Asianet Suvarna News Asianet Suvarna News

ಕರ್ನಾಟಕ ಬಂದ್‌ ಬೆನ್ನಲ್ಲೇ ಅ.5ರಂದು ಕೆಆರ್‌ಎಸ್‌ಗೆ ಮುತ್ತಿಗೆಗೆ ಕರೆಕೊಟ್ಟ ವಾಟಾಳ್‌ ನಾಗರಾಜ್‌

ಕಾವೇರಿ ನೀರಿಗಾಗಿ ಬೆಂಗಳೂರು ಬಂದ್‌ ಹಾಗೂ ಕರ್ನಾಟಕ ಬಂದ್‌ ಮಾಡಿದ ಬೆನ್ನಲ್ಲಿಯೇ ಅಕ್ಟೋಬರ್‌ 5 ರಂದು ಕೆಆರ್‌ಎಸ್‌ ಮುತ್ತಿಗೆ ಹಾಕಲು ವಾಟಾಳ್‌ ನಾಗರಾಕ್‌ಕರೆ ಕೊಟ್ಟಿದ್ದಾರೆ.

Vatal Nagaraj called KRS to besiege on October 5th after the Karnataka bandh sat
Author
First Published Sep 29, 2023, 11:56 AM IST

ಬೆಂಗಳೂರು (ಸೆ.29): ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವಾಟಾಳ್‌ ನಾಗರಾಜ್‌ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ಈಗಾಗಲೇ ಬೆಂಗಳೂರು ಬಂದ್‌ ಯಶಸ್ವಿಯಾಗಿದ್ದು, ಇಂದು ಕರ್ನಾಟಕ ಬಂದ್‌ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಅಕ್ಟೋಬರ್‌ 5ರಂದು ಕೆಆರ್‌ಎಸ್‌ ಆಣೆಕಟ್ಟು ಮುತ್ತಿಗೆ ಹಾಕುವುದಕ್ಕೆ ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಕರೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ವಿಭಿನ್ನವಾಗಿ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ಸರ್ಕಾರದ ವಿರುದ್ಧ ಕಾವೇರಿ ನೀರು ಹರಿಸದಂತೆ ಪ್ರತಿಭಟನೆ ಮಾಡಿದ ವಾಟಾಳ್‌ ನಾಗರಾಜ್‌ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಇಂದಿನ ಪ್ರತಿಭಟನೆಗೂ ಸರ್ಕಾರ ಬಗ್ಗದಿದ್ದರೆ ಅಕ್ಟೋಬರ್‌ 5 ರಂದು ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಆಣೆಕಟ್ಟೆಗೆ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್‌ ನಾಗರಾಜ್‌ ತಿಳಿಸಿದರು.

ಕಾವೇರಿ ಹೋರಾಟ: ತಮಿಳು ನಟನಿಗೆ ಕನ್ನಡಿಗರ ಪರ ಪ್ರಕಾಶ್ ರಾಜ್ ಕ್ಷಮೆ, ಯಾರೀ ಅಧಿಕಾರ ಕೊಟ್ಟಿದ್ದೆಂದ ಕರುನಾಡು!

ಪ್ರತಿಭಟನಾ ರ್ಯಾಲಿ ಮೂಲಕ ತೆರಳಿ ಕೆಆರ್‌ಎಸ್‌ ಮುತ್ತಿಗೆ:  ಇನ್ನು ಅಕ್ಟೋಬರ್‌ 5 ರಂದು ಕೆಆರ್‌ಎಸ್‌ ಆಣೆಕಟ್ಟೆಗೆ ಮುತ್ತಿಗೆ ಹಾಕುವ ಮುನ್ನ ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತ, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಮೈಸೂರಿಗೆ ತೆರಳಿ ರ್ಯಾಲಿಯನ್ನು ಮಾಡಿಕೊಂಡು ನಂತರ ಕೆಆರ್‌ಎಸ್‌ ಆಣೆಕಟ್ಟೆಗೆ ಹೋಗಿ ಮುತ್ತಿಗೆ ಹಾಕಲಾಗುವುದು. ಇದಕ್ಕೆ ಎಲ್ಲ ಸಂಘಟನೆಗಳು ಕೂಡ ಬೆಂಬಲ ಕೊಡಲಿವೆ. ರೈತರ ಸಂಘಟನೆಗಳು ಕೂಡ ನಮ್ಮೊಂದಿಗೆ ಕೈ ಜೋಡಿಸಲಿವೆ. ಈ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಸರ್ಕಾರದೆದುರು ಮಾಡಲಾಗುವುದು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಬಿಡುವುದಿಲ್ಲ ಎಂದು ಆಗ್ರಹಿಸಿದರು.

ಪ್ರತಿಭಟನೆ ಹತ್ತಿಕ್ಕಲು 144 ಸೆಕ್ಷನ್‌ ಜಾರಿ: ತಮಿಳುನಾಡಿನಲ್ಲಿ ಕಾವೇರಿ ಪ್ರತಿಭಟನೆಯನ್ನು ಬೆಂಬಲಿಸಿ ಪೊಲೀಸರೇ ಸ್ವತಃ ರಸ್ತೆಯನ್ನು ಬಂದ್‌ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಪ್ರತಿಭಟನೆ, ಮೆರವಣಿಗೆ ಹಾಗೂ ರ್ಯಾಲಿಯನ್ನು ಮಾಡಲು ಮುಂದಾದವರನ್ನು ಕಂಡಲ್ಲಿ ಪೊಲೀಸರು ಬಂಧನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪೊಲೀಸ್‌ ಗೂಂಡಾಗಿರಿ ನಡೆಯುತ್ತಿದೆ. ನೀವು ಮೆರವಣಿಗೆಯನ್ನು ಮಾಡದಂತೆ ತಡೆದು 144 ಸೆಕ್ಷನ್‌ ಜಾರಿ ಮಾಡಿ, ಪೊಲೀಸ್‌ ರಾಜ್ಯ ಮಾಡಿದ್ದೀರಿ. ರಾಜ್ಯದ ಜನತೆ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರದ್ದೋ ಮಾತನ್ನು ನಂಬಿಕೊಂಡು ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. 

ಕಾವೇರಿಗಾಗಿ ಮೋದಿಗೆ ಕರವೇ 1 ಲಕ್ಷ ರಕ್ತ ಪತ್ರ..!

ಸಚಿವರೇನು ಪಾಳೆಗಾರರೇ? 
ಟೌನ್‌ಹಾಲ್ ಮುಂದೆ ಪ್ರತಿಭಟನೆ ಮಾಡಿದರೆ ಕಾನೂನು ಅಡ್ಡಬರುತ್ತದೆ. ಆದರೆ, ಸಚಿವರೇನು ಪಾಳೇಗಾರರೇ? ಬಂದ್‌ಗೆ ಅವಕಾಶ ಇಲ್ಲವೆಂದು ಹೇಳುತ್ತಾರೆ. ಗೃಹಮಂತ್ರಿ ಪರಮೇಶ್ವರರ ಅವರೇ ನೀವು ಯಾವಾಗ ಹೋರಾಟ, ಪ್ರತಿಭಟನೆ ಮಾಡಿದ್ದೀರಿ.  ಒಂದು ಕಡೆ ಪರಮೇಶ ಮತ್ತೊಂದು ಕಡೆ ಅವನ ಮಗ ಶಿವಕುಮಾರ ಕೂಡ ನಮ್ಮ ಪ್ರತಿಭಟನೆಗೆ ಅವಕಾಶ ಕೊಡಲಿಲ್ಲ. ಇನ್ನು ಸಿದ್ದರಾಮೇಶ್ವರ ಕೂಡ ನಮ್ಮ ಪರವಾಗಿ ನಿಲ್ಲಲಿಲ್ಲ. ಇನ್ನು ನಾನು ಧರಿಸಿರುವುದು ನ್ಯಾಯದೇವತೆಯ ವಸ್ತ್ರವಾಗಿದೆ. ಇದನ್ನು ಬುರ್ಖಾ ಎಂತಲೂ ಕರೆಯಬಹುದು. ಇದು ವಿನೂತನ ಮತ್ತು ವಿಶೇಷವಾಗಿ ಪ್ರತಿಭಟನೆ ಮಾಡುತ್ತೇವೆ. ಬುರ್ಖಾ ಇದು ನ್ಯಾಯದ ಸಂದೇಶವಾಗಿದೆ. ಬುರ್ಖಾ ಇದು ಮಹಿಳೆಯರ ಸಂದೇಶವಾಗಿದೆ. ಬುರ್ಖಾ ಮಹಿಳೆ ಖಾಲಿ ಕೊಡ ಹಿಡಿದಿರುವ ದೃಶ್ಯವಾಗಿದೆ ಎಂದು ವಾಟಾಳ್‌ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios