ಹಾವೇರಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕುಲಶಾಸ್ತ್ರ ಅಧ್ಯಯನವಿಲ್ಲದೆ ಸೇರ್ಪಡೆ ಸಾಧ್ಯವೇ? ಒಬಿಸಿಯಿಂದ ಎಸ್‌ಟಿಗೆ ಬರುವಾಗ ಅವರ ಮೀಸಲಾತಿ ಪಾಲನ್ನೂ ತರಬೇಕು ಎಂಬ ಷರತ್ತನ್ನು ಮುಂದಿಟ್ಟಿದ್ದಾರೆ.

ಹಾವೇರಿ(ಡಿ.14): ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ಸ್ಥಾನಮಾನಕ್ಕೆ ಸೇರ್ಪಡೆಗೊಳಿಸುವ ವಿಚಾರವಾಗಿ ಹಾವೇರಿ ನಗರದಲ್ಲಿ ಮಾಜಿ ಸಂಸದರಾದ ವಿಎಸ್ ಉಗ್ರಪ್ಪ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಮೀಸಲಾತಿ ಯಾರಪ್ಪನ ಸ್ವತ್ತಲ್ಲ:

ಸರಕಾರಕ್ಕೆ ಮೀಸಲಾತಿ ನೀಡುವುದು ಕರ್ತವ್ಯವಾಗಿದ್ದು, ದೇಶದಲ್ಲಿ ಮೀಸಲಾತಿ ಅನ್ನೋದು ಯಾರಪ್ಪನ ಸ್ವತ್ತಲ್ಲ. ಜನಪ್ರತಿನಿಧಿಗಳೂ ಸಂವಿಧಾನದಂತೆ ನಡೆದುಕೊಳ್ಳುತ್ತೇವೆ ಅಂತ ಹೇಳುತ್ತಾರೆ. ಆದರೆ ಮೀಸಲಾತಿ ವಿಚಾರದಲ್ಲಿ ಮೊದಲು ಕುಲಶಾಸ್ತ್ರ ಅಧ್ಯಯನ (Ethnograpy Study) ಆಗಬೇಕು ಅಲ್ವಾ? ಕುಲಶಾಸ್ತ್ರ ಅಧ್ಯಯನವಿಲ್ಲದೆ ನೇರವಾಗಿ ಸೇರಿಸೋದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು.

ST ಮೀಸಲಾತಿ ಪರ್ಸೆಂಟ್‌ ಕುರಿತು ಉಗ್ರಪ್ಪ ಆಕ್ಷೇಪ

ST ಮೀಸಲಾತಿ ಪರ್ಸೆಂಟ್‌ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಉಗ್ರಪ್ಪ ಅವರು, ಮೀಸಲಾತಿಯ ಪರ್ಸೆಂಟೆಜ್ 7 ಇದ್ದದ್ದನ್ನು 3 ಕ್ಕೆ ತಂದು ನಿಲ್ಲಿಸಿದ್ದಾರೆ. ಇನ್ನೊಂದು 7 ಪರ್ಸೆಂಟ್‌ ಜನರನ್ನ ಇಲ್ಲಿಗೆ ತಂದು ಹಾಕಿದ್ದಲ್ಲಿ ಸುಮಾರು 12 ರಿಂದ 14% ಜನರು ಕಿತ್ತಾಡಬೇಕಾ? ಎಂದು ಪ್ರಶ್ನಿಸಿದ್ದಾರೆ.

ಕುರುಬರನ್ನು ಸೇರಿಸಿ, ಗೊಲ್ಲರನ್ನು ಸೇರಿಸಿ ಮತ್ತೊಬ್ಬರನ್ನು ಸೇರಿಸಲಿ ಆದರೆ ಒಂದು ಷರತ್ತು. ಅವರು ಓಬಿಸಿಯಲ್ಲಿ (OBC) ಬಿಟ್ಟು ಬರುವ ಪರ್ಸೆಂಟೆಜ್ ST ಗೂ ತರಲಿ. ಅವರ ತಟ್ಟೆ ಮತ್ತು ಅವರ ಅನ್ನವನ್ನು ತೆಗೆದುಕೊಂಡು ಬಂದರೆ, ನಮ್ಮ ತಟ್ಟೆ ಮತ್ತು ನಮ್ಮ ಅನ್ನವೂ ಇರತಕ್ಕಂತದ್ದು. ಒಟ್ಟಿಗೆ ಸೇರಿಸಿ ಸಾಮೂಹಿಕವಾಗಿ ಊಟ ಮಾಡಲು ನಾವು ಸಿದ್ಧ. ಇದಕ್ಕೆ ನಾವು ಯಾರೂ ಸಹ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನಿನ ಚೌಕಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (SC/ST) ಮೀಸಲಾತಿ ನೀಡಿದರೆ ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ವಿಎಸ್ ಉಗ್ರಪ್ಪ ಅವರು ಸ್ಪಷ್ಟಪಡಿಸಿದರು.