ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಲಿಂಗಾಯತ ಸಮುದಾಯದ ಏಕತೆ ಮತ್ತು ಹಕ್ಕುಗಳಿಗಾಗಿ 12 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜನಗಣತಿಯಲ್ಲಿ 'ವೀರಶೈವ ಲಿಂಗಾಯತ' ಎಂದು ನೋಂದಾಯಿಸಿಕೊಳ್ಳುವಂತೆ ಸೂಚಿಸಿಲಾಗಿದೆ.

ದಾವಣಗೆರೆ (ಜುಲೈ.22) : ವೀರಶೈವ ಪೀಠಾಚಾರ್ಯ ಶಿವಾಚಾರ್ಯರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆದ ಶೃಂಗ ಸಮ್ಮೇಳನದಲ್ಲಿ ಮಠಾಧೀಶರು ಒಟ್ಟು 12 ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ.

ಮುಂಬರುವ ಜನಗಣತಿಯಲ್ಲಿ ಎಲ್ಲಾ ಒಳಪಂಗಡಗಳು 'ವೀರಶೈವ ಲಿಂಗಾಯತ' ಎಂದು ನೋಂದಾಯಿಸಿಕೊಳ್ಳಬೇಕು ಎಂದು ಸಮ್ಮೇಳನದಲ್ಲಿ ತೀರ್ಮಾನಿಸಲಾಗಿದೆ. ಸನಾತನ ಹಿಂದೂ ಲಿಂಗಾಯತ ಧರ್ಮದ ಅನುಯಾಯಿಗಳು ಉಪಜಾತಿಗಳನ್ನು ಬಿಟ್ಟು 'ವೀರಶೈವ ಲಿಂಗಾಯತ' ಒಗ್ಗಟ್ಟನ್ನು ಕಾಪಾಡಬೇಕು. ಜನಗಣತಿ ಫಾರಂನಲ್ಲಿ ಧರ್ಮದ ಕಾಲಂ ಇರಬೇಕು ಎಂದು ಒತ್ತಾಯಿಸಲಾಗಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಪ್ರಧಾನ ಮಂತ್ರಿಯವರ ಗಮನ ಸೆಳೆಯಲು ವೀರಶೈವ ನಿಯೋಗವನ್ನು ದೆಹಲಿಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇದರ ಜೊತೆಗೆ, ಕೇಂದ್ರ ಸರ್ಕಾರವು ವೀರಶೈವ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಬೇಕು ಎಂದು ಎಲ್ಲಾ ಒಳಪಂಗಡ ಮುಖಂಡರು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ನಿರ್ಣಯಿಸಲಾಗಿದೆ. ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಿರುವವರು ಅದರ ಅಗತ್ಯವನ್ನು ಮುಂದುವರೆಸಬೇಕು ಎಂದು ಸಮ್ಮೇಳನದಲ್ಲಿ ತಿಳಿಸಲಾಯಿತು. ಅಲ್ಲದೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗ್ರಾಮೀಣ ಭಾಗದ ಸಂಘಟನೆಗಳಲ್ಲಿ ಶ್ರೀ ರೇಣುಕಾಚಾರ್ಯರ ಭಾವಚಿತ್ರವನ್ನು ಕಡ್ಡಾಯವಾಗಿ ಇರಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಈ ಶೃಂಗ ಸಮ್ಮೇಳನವು ವೀರಶೈವ ಲಿಂಗಾಯತ ಸಮುದಾಯದ ಒಗ್ಗಟ್ಟು ಮತ್ತು ಧಾರ್ಮಿಕ, ಸಾಮಾಜಿಕ ಹಕ್ಕುಗಳಿಗಾಗಿ ಒತ್ತಾಯಿಸುವ ಪ್ರಮುಖ ಹೆಜ್ಜೆಯಾಗಿದೆ.

ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಘೋಷಿಸಿದ 12 ನಿರ್ಣಯಗಳ ಸಂಪೂರ್ಣ ವಿವರ ಹೀಗಿದೆ.

1. ಬರಲಿರುವ ಜಾತಿಗಣತಿಯಲ್ಲಿ ಎಲ್ಲಾ ಒಳಪಂಗಡಗಳು ವೀರಶೈವ ಲಿಂಗಾಯತ ಎಂದೇ ಬರೆಸಬೇಕು. ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟು ಪ್ರತಿಪಾದಿಸಬೇಕು.

2. ಸನಾತನ ಹಿಂದೂ ವೀರಶೈವ ಧರ್ಮದ ಲಿಂಗಾಯತ ಅನುಯಾಯಿಗಳು ಉದ್ಯೋಗದಿಂದಲೇ ಉಪಜಾತಿ ನಿರ್ಮಾಣ ಆಗಿದ್ದು, ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯತ ಧರ್ಮವು

ಹಂಚಿ ಹೋಗಬಾರದು. ಉಪಜಾತಿ ಯಾವುದೇ ಇದ್ದರೂ ವೀರಶೈವ ಲಿಂಗಾಯತ ಒಗ್ಗಟ್ಟು ಕಾಪಾಡಿಕೊಂಡು ಹೋಗಬೇಕು.

3. ಜನಗಣತಿ ಮಾಡುವ ವೇಳೆ ಮತದ ಕಾಲಂ ಇರಬೇಕು ಎಂಬ ಆಗ್ರಹವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ. ಈ ವಿಷಯವಾಗಿ

ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಸಮಾಜದ ಮುಖಂಡರು, ವೀರಶೈವ ಲಿಂಗಾಯತ ಸಮಾಜದ ಮಠಾಧಿಪತಿಗಳು, ಎಲ್ಲಾ ಪಕ್ಷಗಳ ಸಂಸದರ ನಿಯೋಗ ನವದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು.

4,.ವೀರಶೈವ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಕೊಡಿಸಲು ಎಲ್ಲಾ ಉಪಪಂಗಡಗಳ ಒಗ್ಗಟ್ಟಿನಿಂದ ರಚನಾತ್ಮಾಕ ಕಾರ್ಯಕ್ರಮ ಆಯೋಜಿಸಬೇಕು.

5. ವೀರಶೈವ ಲಿಂಗಾಯತ ಒಳಪಂಗಡಗಳಿಗೆ ನೀಡಲಾಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೀಸಲಾತಿ ಮುಂದುವರಿಕೆ ಆಗಬೇಕು.

6. ವೀರಶೈವ ಲಿಂಗಾಯತ ಮಹಾಸಭಾ ಎಲ್ಲಾ ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದ ಸಂಘಟನೆಗಳು ಯಾವುದೇ ಕಾರ್ಯಕ್ರಮ, ರ್ಯಾಲಿ ಸೇರಿದಂತೆ ಸಮಾರಂಭ ನಡೆಸಿದರೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಫೋಟೋ ಹಾಕಬೇಕು. ಕೆಲವು ಕಡೆ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿ, ಬಸವಣ್ಣವರ ಥಮ್ಲಂ ಬಲಭಾಗದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಹಾಕದೇ ಕೆಲವು ಸಂಘಟನೆಗಳು ಪತ್ರಿಕೆಗಳಲ್ಲಿ ಪ್ರಕಟಿಸಿದ್ದು ಗಮನಕ್ಕೆ ಬಂದಿದೆ. ಹಾಗೆ ಮಾಡಬಾರದು. ಈ ಮೂಲಕ ಮಹಾಸಭಾಗೆ ತಿಳುವಳಿಕೆ ಕೊಡುತ್ತೇವೆ. ಪಂಚಪೀಠಾಧ್ಯಕ್ಷರ ಐದು ಫೋಟೋ ಹಾಕಲು ಕಷ್ಟವಾಗುತ್ತದೆ. ಐದೂ ಫೋಟೋ ಹಾಕಲು ಸಾಧ್ಯ ಆಗದಿದ್ರೆ ರೇಣುಕಾಚಾರ್ಯರ ಒಂದು ಫೋಟೋವಾದರೂ ಇರಬೇಕು ಎಂಬುದು ಪಂಚಪೀಠಾಧ್ಯಕ್ಷರ ಬಯಕೆ. ಇದಕ್ಕೆ ಎಲ್ಲರ ಸಹಮತ ಇದೆ.

7. ವೀರಶೈವ ಲಿಂಗಾಯತ ಸಮುದಾಯದ ತತ್ವ, ಸಿದ್ಧಾಂತ ಮನವರಿಕೆ ಮಾಡಿಕೊಡಬೇಕು.

8. ಗುರು ಪರಂಪರೆ, ಪ್ರಾಚೀನ ಪರಂಪರೆ ಆಚರಣೆ ಸೇರಿದಂತೆ ಹಿಂದಿನಂತೆ ಎಲ್ಲವೂ ನಡೆಯುವಂತಾಗಬೇಕು ಯುವಜನಾಂಗದವರಿಗೆ ವೀರಶೈವ ಲಿಂಗಾಯತ ಧರ್ಮದ ಆಚರಣೆ, ಇತಿಹಾಸ, ಧಾರ್ಮಿಕ ಪರಂಪರೆ ತಿಳಿಸಿಕೊಡುವ ಕೆಲಸ ಆಗಬೇಕು.

9. ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳ ವಿಕಲಚೇತನರು, ಶೋಷಿತರ ಹಿತರಕ್ಷಣೆ, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು.

10. ಪಂಚಪೀಠಗಳು ಮತ್ತು ಶಾಖಾ ಮಠಗಳ ನಡುವೆ ಉತ್ತಮ ಬಾಂಧವ್ಯ, ವಾತಾವರಣ ನಿರ್ಮಾಣಗೊಳ್ಳಬೇಕು. ಆಯಾ ಪೀಠಗಳ ಪೀಠಾಧ್ಯಕ್ಷರು ಶಾಖಾ ಮಠಗಳ ಸಮಸ್ಯೆ ಪರಿಹರಿಸಲು ಮಾರ್ಗದರ್ಶನ ನೀಡಿ ಬಲಪಡಿಸಬೇಕು. ಶಾಖಾ ಮಠದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು.

11. ಪ್ರತಿವರ್ಷವೂ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗಸಭೆ ನಡೆಸಿ ವೀರಶೈವ ಲಿಂಗಾಯತ ಪರಂಪರೆ ಆದರ್ಶ ಪಾಲನೆ ಮಾಡಲಾಗುವುದು.

12. ಉತ್ತರ ಭಾರತದ ದೆಹಲಿ, ರಾಜಸ್ತಾನ, ಜಮ್ಮುಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನಾದಿ ಕಾಲದಿಂದಲೂ ವೀರಶೈವ ಲಿಂಗಾಯತ ಸಮುದಾಯದವರು ವಾಸವಿದ್ದು, ಅವರಿಗೂ ಸರ್ಕಾರಿ ಸೌಲಭ್ಯಗಳು, ಯೋಜನೆಗಳನ್ನು ರೂಪಿಸಬೇಕು.