Asianet Suvarna News Asianet Suvarna News

ಕಾರವಾರದ ಬೈತ್ಕೋಲ್​ನಲ್ಲಿ ಗುಡ್ಡ ಕುಸಿತದ ಭೀತಿ: ಜನವಸತಿ ಪ್ರದೇಶದತ್ತ ಮಳೆ ನೀರು

ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕಾರವಾರದ ಬೈತ್ಕೋಲ್​ನಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಗುಡ್ಡದ ಮೇಲೆ ಇಂಡಿಯನ್ ನೇವಿಯವರಿಂದ ರಸ್ತೆ ನಿರ್ಮಾಣವಾಗುತ್ತಿದ್ದು, ಜೋರು ಮಳೆ  ಮಳೆಯಾಗುತ್ತಿದ್ದಂತೇ ಗುಡ್ಡದ ಮೇಲ್ಭಾಗದಿಂದ ಭಾರೀ ಪ್ರಮಾಣದ ಕೆಸರು ಮನೆಗಳೊಳಗೆ ಸೇರಲಾರಂಭಿಸಿದೆ. 

Uttara Kannada Rains Landslide in karwar baitkola water flows to houses gvd
Author
First Published Jun 26, 2023, 10:03 AM IST

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಜೂ.26): ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕಾರವಾರದ ಬೈತ್ಕೋಲ್​ನಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಗುಡ್ಡದ ಮೇಲೆ ಇಂಡಿಯನ್ ನೇವಿಯವರಿಂದ ರಸ್ತೆ ನಿರ್ಮಾಣವಾಗುತ್ತಿದ್ದು, ಜೋರು ಮಳೆ  ಮಳೆಯಾಗುತ್ತಿದ್ದಂತೇ ಗುಡ್ಡದ ಮೇಲ್ಭಾಗದಿಂದ ಭಾರೀ ಪ್ರಮಾಣದ ಕೆಸರು ಮನೆಗಳೊಳಗೆ ಸೇರಲಾರಂಭಿಸಿದೆ. ಇದರಿಂದ ಗುಡ್ಡ ತಳ‌ ನಿವಾಸಿಗಳು ಹೆದರಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಗುಡ್ಡ ಕುಸಿತವಾಗಬಹುದು ಎಂದು ಭೀತಿಯಲ್ಲೇ ದಿನದೂಡುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ದಿನಗಳಿಂದ ಕಾಣದ ವರುಣನ ಆರ್ಭಟ ಇದೀಗ ಏಕಾಏಕಿ ಕಾಣಿಸಿಕೊಂಡಿದ್ದು, ನೌಕಾನೆಲೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಗುಡ್ಡ ಕುಸಿತದ ಭೀತಿ ಎದುರಿಸುತ್ತಿದ್ದಾರೆ. 

ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಪ್ರತೀ ವರ್ಷ ಮಳೆಯಿಂದುಂಟಾಗುವ ಅನಾಹುತ ತಪ್ಪಿಸಲು ಜಿಲ್ಲಾಡಳಿತ ಈಗಾಗಲೇ ಸನ್ನದ್ಧಗೊಂಡಿದೆ. ಜಿಲ್ಲೆಯ ಹಲವೆಡೆ ನೆರೆ ಕಾಟ ಹಾಗೂ ಗುಡ್ಡ ಕುಸಿತವಾಗುವ ಸ್ಥಳಗಳನ್ನು ಕೂಡಾ ಈಗಾಗಲೇ ಗುರುತಿಸಲಾಗಿದೆ.‌ ಆದರೆ, ಕಾರವಾರದ ಬೈತ್‌ಕೋಲಾ‌ ಪ್ರದೇಶವನ್ನು ಮಾತ್ರ ನಿರ್ಲಕ್ಷಿಸಲಾಗಿದೆ.‌ ಬೈತ್‌ಕೋಲಾ ಗುಡ್ಡ ಪ್ರದೇಶ ನೇವಲ್ ಬೇಸ್‌ಗೆ ಸೇರುವುದರಿಂದ ಹೆಚ್ಚಿನ ಚಟುವಟಿಕೆಗಳಿಗಾಗಿ ನೌಕಾನೆಲೆಯ ಅಧಿಕಾರಿಗಳು  ಗುಡ್ಡವನ್ನು ಮೇಲ್ಭಾಗದಲ್ಲಿ ಕೊರೆದು ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. 

ರಾಜ್ಯದಲ್ಲಿ ನಾಲ್ಕೈದು ದಿನ ಭಾರಿ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಈ ರಸ್ತೆ ನಿರ್ಮಾಣದ ವೇಳೆ ಪ್ರತಿಭಟನೆ ನಡೆಸಿದ್ದ ಗುಡ್ಡದ ತಳ ನಿವಾಸಿಗಳಾದ ಮೀನುಗಾರರು ಈ ಕಾಮಗಾರಿ ನಡೆದಲ್ಲಿ ಗುಡ್ಡ ಕುಸಿತವಾಗಿ ಜನರು ಸಂಕಷ್ಟ ಎದುರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು. ಆದರೂ, ನಿರ್ಲಕ್ಷ್ಯ ಮಾಡಿದ್ದ ನೇವಲ್ ಅಧಿಕಾರಿಗಳು ರಸ್ತೆ ನಿರ್ಮಾಣದ ಕಾಮಗಾರಿ ಮುಂದುವರಿಸಿದ್ದರು. ಅದರೆ, ಇದೀಗ ಮಳೆಯಾಗುತ್ತಿದ್ದಂತೇ ಗುಡ್ಡದ ಮೇಲ್ಭಾಗದಿಂದ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿರುವ ಕೆಸರು ನೀರು ಸ್ಥಳೀಯ ಮನೆಗಳೊಳಗೆ ಪ್ರವೇಶಿಸುತ್ತಿದೆ. ಇದರಿಂದ ಜನರು ಈ ಮಳೆಗಾಲದ ಸಂದರ್ಭ ಗುಡ್ಡ ಕುಸಿತದ ಭೀತಿಯನ್ನು ಎದುರಿಸುತ್ತಿದ್ದಾರೆ. 

ಕಾರವಾರದ ಬೈತ್‌ಕೋಲಾ ಬಂದರು ಪ್ರದೇಶವಾಗಿದ್ದು, ಸಾವಿರಾರು ಮೀನುಗಾರರು ಇಲ್ಲಿನ ಗುಡ್ಡದ ತಳ ಪ್ರದೇಶದಲ್ಲಿ ಹಲವು ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತಗಳು ನಡೆದರೂ ಬೈತ್‌ಕೋಲಾದ ಜನರು ಮಾತ್ರ ಯಾವುದೇ ಭೀತಿಯಿಲ್ಲದೇ ಜೀವನ‌ ನಡೆಸುತ್ತಿದ್ದರು. ಇಲ್ಲಿನ ಜನರ ಪ್ರಮುಖ ಕಸುಬು ಮೀನುಗಾರಿಕೆಯಾಗಿದ್ದರಿಂದ ದಿನ ರಾತ್ರಿ ತಮ್ಮ ಕುಟುಂಬಗಳನ್ನು ಮನೆಯಲ್ಲೇ ಬಿಟ್ಟು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತಾರೆ‌. ಆದರೆ, ನೇವಿಯವರ ರಸ್ತೆ ನಿರ್ಮಾಣದ ಕಾಮಗಾರಿಯಿಂದ ಈ ಪ್ರದೇಶದಲ್ಲೂ ಗುಡ್ಡ ಕುಸಿತದ ಭೀತಿ ಎದುರಾಗಿದ್ದು, ಮೀನುಗಾರರು ಕುಟುಂಬವನ್ನು ಬಿಟ್ಟು ಸಾಂಪ್ರದಾಯಿಕ‌ ಮೀನುಗಾರಿಕೆಗೆ ತೆರಳುವುದಾದರೂ ಹೇಗೆ ..? ಎಂಬ ಭೀತಿಯಲ್ಲಿದ್ದಾರೆ. 

ಚಿತ್ರನಟ ಮಾಸ್ಟರ್ ಆನಂದ್‌ಗೆ 18.50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ದೂರು

ಈ ಕಾರಣದಿಂದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ನೇವಲ್ ಬೇಸ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಜನರ‌ ಜೀವಕ್ಕೆ ಅಪಾಯವಾಗುವ ಮುನ್ನವೇ ಕಾಮಗಾರಿಯನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಇಂಡಿಯನ್ ನೇವಿಯವರ ಭದ್ರತೆ ಹಾಗೂ ಅಭಿವೃದ್ಧಿ ಹಿನ್ನೆಲೆ‌ ನಿರ್ಮಾಣ‌ವಾಗುತ್ತಿರುವ ಬೈತ್ನಕೋಲಾ ಗುಡ್ಡದ ಮೇಲಿನ ರಸ್ತೆ ಕಾಮಗಾರಿ ಜನಸಾಮಾನ್ಯರಿಗೆ ಕಂಟಕವಾಗತೊಡಗಿದೆ. ಕಳೆದ ವರ್ಷ ಭಟ್ಕಳದಲ್ಲಿ ನಡೆದ ದುರಂತದಂತೆ ಬೈತ್‌ಕೋಲಾದಲ್ಲೂ ನಡೆಯಬಾರದು ಎಂಬ ದೃಷ್ಠಿಯಿಂದ ಗುಡ್ಡ ಮೇಲ್ಭಾಗದ ರಸ್ತೆ ನಿರ್ಮಾಣ ಕಾಮಗಾರಿಯನ್ನೇ ನಿಲ್ಲಿಸಬೇಕಿದೆ ಎಂದು ಜನರು ಒತ್ತಾಯ ಮಾಡಲಾರಂಭಿಸಿದ್ದಾರೆ. 

Follow Us:
Download App:
  • android
  • ios