ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹರಿಹರ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಹಾಗೂ ಶ್ವಾಸಯೋಗ ಸಂಸ್ಥೆಯ ವಚನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಪ್ರದರ್ಶನ ನಡೆಸಲಾಯಿತು.

ಬೆಂಗಳೂರು (ಜೂ.22): ಕೇಂದ್ರ ಆಯುಷ್‌ ಇಲಾಖೆ, ಲಡಾಕ್‌ ಕೇಂದ್ರಾಡಳಿತ ಪ್ರದೇಶ ವತಿಯಿಂದ ಲೇಹ್‌ ಲಡಾಕ್‌ನ ಅಸ್ಟ್ರಾಟರ್ಪ್‌ ಕ್ರೀಡಾಂಗಣದಲ್ಲಿ ಶನಿವಾರ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹರಿಹರ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಹಾಗೂ ಶ್ವಾಸಯೋಗ ಸಂಸ್ಥೆಯ ವಚನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಪ್ರದರ್ಶನ ನಡೆಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ವಚನಾನಂದ ಸ್ವಾಮೀಜಿ ಅವರು ಪ್ರಸಕ್ತ ಸಾಲಿನ ಯೋಗ ದಿನಾಚರಣೆಯ ಧ್ಯೇಯವಾಗಿರುವ ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ವಿಶ್ವಶಾಂತಿಯ ಸಂದೇಶ ಹರಡಿದರು. ಯೋಗ ಎಂಬುದು ಶ್ವಾಸದ ಶುದ್ಧತೆ, ಶಾಂತಿಯ ಸ್ಪರ್ಶ, ಮಾತುಗಳಿಲ್ಲದ ತುದಿಯಲ್ಲಿ ಒಂದಾಗುವ ಆತ್ಮಸಾನ್ನಿಧ್ಯ ಎಂದು ಹೇಳಿದರು. ಈ ವೇಳೆ ಭಿಕ್ಕು ಸಂಘ ಸೇನಾಜೀ, ಸದ್ಗುರು ಬೃಹ್ಮೆಶಾನಂದ ಸ್ವಾಮೀಜಿ, ಕೇಂದ್ರ ಸಚಿವರಾದ ಅರ್ಜುನ ರಾಮ್ ಮೇಘವಾಲ್, ಮಾಜಿ ಲೆಫ್ಟಿನೆಂಟ್‌ ಗವರ್ನರ್ ಡಾ.ಕಿರಣ್ ಬೇಡಿ ಹಾಗೂ ಲಡಾಕ್ ಸರ್ಕಾರದ ಸಚಿವರು, ಅಧಿಕಾರಿಗಳು ಹಾಜರಿದ್ದರು.

ಇದಕ್ಕೂ ಮೊದಲು ಶುಕ್ರವಾರವೂ ಶ್ವಾಸಯೋಗ ಸಂಸ್ಥೆ ಕೇಂದ್ರ ಆಯುಷ್ ಇಲಾಖೆ, ಮಹಾಬೋಧಿ ಅಂತರಾಷ್ಟ್ರೀಯ ಧ್ಯಾನ ಕೇಂದ್ರದ ಸಹಯೋಗದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಲೇಹ್ ಲಡಾಕ್‌ನ ಪ್ಯಾಂಗಾಂಗ್ ಸರೋವರ ತಟದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ಪ್ರದರ್ಶನ ನಡೆಸಲಾಗಿತ್ತು. ಈ ವೇಳೆಯೂ ಡಾ.ಕಿರಣ್‌ ಬೇಡಿ ಹಾಗೂ ಭಿಕ್ಕು ಸಂಘಸೇನಾ ಅವರು ಸೇರಿದಂತೆ ನೂರಾರು ಮಂದಿ ಯೋಗಪಟುಗಳು ಯೋಗಾಭ್ಯಾಸ ಮಾಡಿದ್ದರು.

ಅಮೃತ ಸರೋವರ ದಡದಲ್ಲಿ ಯೋಗ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಗಿಣಿಗೇರಾದ ಅಮೃತ ಸರೋವರ ದಡದಲ್ಲಿ ಶನಿವಾರ ಸಾಮೂಹಿಕ ಯೋಗ ಮಾಡಲಾಯಿತು. ಗಿಣಿಗೇರಿ ಕೆರೆ ಸಮಿತಿ ಅಧ್ಯಕ್ಷ ಸುಬ್ಬಣ್ಣಚಾರ ಮಾತನಾಡಿ, ಇಂದು ಆಹಾರ ಪದ್ಧತಿ ಮುಖ್ಯವಾಗಿದ್ದು ಬದಲಾವಣೆ ಮಾಡಿಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇಂದು ಒತ್ತಡದ ಜೀವನ ಸಾಗಿಸುತ್ತಿರುವ ನಾವು ಒಂದು ಗಂಟೆಯಾದರೂ ಯೋಗ ಮತ್ತು ಪ್ರಾಣಾಯಾಮ ರೂಢಿಸಿಕೊಳ್ಳಬೇಕು ಎಂದರು.

ಕಾಮನೂರು ಆಯುಷ್ ಆಸ್ಪತ್ರೆಯ ಯೋಗ ವಿಭಾಗದ ಡಾ. ಕಳಕೇಶ ಮಾತನಾಡಿ, ಮನಸ್ಸು ಮತ್ತು ದೇಹ ಆರೋಗ್ಯವಾಗಿರಬೇಕಿದ್ದರೆ ಕ್ರಮಬದ್ಧವಾಗಿ ಯೋಗಭ್ಯಾಸ ರೂಢಿಸಿಕೊಂಡು ಉಳಿದವರಿಗೂ ತಿಳಿಸಿಕೊಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯೋಗ ಅಭ್ಯಾಸ ಮತ್ತು ಪ್ರಾಣಾಯಮ ಭಂಗಿಗಳನ್ನು ಡಾ. ಕಳಕೇಶ್, ದೈಹಿಕ ಶಿಕ್ಷಕ ಬಸನಗೌಡ ಮಾಹಿತಿ ನೀಡಿದರು. ಪಿಡಿಒ ಮಂಜುಳಾದೇವಿ ಕಾರ್ಯಕ್ರಮ ನಿರ್ವಹಿಸಿದರು.