ಡಿ.12ಕ್ಕೆ ಒಕ್ಕಲಿಗರ ಸಂಘದ ಚುನಾವಣೆ: 15ಕ್ಕೆ ಫಲಿತಾಂಶ
- ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಡಿ.12ರಂದು ಚುನಾವಣೆ
- ನ್ಯಾಯಾಲಯದ ಆದೇಶ ಮತ್ತು ಕೊರೋನಾ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೊನೆಗೂ ಚುನಾವಣಾ ದಿನಾಂಕವನ್ನು ಪ್ರಕಟ
ಬೆಂಗಳೂರು (ನ.07): ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಒಕ್ಕಲಿಗರ ಸಂಘದ (Karnataka Vokkaligara sangha) ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಡಿ.12ರಂದು ಚುನಾವಣೆ (Election) ಘೋಷಣೆಯಾಗಿದೆ. ನ್ಯಾಯಾಲಯದ (Court) ಆದೇಶ ಮತ್ತು ಕೊರೋನಾ (corona) ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೊನೆಗೂ ಚುನಾವಣಾ ದಿನಾಂಕವನ್ನು (Election Date) ಪ್ರಕಟಿಸಲಾಗಿದೆ.
ನ.15ರಿಂದ 23 ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಆಯಾ ಜಿಲ್ಲೆಗಳ (Districts) ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. 24ಕ್ಕೆ ನಾಮಪತ್ರ (Nomonation) ಪರಿಶೀಲನೆ ನಡೆಯಲಿದ್ದು, ನ.25ರ ಮಧ್ಯಾಹ್ನ 3 ಗಂಟೆಯವರೆಗೂ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ನಂತರ ಕಣದಲ್ಲುಳಿಯುವ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ನ.27ರಂದು ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನಿಗದಿ ಮಾಡಲಾಗುತ್ತದೆ. ಡಿ.12ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೂ ಚುನಾವಣೆ (Election) ನಡೆಯಲಿದೆ. ಡಿ.15ರಂದು ಮತ ಎಣಿಕೆಯಾಗಲಿದ್ದು ಬಹುತೇಕ ಅಂದೇ ಫಲಿತಾಂಶ ಹೊರಬೀಳಲಿದೆ.
11 ಜಿಲ್ಲೆ, 35 ಸ್ಥಾನ: ಒಕ್ಕಲಿಗರ ಸಂಘ ಕ್ಕೆ 11 ಜಿಲ್ಲೆಯಿಂದ 35 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸದಸ್ಯರ ಅವಧಿ 5 ವರ್ಷವಾಗಿದೆ. ಪಿ.ಎನ್.ರವೀಂದ್ರ (PN Ravindra) ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಮೊದಲು 2021 ಏಪ್ರಿಲ್ 9ರಂದು ಅಧಿಸೂಚನೆ ಹೊರಡಿಸಿ ಮೇ 16ರಂದು ಚುನಾವಣೆ (Election) ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಆಗ ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿ ಕಂಡುಬಂದಿದ್ದರಿಂದ ಚುನಾವಣೆ ನಡೆಸುವುದು ಸರಿಯಲ್ಲ ಎಂದು ಕೆಲವರು ಹೈಕೋರ್ಟ್ಗೆ (High Court) ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್, ಚುನಾವಣೆ ಅಧಿಸೂಚನೆಯನ್ನು ಏ.21ರಂದು ರದ್ದುಗೊಳಿಸಿತ್ತು.
ಕೊರೋನಾ (corona) ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಡಿ.31ರೊಳಗೆ ಚುನಾವಣೆ ನಡೆಸಬೇಕೆಂದು ಬಳಿಕ ನ್ಯಾಯಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ಇದೀಗ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣಾ ಕಣದಲ್ಲಿರುವ ಕೆಂಚಪ್ಪಗೌಡ ಅವರ ಸಿಂಡಿಕೇಟ್ ಮಾತ್ರ ಸದ್ಯಕ್ಕೆ ರಚನೆಯಾಗಿದ್ದು, ಇನ್ನುಳಿದಂತೆ ನಾಲ್ಕೈದು ಸಿಂಡಿಕೇಟ್ ರಚನೆಯಾಗುವ ಸಾಧ್ಯತೆಯಿದೆ.
ಚುನಾವಣೆ ದಿನಾಂಕ ನಿಗದಿಯಾಗದಿದ್ದರೂ ಇಷ್ಟು ದಿವಸ ತೆರೆಮರೆಯಲ್ಲಿ ಪ್ರಚಾರ ಕಾರ್ಯ ಬಿರುಸಾಗಿತ್ತು. ಮತದಾರರ ಮನೆ-ಮನೆ ಭೇಟಿ, ಫೇಸ್ಬುಕ್ (Facebook), ಟ್ವಿಟರ್ (Twitter), ವಾಟ್ಸ್ ಅಪ್ (whatsapp) ಸೇರಿಂದತೆ ಸಾಮಾಜಿಕ ಜಾಲತಾಣಗಳಲ್ಲಿ ಆಕಾಂಕ್ಷಿಗಳು ಪ್ರಚಾರವನ್ನೂ ಪ್ರಾರಂಭಿಸಿಬಿಟ್ಟಿದ್ದರು. ಇದೀಗ ಚುನಾವಣೆ ಅಧಿಕೃತವಾಗಿ ಘೋಷಣೆ ಆಗಿರುವುದರಿಂದ ಪ್ರಚಾರ ಇನ್ನಷ್ಟುವೇಗ ಪಡೆದುಕೊಳ್ಳಲಿದೆ.
ರಾಜ್ಯ ಒಕ್ಕಲಿಗರ ಚುನಾವಣೆಗೆ ಜಿ.ಮಂಜು ಸ್ಪರ್ಧೆ
ಮೈಸೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಿಗದಿಯಾದ ಹಿನ್ನೆಲೆಯಲ್ಲಿ ರಾಜ್ಯ ಸಂಘ ಪ್ರವೇಶಕ್ಕೆ ಸಜ್ಜಾಗುತ್ತಿರುವ ಮೈಸೂರು (Mysuru) ಮತ್ತು ಚಾಮರಾಜನಗರ (Chamarajanagar) ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ. ಮಂಜು (G Manju) ತಮ್ಮ ಸ್ಥಾನ ರಾಜೀನಾಮೆ (Resignation) ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ.
ರಾಜ್ಯದ ಪ್ರಮುಖ ಸಮುದಾಯಗಳ ಪೈಕಿ ಒಂದಾಗಿರುವ ಒಕ್ಕಲಿಗ ಸಮಾಜದ ಪ್ರಮುಖ ಪ್ರಾತಿನಿಧಿಕ ಸಂಸ್ಥೆಯಾದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ (Election) ದಿನಾಂಕ ನಿಗದಿ ಮಾಡಿ ಘೋಷಿಸಲಾಗಿದೆ. ಹೀಗಾಗಿ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ನೈತಿಕತೆ ಉಳಿಸಿಕೊಳ್ಳುವ ಸಲುವಾಗಿ ಹಾಲಿ ಅಧ್ಯಕ್ಷನಾಗಿರುವ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗ ಸಂಘದ ಸ್ಥಾನಕ್ಕೆ ನ. 16ರಂದು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲ ತಿಳಿಸಿದರು.
ಎಲ್ಲಾ ಹಂತಗಳಲ್ಲಿ ನನಗೆ ಉತ್ತಮ ಅವಕಾಶ ನೀಡಿರುವ ಸಮುದಾಯಸ್ಥರು ಆಶಾಭಾವನೆ ಮತ್ತು ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಸಲುವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆಯೇ ಹೊರತು. ಇದರ ಹಿಂದೆ ಯಾವುದೇ ರೀತಿಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.