನದ ಬಳಿಕ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆಯೇ ವಿನಃ ಮುಖ್ಯಮಂತ್ರಿಗಳೊಬ್ಬರೇ ಕೈಗೊಂಡ ತೀರ್ಮಾನವಲ್ಲ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್(ST Somashekhar) ಹೇಳಿದರು.

ಇಂದು(ಗುರುವಾರ) ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್, ಜನರ ಆರೋಗ್ಯದ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾರಾಂತ್ಯ ಕರ್ಫ್ಯೂ ಮುಂದುವರಿಸುವ ಸಂಬಂಧ ಮುಖ್ಯಮಂತ್ರಿಗಳು ನಾಳೆ(ಶುಕ್ರವಾರ) ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಅಹವಾಲನ್ನು ಕೂಡ ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

CM Bommai Meeting ಕೊರೋನಾ ಹೆಚ್ಚಳ, ಜಿಲ್ಲಾಧಿಕಾರಿಗಳ ಜತೆ ಸಿಎಂ ಸಭೆಯ ಮುಖ್ಯಾಂಶಗಳು

ಪ್ರತಾಪ್ ಸಿಂಹ, ಸಿ.ಟಿ.ರವಿ ಅವರು ಸಾರ್ವಜನಿಕರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಜ್ಞರು ನೀಡಿದ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಜೊತೆಗೆ ಆಯಾ ಜಿಲ್ಲೆಯ ಪರಿಸ್ಥಿತಿ ನೋಡಿ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ಕೋವಿಡ್(Covid-19) ವಿಚಾರವಾಗಿ ಕೆಲವರು ಮಾತ್ರ ಹೇಳಿಕೆ ನೀಡಬೇಕು ಎಂಬ ಸಚಿವ ಸುಧಾಕರ್(Dr K Sudhakar) ಹೇಳಿಕೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಸಂಪೂರ್ಣ ಜ್ಞಾನ ಹೊಂದಿದವರು ಮಾತನಾಡಿದರೆ ಸೂಕ್ತ ಎಂಬ ದೃಷ್ಟಿಯಿಂದ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದರು.

ಸಂಪುಟ ವಿಸ್ತರಣೆ(Cabinet Expansion) ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳನ್ನು ಮುಖ್ಯಮಂತ್ರಿಗಳು ತಿಂಗಳು, ಎರಡು ತಿಂಗಳಿಗೊಮ್ಮೆ ಭೇಟಿ ಮಾಡಿ ಚರ್ಚಿಸುವುದು ರೂಢಿ. ಇದರಲ್ಲಿ ವಿಶೇಷವೇನೂ ಇಲ್ಲ. ಬಿಬಿಎಂಪಿ ಚುನಾವಣೆ ಬಗ್ಗೆ ಪಕ್ಷ ಉತ್ಸುಕವಾಗಿದೆ. ಸದ್ಯದಲ್ಲೇ ಸುಪ್ರೀಂ ಕೋರ್ಟ್(Supreme Court) ಆದೇಶ ಬರಲಿದೆ. ಸರ್ಕಾರ ಕೂಡ ರೆಡಿಯಿದೆ ಎಂದು ಹೇಳಿದರು.

ಬಿಜೆಪಿ ನಾಯಕರಿಂದಲೇ ಆಕ್ಷೇಪ, ಕುತೂಹಲ ಮೂಡಿಸಿದ ಬೊಮ್ಮಾಯಿ ತೀರ್ಮಾನ?

ಕರ್ನಾಟಕದಲ್ಲಿ(Karnataka) ಕೊರೋನಾ 3ನೇ (Coronavirus 3rd Wave) ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿಅದನ್ನ ನಿಯಂತ್ರಿಸಲು ಸರ್ಕಾರ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಆದ್ರೆ,  ನೈಟ್ ಹಾಗೂ ವೀಕೆಂಡ್ ಕರ್ಫ್ಯೂಗೆ (Night And Weekend Curfew) ಬಿಜೆಪಿ ನಾಯಕರೇ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಅದು ಬೇಡವೇ ಬೇಡ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Coronavirus ಕೊರೋನಾ ಬಗ್ಗೆ ಮಾತಾಡೋ ವೈದ್ಯರಿಗೆ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ..!

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಹಾಗೂ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ(Pratap Simha) ವೀಕೆಂಡ್ ಕರ್ಫ್ಯೂ ವಿರೋಧಿಸಿದ್ದಾರೆ. ಇನ್ನು ಈ ಬಗ್ಗೆ  ಸಿ.ಟಿ.ರವಿ (C.T.Ravi) ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ತಡೆಗೆ ಇಂಥ ನಿರ್ಬಂಧಗಳು ಪರಿಹಾರವಲ್ಲ. ಸೋಂಕು ಹರಡುವುದನ್ನು ತಡೆಯಲು ಲಾಕ್​ಡೌನ್ ಅಥವಾ ವೀಕೆಂಡ್ ಕರ್ಫ್ಯೂ ಪರಿಹಾರವಲ್ಲ.ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ನಿರ್ಧಾರ ಬದಲಿಸಬೇಕು ಎಂದು ಸ್ಪಷ್ಟಪಡಿಸಿದರು. 

ನಾನು ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿಲ್ಲ. ನಿರ್ಬಂಧಗಳು ಹೆಚ್ಚಾದರೆ, ಈಗಿನ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು, ಚಿಂತನೆ ನಡೆಸಬೇಕು ಎಂದರು. 

ಲಾಕ್‍ಡೌನ್ ಮತ್ತು ನೈಟ್​ಕರ್ಫ್ಯೂ ವಿಧಿಸುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಜನರ ಪರಿಸ್ಥಿತಿಯ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಪರಿಸ್ಥಿತಿ ಪರಾಮರ್ಶಿಸಿ ತಜ್ಞರ ಸಲಹೆ ಪಡೆದು ಕ್ರಮಕೈಗೊಳ್ಳಬೇಕು. ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯ ತಿಳಿಸಿದರು.
 

Follow Us:
Download App:
  • android
  • ios