ಪ್ರವಾಸಿಗರ ಸ್ವರ್ಗ ಎಂದೆನಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಜೊಯಿಡಾ ಪ್ರದೇಶಕ್ಕೆ ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಸುಂದರ ಪರಿಸರ, ಹಸಿರು ಕಾಡು ಹಾಗೂ ಜಲಸಾಹಸ ಕ್ರೀಡೆಗಳು ಪ್ರವಾಸಿಗರಿಗಂತೂ ರೋಮಾಂಚನದ ಅನುಭವ ನೀಡುತ್ತೆ.

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಏ.21): ಪ್ರವಾಸಿಗರ ಸ್ವರ್ಗ ಎಂದೆನಿಸಿಕೊಂಡಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿ (Dandeli) ಹಾಗೂ ಜೊಯಿಡಾ (Joida) ಪ್ರದೇಶಕ್ಕೆ ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಸುಂದರ ಪರಿಸರ, ಹಸಿರು ಕಾಡು ಹಾಗೂ ಜಲಸಾಹಸ ಕ್ರೀಡೆಗಳು ಪ್ರವಾಸಿಗರಿಗಂತೂ ರೋಮಾಂಚನದ ಅನುಭವ ನೀಡುತ್ತೆ. ಆದರೆ ಪ್ರವಾಸಿಗರ ದಟ್ಟಣೆಯಿಂದ ಹಾಗೂ ಹೆಚ್ಚು ಹಣ ಗಳಿಸೋ ದುರಾಸೆಯಿಂದ ಇಲ್ಲಿ ಕಾನೂನು ನಿಯಮ ಮೀರಿ ಜಲಸಾಹಸ‌ ಚಟುವಟಿಕೆಗಳು (Water Adventure Game) ನಡೆಸುತ್ತಿರೋದು ಬೆಳಕಿಗೆ ಬಂದಿದ್ದು, ಜಿಲ್ಲಾಡಳಿತದ ಕಣ್ಣು ಕೆಂಪಾಗಿಸಿದೆ. ಈ ಕಾರಣದಿಂದ ದಾಂಡೇಲಿ ಹಾಗೂ ಜೊಯಿಡಾ ಪ್ರದೇಶದಲ್ಲಿ ಜಲಸಾಹಸ ಚಟುವಟಿಕೆಗೆ ಕಡಿವಾಣ ಹಾಕಲಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

ಎರಡು ವರ್ಷ ಕೊರೊನಾ ಕಾಟದಿಂದ ಬೇಸತ್ತಿದ್ದ‌ ಜನರು ಈ ವರ್ಷವಂತೂ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ಹಾಗೂ ದಾಂಡೇಲಿ ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಸುಂದರ ಪರಿಸರ, ಹಚ್ಚ ಹಸಿರಿನ ಕಾಡುಗಳ ಸೌಂದರ್ಯಕ್ಕೆ ಮಾರುಹೋಗುವ ಪ್ರವಾಸಿಗರು, ತಮ್ಮ ರಜಾ ದಿನಗಳಲ್ಲಿ ಜಿಲ್ಲೆಯ ಮಲೆನಾಡು ಭಾಗಕ್ಕೆ ಹರಿದು ಬರುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವು ಉದ್ಯಮಿಗಳು ಪ್ರವಾಸಿಗರಿಂದ ಹಣ ಪೀಕುವ ಕೆಲಸ ಮಾಡ್ತಿದ್ದಾರೆ. ಯಾವುದೇ ಅಧಿಕೃತ ಪರವಾನಿಗೆ ಪಡೆಯದೇ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುತ್ತಿದ್ದು  ಇದರಿಂದ ಪ್ರವಾಸಿಗರ ಪ್ರಾಣಕ್ಕೆ ಸಂಚಕಾರ ಉಂಟಾಗುತ್ತಿದೆ. 

Uttara Kannada 108 ಆ್ಯಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಕೆಲವು ದಿನಗಳ ಹಿಂದೆ ಗಣೇಶಗುಡಿಯ ಇಳವಾದಲ್ಲಿ ನಡೆದ ರ್ಯಾಪ್ಟಿಂಗ್ ದುರಂತವೇ ಸಾಕ್ಷಿಯಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಟ್ಯೂಬ್ ಬೋಟುಗಳಲ್ಲಿ ತುಂಬಿ ಕ್ರೀಡೆಯ ಮಜಾ ನೀಡುತ್ತಿದ್ದಾರೆ. ಆದ್ರೆ, ಸರಿಯಾದ ಲೈಫ್ ಜಾಕೆಟ್ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಪ್ರವಾಸಿಗರ ಜೀವದ ಜತೆ ಆಟವಾಡಲಾಗುತ್ತಿದೆ.‌ ಇನ್ನು ದಾಂಡೇಲಿ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ಪಡೆಯದೆ, ಸುಮಾರು 10 ರಿಂದ 12 ಕಡೆ ರ್ಯಾಫ್ಟಿಂಗ್ ನಡೆಸಲಾಗುತ್ತಿತ್ತು. ಈ ಕಾರಣದಿಂದ ರ್ಯಾಫ್ಟಿಂಗ್ ಅನ್ನು ಒಂದು ವ್ಯವಸ್ಥಿತವಾಗಿ ನಡೆಸಲು ನಿರ್ಧರಿಸಿರುವ ಜಿಲ್ಲಾಡಳಿತ, ಅಧಿಕೃತ ವಾಟರ್ ಸ್ಪೋರ್ಟ್ಸ್ ಕೇಂದ್ರವನ್ನು ಹೊರತುಪಡಿಸಿ ಉಳಿದ ಎಲ್ಲಾ ಅನಧಿಕೃತವಾಗಿ ನಡೆಯುತ್ತಿದ್ದ ವಾಟರ್ ಸ್ಫೋರ್ಟ್ಸ್ ಕೇಂದ್ರಗಳನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಿದೆ. 

ರ್ಯಾಫ್ಟಿಂಗ್‌ ನಡೆಸಲು ಬೇಕಾಗಿರುವ ಎನ್‌ಓಸಿಗೆ ಯಾವುದೇ ಫೀಸ್ ಅನ್ನು ಪ್ರವಾಸೋದ್ಯಮ ಇಲಾಖೆ ಪಡೆಯುವುದಿಲ್ಲ, ಆದರೆ, ರ್ಯಾಫ್ಟಿಂಗ್ ಮಾನದಂಡಗಳನ್ನು ಪಾಲನೆ ಮಾಡಬೇಕಾಗುತ್ತದೆ. ಕೆಲವು ರ್ಯಾಫ್ಟಿಂಗ್ ಕೇಂದ್ರಗಳು ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಮುಂದಿನ ಆದೇಶದವರೆಗೆ ಅನಧಿಕೃತ ರ್ಯಾಫ್ಟಿಂಗ್‌ಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ, ಹೆಚ್ಚು ಸುರಕ್ಷತೆಯೊಂದಿಗೆ ಸುವವ್ಯಸ್ಥಿತವಾಗಿ ನಡೆಸುವ ನಿರ್ಧಾರ ಜಿಲ್ಲಾಡಳಿತ ಕೈಗೊಂಡಿದೆ. ಅಂದಹಾಗೆ, ಜೋಯಿಡಾ ಮತ್ತು ದಾಂಡೇಲಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ (ಎನ್‌ಓಸಿ) ಪಡೆದ ಬೆರಳೆಣಿಕೆಯ ಜಲಸಾಹಸ ಕೇಂದ್ರಗಳಿವೆ. 

ಇಲ್ಲಿ ಬೋಟಿಂಗ್, ರ್ಯಾಫ್ಟಿಂಗ್ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಗಣೇಶಗುಡಿಯಿಂದ ಮೌಳಂಗಿವರೆಗಿನ 13 ಕಿಲೋ ಮೀಟರ್ ಅಂತರದವರೆಗೆ ಕಾಳಿನದಿಯಲ್ಲಿ ರ್ಯಾಫ್ಟಿಂಗ್ ಸೇರಿದಂತೆ ಹಲವು ಜಲಸಾಹಸ ಕ್ರೀಡೆ  ನಡೆಸುವ ಅನುಮತಿ ಪಡೆಯದ ಕೇಂದ್ರಗಳಿವೆ. ಸೂಕ್ತ ಅರ್ಹತೆಯಿಲ್ಲದೇ, ಲೈಫ್ ಜಾಕೆಟ್ ಇಲ್ಲದೇ, ವಿಮಾ ಸೌಕರ್ಯ, ಗೈಡ್‌ಗಳನ್ನು ಕೂಡಾ ಹೊಂದದೆ ಪ್ರವಾಸಿಗರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಹಣ ಗಳಿಸುವ ಉದ್ದೇಶದಿಂದ ರಾತ್ರಿಯಾದ್ರೂ ಪ್ರವಾಸಿಗರಿಗೆ ಕ್ರೀಡೆಯ ಮಜಾ ನೀಡ್ತಿರೋದು ತಿಳಿದು ಬಂದಿದೆ. ಇವುಗಳಿಂದ ಏನಾದ್ರೂ ಜೀವ ಹಾನಿಯಾದಲ್ಲಿ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಭಾರೀ ಹೊಡೆತ ಬೀಳೋ ಸಾಧ್ಯತೆಯಿದೆ. 

ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅನಧಿಕೃತ ವಾಗಿರುವ ಚಟುವಟಿಕೆಗಳನ್ನ ನಿಷೇಧಿಸಿದೆ. ಆದರೆ, ಪ್ರಸ್ತುತ ಪ್ರವಾಸಿಗರು ಜಿಲ್ಲೆಗೆ ಹೆಚ್ಚು ಭೇಟಿ ನೀಡುತ್ತಿರುವ ಕಾರಣ ಎಲ್ಲೆಡೆ ಬ್ಯಾನ್ ಮಾಡೋ ಬದಲು ತಪ್ಪು ಎಸಗಿರುವಂತಹ ರ್ಯಾಫ್ಟಿಂಗ್ ಕೇಂದ್ರಗಳ ಮೇಲೆ ದಂಡ ಹಾಕಿ ಅಥವಾ ಅವುಗಳನ್ನು ಬ್ಯಾನ್ ಮಾಡಬೇಕೇ ಹೊರತು ಎಲ್ಲವನ್ನೂ ಮುಚ್ಚುವ ಕ್ರಮ ಕೈಗೊಳ್ಳಬಾರದು. ತಪ್ಪೆಸಗಿದವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಉಳಿದವರು ಬುದ್ಧಿ ಕಲಿಯುತ್ತಾರೆ. ಇಲ್ಲವಾದಲ್ಲಿ ಪ್ರವಾಸೋದ್ಯಮದ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಅಂತಾರೆ ಸ್ಥಳೀಯರು. 

Monkey Fever: ಮಂಗನ ಕಾಯಿಲೆಗೆ ಸಿದ್ದಾಪುರ ಮೂಲದ ವೃದ್ಧೆ ಬಲಿ: 7 ಸೋಕಿಂತರು ಪತ್ತೆ

ಒಟ್ಟಿನಲ್ಲಿ ಪ್ರವಾಸೋದ್ಯಮದ ಮೇಲೆ ನಿಂತಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ರ್ಯಾಫ್ಟಿಂಗ್ ನಂತಹ ಜಲಸಾಹಸ ಕ್ರೀಡೆಗಳನ್ನು ನಡೆಸುವವರು ಪ್ರವಾಸೋದ್ಯಮಕ್ಕೆ ಸಂಚಕಾರ ತರುವ ಸಾಧ್ಯತೆಗಳಿವೆ. ಈ ಕಾರಣದಿಂದ ಅರ್ಹತೆಗಳನ್ನು ಹೊಂದಿರುವ ಕೇಂದ್ರಗಳಿಗೆ ಮಾತ್ರ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡಬೇಕೇ ಹೊರತು ಉಳಿದಂತೆ ಎಲ್ಲದಕ್ಕೂ ಕಡಿವಾಣ ಹಾಕಬೇಕಿದೆ. ಪ್ರವಾಸಿಗರು ಕೂಡಾ ಸೂಕ್ತ ಮಾಹಿತಿಗಳೊಂದಿಗೆ ಸುರಕ್ಷತೆಗೆ ಆದ್ಯತೆ‌ ನೀಡಿ ಮನೋರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ.