Asianet Suvarna News Asianet Suvarna News

ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹೊಸ ಸ್ಪರ್ಶ : ಎಲೆಮರೆ ಸಾಧಕರ ಆಯ್ಕೆ

  • ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹೊಸ ಸ್ಪರ್ಶ ನೀಡಲು ಯೋಜಿಸಿದ್ದೇನೆಂದ ಸಚಿವರು
  • ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಎಲೆಮರೆಯ ಸಾಧಕರನ್ನು ಬದ್ಧತೆಯಿಂದ ಆಯ್ಕೆ ಮಾಡಲಾಗುತ್ತದೆ
  • ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌ ಹೇಳಿಕೆ
unnoticed Artists also should Get rajyotsava award says minister Sunil kumar snr
Author
Bengaluru, First Published Aug 31, 2021, 11:01 AM IST

 ಉಡುಪಿ (ಆ.31):  ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹೊಸ ಸ್ಪರ್ಶ ನೀಡಲು ಯೋಜಿಸಿದ್ದೇನೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಎಲೆಮರೆಯ ಸಾಧಕರನ್ನು ಬದ್ಧತೆಯಿಂದ ಆಯ್ಕೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ. ಮಾಧ್ಯಮ ಸಂವಾದದಲ್ಲಿ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿಗಳಿಗೆ ಸಂಪ್ರದಾಯದಂತೆ 60 ಮಂದಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯೂ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅದರ ಜೊತೆಗೆ ಒಂದು ಆಯ್ಕೆ ಸಮಿತಿಯನ್ನೂ ನೇಮಿಸಲಾಗುತ್ತದೆ. ಸಾರ್ವಜನಿಕರೂ ಪ್ರಶಸ್ತಿಗೆ ಅರ್ಹರನ್ನು ಸಮಿತಿಗೆ ಸೂಚಿಸಬಹುದು. ನಾನು ಬದ್ಧತೆಯಿಂದ ಕೆಲಸ ಮಾಡುವವನು, ಪ್ರಶಸ್ತಿಗಳ ಆಯ್ಕೆಯೂ ಅದೇ ರೀತಿ ನಡೆಯುತ್ತದೆ ಎಂದರು.

ನಾಡಗೀತೆ ಸಾಲು ಕಡಿತ ಇಲ್ಲ

ನಾಡಗೀತೆ ಮತ್ತು ಭುವನೇಶ್ವರಿ ತಾಯಿಯ ಚಿತ್ರಗಳಿಗೆ ನಿಶ್ಚಿತ ರೂಪ ಕೊಡಲು ನಿರ್ಧರಿಸಲಾಗಿದೆ. ನಾಡಗೀತೆಯ ಸಾಲುಗಳನ್ನು ಕಡಿತಗೊಳಿಸುವುದಿಲ್ಲ, ಆದರೇ ಆಲಾಪನೆ ಇಲ್ಲದೆ, ಹಾಡುವ ಅವಧಿಯನ್ನು ಕಡಿತಗೊಳಿಸಲಾಗುತ್ತದೆ ಎಂದರು. ಕನ್ನಡ ಧ್ವಜದ ಬಗ್ಗೆಯೂ ತಜ್ಞರ ಮಾಹಿತಿ ಪಡೆದು ಸ್ಪಷ್ಟನಿರ್ಧಾರಕ್ಕೆ ಬರಲಾಗುತ್ತದೆ. ಜಯಂತಿ ಆಚರಣೆಗಳು ಸರ್ಕಾರದ ಅಥವಾ ನಿರ್ದಿಷ್ಟಜಾತಿಗಳ ಆಚರಣೆಗಳಾಗದಂತೆ, ಜನರ ಆಚರಣೆಗಳಾಗುವಂತೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ನಾರಾಯಣಗುರುಗಳ ಹೆಸರಲ್ಲಿ ಶೀಘ್ರ ನಿಗಮ: ಸಚಿವ ಸುನೀಲ್‌

ಕನ್ನಡ ಸಂಸ್ಕೃತಿಯ ಕೆಲಸಗಳಿಗಾಗಿ ಕಲಾವಿದರು ಮತ್ತು ಇತರರ ತನ್ನನ್ನು ಹುಡುಕಿಕೊಂಡು ವಿಧಾನಸೌಧಕ್ಕೆ ಬರಬೇಕಾಗಿಲ್ಲ, ತಿಂಗಳೊಂದು ದಿನ ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ, ಕನ್ನಡ ಸಂಸ್ಕೃತಿ ಇಲಾಖೆಯ ಕೆಲಸಗಳಾಗಬೇಕಾದವರು ಅಲ್ಲಿಗೆ ಬಂದು ತಮ್ಮನ್ನು ಭೇಟಿಯಾಗಬಹುದು, ಅಹವಾಲುಗಳನ್ನು ನೀಡಬಹುದು ಎಂದು ಸಚಿವರು ಹೇಳಿದರು.

ಬೆಂಗಳೂರಿನಲ್ಲಿರುತ್ತಿದ್ದ ಇಲಾಖೆಯ 4 ಮಂದಿ ಜಂಟಿ ನಿರ್ದೇಶಕರನ್ನು ರಾಜ್ಯದ 4 ಕಂದಾಯ ವಿಭಾಗಗಳಿಗೆ ಕಳುಹಿಸಿದ್ದು, ಅವರು ಮಾಡಬೇಕಾದ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.

100 ದಿನಗಳ ಟಾರ್ಗೆಟ್‌ ಫಿಕ್ಸ್

ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆಗಳಲ್ಲಿ ಮುಂದಿನ 100 ದಿನಗಳಲ್ಲಿ ಏನೇನು ಯೋಜನೆಗಳು ಆಗಬೇಕಾಗಿದೆ ಎಂಬುದನ್ನು ಗುರುತಿಸಿ, ಅವುಗಳನ್ನು ಪ್ರಕಟಿಸುತ್ತೇನೆ. ಅವುಗಳಲ್ಲಿ ಎರಡೂ ಇಲಾಖೆಯ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ರಾಜ್ಯ ಕಾರ್ಯದರ್ಶಿವರೆಗೆ ಏನೇನೂ ಮಾಡಬೇಕೆಂದು 100 ದಿನಗಳ ಟಾರ್ಗೆಟ್‌ ನೀಡುತ್ತೇನೆ ಎಂದು ಸುನಿಲ್‌ ಕುಮಾರ್‌ ಇದೇ ವೇಳೆ ಹೇಳಿದರು.

ಭ್ರಷ್ಟಾಚಾರ ಸಹಿಸಲ್ಲ-ಸಚಿವ

ಇಂಧನ ಇಲಾಖೆಯನ್ನು ಜನಸ್ನೇಹಿಗೊಳಿಸಲು ಅದಕ್ಕೆ ಹೊಸತನ ತರಬೇಕು. ಅದೇನೆಂದು ಸೆ.10ರ ನಂತರ ತಿಳಿಸುತ್ತೇನೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಇಲಾಖೆಯ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಈ ಹಿಂದೆ ಆಗಿರುವ ತಪ್ಪುಗಳ ಬಗ್ಗೆ ನಾನು ವಿಮರ್ಶೆ ಮಾಡುವುದಿಲ್ಲ. ಆದರೆ ಇನ್ನು ಮುಂದೆ ಅಂಥ ತಪ್ಪುಗಳಾಗಬಾರದು. ಹೊಸ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯಬಾರದು, ನಡೆದರೆ ಅಂತಹವರು ನಿರ್ದಾಕ್ಷಿಣ್ಯ ಕ್ರಮ ಎದುರಿಸಲು ಸಿದ್ಧರಿಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟನಿರ್ದೇಶನ ನೀಡಿದ್ದೇನೆ ಎಂದು ಎಚ್ಚರಿಕೆ ನೀಡಿದರು.

ದತ್ತಪೀಠ ಹೋರಾಟಕ್ಕೆ ಬದ್ಧ

ದತ್ತಪೀಠದ ಹೋರಾಟದಲ್ಲಿ ಆಡಳಿತಾತ್ಮಕ ಮತ್ತು ಭಾವನಾತ್ಮಕ ಎಂಬ 2 ವಿಷಯಗಳಿವೆ. ಅಲ್ಲಿ ರಸ್ತೆ, ಕಚೇರಿ, ಅತಿಥಿಗೃಹ, ಕುಡಿವ ನೀರು ಇತ್ಯಾದಿ ಸೌಕರ್ಯಗಳ ಆಡಳಿತಾತ್ಮಕ ವಿಷಯಗಳು ಬಗೆಹರಿದಿವೆ. ಆದರೆ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆ, ಅನಧಿಕೃತ ಗೋರಿಗಳ ತೆರವಿನಂತಹ ಭಾವನಾತ್ಮಕ ವಿಷಯ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ಆದೇಶಕ್ಕೆ ಕಾಯುತಿದ್ದೇವೆ ಎಂದು ಸುನಿಲ್‌ ಇದೇ ವೇಳೆ ತಿಳಿಸಿದರು.

Follow Us:
Download App:
  • android
  • ios