ವೀರಶೈವ-ಲಿಂಗಾಯತ ನಿಗಮಕ್ಕೆ 500 ಕೋಟಿ!
ವೀರಶೈವ-ಲಿಂಗಾಯತ ನಿಗಮಕ್ಕೆ .500 ಕೋಟಿ| ನಿಗಮ ಸ್ಥಾಪನೆ ಮಾಡಿ ಸರ್ಕಾರದ ಅಧಿಕೃತ ಆದೇಶ| ಯಾವುದೇ ಅಪಸ್ವರಗಳಿಗೆ ಸೊಪ್ಪು ಹಾಕದ ಸರ್ಕಾರ
ಬೆಂಗಳೂರು(ನ.24): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ‘ಕರ್ನಾಟಕ ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪಿಸಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದ್ದು, ನಿಗಮಕ್ಕೆ 500 ಕೋಟಿ ರು. ಹಣ ಒದಗಿಸಿ ಆದೇಶಿಸಿದೆ.
ಯಡಿಯೂರಪ್ಪ ಅವರು ಇದೇ ತಿಂಗಳ 17ರಂದು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಇಲಾಖೆಗೆ ಆದೇಶ ಮಾಡಿದ್ದರು. ಇದರ ಬೆನ್ನಲ್ಲೇ ಲಿಂಗಾಯತ ಸಮುದಾಯದ ಸಂಘಟನೆಗಳು ವಿಜಯೋತ್ಸವ ಆಚರಿಸಿದ್ದವಲ್ಲದೆ, ಸಮುದಾಯದ ಮೀಸಲಾತಿ ಹೆಚ್ಚಳಕ್ಕೂ ಆಗ್ರಹಿಸಿದ್ದವು. ಅಲ್ಲದೆ, ಸಮಾಜದ ಕೆಲವು ಹಿರಿಯ ಸ್ವಾಮೀಜಿಗಳು ನಿಗಮ ಸ್ಥಾಪನೆ ಉದ್ದೇಶದ ಬಗ್ಗೆ ಅಪಸ್ವರ ಎತ್ತಿದ್ದರು. ಇದರಿಂದ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಯಡಿಯೂರಪ್ಪಗೆ ತಿರುಗುಬಾಣವಾದ ವೀರಶೈವ ಲಿಂಗಾಯತ ನಿಗಮ ರಚನೆ...!
ಇದೀಗ ಸೋಮವಾರ ಹಿಂದುಳಿದ ವರ್ಗಗಳ ಇಲಾಖೆಯು ‘ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ‘ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಿಗಮ ಸ್ಥಾಪಿಸಲಾಗಿದೆ’ ಎಂದು ತಿಳಿಸಿದೆ.
ಜೊತೆಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಕಂಪೆನಿ ಕಾಯ್ದೆ-2013 ಸೆಕ್ಷನ್ 7ರ ಅನ್ವಯ ನೋಂದಣಿ ಆಗಬೇಕು. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಸ್ಥಾಪನೆ ಕಾರ್ಯಕ್ಕೆ ಅಗತ್ಯವಾದ ನೀತಿ-ನಿಯಮ ರೂಪಿಸಿ ಸರ್ಕಾರದ ಅನುಮೋದನೆ ಪಡೆದು ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿಸಬೇಕಿದೆ. ಇದಕ್ಕಾಗಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸುವವರಿಗೆ ನಿಗಮದ ಎಲ್ಲಾ ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಿಗೆ ವಹಿಸಲಾಗಿದೆ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಚರ್ಚೆ ಅಗತ್ಯ: ತೋಂಟದ ಶ್ರೀ
500 ಕೋಟಿ ರು. ಹಣ:
ನಿಗಮಕ್ಕೆ ಒಟ್ಟು 500 ಕೋಟಿ ರು. ಹಣ ಒದಗಿಸಲಾಗಿದ್ದು ಆರ್ಥಿಕ ಇಲಾಖೆ ಅನುಮೋದನೆ ಪಡೆಯಲಾಗಿದೆ ಎಂದು ರಾಜ್ಯಪಾಲರ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ನಿಗಮ ಸ್ಥಾಪನೆಗೆ ತಗಲುವ ಪ್ರಾರಂಭಿಕ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಭರಿಸಬೇಕು. ಬಳಿಕ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಿಂದ ಮರು ಪಾವತಿ ಮಾಡಿಸಬೇಕು ಎಂದು ಹೇಳಲಾಗಿದೆ.